DK Shivakumar ಡಿಕೆ ಶಿವಕುಮಾರ್ ಸಿಎಂ ಆಗಲು ಶಿವಮೊಗ್ಗದಲ್ಲಿ ವಿಶೇಷ ಪೂಜೆ
DK Shivakumar ಶಿವಮೊಗ್ಗ: ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದು ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಜುಲೈ 24 ರಂದು ಶಿವಮೊಗ್ಗದ ಸರ್ವಸಿದ್ಧಿ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಆಯೋಜಿಸಿದ್ದೇವೆ ಎಂದು ಸಂಘದ ಅಧ್ಯಕ್ಷರಾದ ಆರ್ ಮೋಹನ್ ಹೇಳಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ ಮೋಹನ್ “ಕೆಪಿಸಿಸಿ ಅಧ್ಯಕ್ಷರಾದ ನಂತರ ಡಿ.ಕೆ. ಶಿವಕುಮಾರ್ ಅವರು ರಾಜ್ಯದಾದ್ಯಂತ ಸಂಚರಿಸಿ, ಜಾತಿ, ಮತ, ಧರ್ಮ ಭೇದವಿಲ್ಲದೆ ಪಕ್ಷವನ್ನು ಸಂಘಟಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಅವರ ಪಾತ್ರ ಮಹತ್ವದ್ದಾಗಿದೆ. ಅಧಿಕಾರಕ್ಕೆ ಬಂದ ನಂತರವೂ ತಳಮಟ್ಟದಿಂದ ಪಕ್ಷದ ಸಂಘಟನೆ ಮತ್ತಷ್ಟು ಬಲಗೊಂಡಿದೆ ಎಂದರು.
DK Shivakumar ಪಕ್ಷಕ್ಕಾಗಿ ದುಡಿದ ಹಿರಿಯರಿಗೆ ಮುಖ್ಯಮಂತ್ರಿಯಾಗುವ ಹಂಬಲ ಸಹಜ. ಅದೇ ರೀತಿ, ಡಿ.ಕೆ. ಶಿವಕುಮಾರ್ ಕೂಡ ಸಿಎಂ ಆಗಬೇಕೆಂದು ಪಕ್ಷದ ಕಾರ್ಯಕರ್ತರು, ಹಿತೈಷಿಗಳು, ಅಭಿಮಾನಿಗಳು ಮತ್ತು ನಾಡಿನ ಜನತೆ ಬಯಸುತ್ತಿದ್ದಾರೆ. ಮನುಷ್ಯನಿಗೆ ಉತ್ತಮ ಹಾಗೂ ಉನ್ನತ ಸ್ಥಾನ ಪ್ರಾಪ್ತಿಯಾಗಲು ಕೇವಲ ಯೋಗ್ಯತೆ ಇದ್ದರೆ ಸಾಲದು, ಯೋಗವೂ ಇರಬೇಕು. ‘ಪ್ರಯತ್ನ ವಿಫಲವಾದರೂ ಪ್ರಾರ್ಥನೆ ಎಂದಿಗೂ ವಿಫಲವಾಗುವುದಿಲ್ಲ’ ಎಂಬ ನಾಣ್ಣುಡಿಯಿದೆ. ಹಾಗಾಗಿ ದೇವರ ಪೂಜೆ ಮತ್ತು ಪ್ರಾರ್ಥನೆಯ ಮೂಲಕ ಅವರಿಗೆ ಅಂತಹ ಯೋಗ ಪ್ರಾಪ್ತಿಯಾಗಲಿ ಎಂಬ ಕಾರಣದಿಂದ ಈ ಪೂಜೆಯನ್ನು ಹಮ್ಮಿಕೊಂಡಿದ್ದೇವೆ” ಎಂದು ಮೋಹನ್ ವಿವರಿಸಿದರು.


ಗುರುವಾರ ಬೆಳಿಗ್ಗೆ 10 ಗಂಟೆಗೆ ಶಿವಮೊಗ್ಗದ ಜೆ.ಪಿ.ಎನ್. ರಸ್ತೆಯ ಜ್ಯುವೆಲ್ ರಾಕ್ ಹೋಟೆಲ್ ಬಳಿ ಇರುವ ಸರ್ವಸಿದ್ಧಿ ಗಣಪತಿ ದೇವಸ್ಥಾನದಲ್ಲಿ ಈ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ. ಈ ಪೂಜೆಗಳಲ್ಲಿ ಮೋದಕ ದ್ರವ್ಯದೊಂದಿಗೆ 108 ಕಾಯಿ ಗಣ ಹೋಮ, ರುದ್ರಾಭಿಷೇಕ, ಶತಚಂಡಿ ಪಾರಾಯಣ ಹಾಗೂ ಹೀಡುಗಾಯಿ ಸೇವೆ ಮತ್ತು ಪ್ರಸಾದ ವಿನಿಯೋಗ ಸೇರಿವೆ ಎಂದು ಸಂಘದ ಅಧ್ಯಕ್ಷ ಆರ್. ಮೋಹನ್ ತಿಳಿಸಿದರು.
