ಶಾಹಿ ಎಕ್ಸ್​ಪೋರ್ಟ್ಸ್​ ವಿರುದ್ಧ ಕೇಸ್ ದಾಖಲಿಸಲು ಜಿಲ್ಲಾಧಿಕಾರಿ ಸೂಚನೆ ! ಕಾರಣವೇನು?

Deputy Commissioner instructs to file case against Shahi Exports What is the reason?

ಶಾಹಿ ಎಕ್ಸ್​ಪೋರ್ಟ್ಸ್​ ವಿರುದ್ಧ  ಕೇಸ್ ದಾಖಲಿಸಲು ಜಿಲ್ಲಾಧಿಕಾರಿ ಸೂಚನೆ ! ಕಾರಣವೇನು?

KARNATAKA NEWS/ ONLINE / Malenadu today/ May 31, 2023 SHIVAMOGGA NEWS

ಶಿವಮೊಗ್ಗ/  ಜಿಲ್ಲೆಯ ಕೈಗಾರಿಕಾ ಪ್ರದೇಶಗಳಿಗೆ ಅಗತ್ಯವಿರುವ ನೀರು, ರಸ್ತೆ, ವಿದ್ಯುತ್ ಇತರೆ ಮೂಲಸೌಕರ್ಯಗಳನ್ನು ಒದಗಿಸುವ ಸಂಬಂಧ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ.ಆರ್ ಇಂದು ನಡೆದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ  ಸೂಚನೆಗಳನ್ನು ನೀಡಿದ್ಧಾರೆ. 

ಶಾಹಿ ಎಕ್ಸ್​ಪೋರ್ಟ್ಸ್​ ವಿರುದ್ಧ ಕೇಸ್

ಇದೇ ವೆಳೆ  ನಿದಿಗೆ ಕೈಗಾರಿಕಾ ಪ್ರದೇಶದಲ್ಲಿರುವ ಮೆ|| ಶಾಹಿ  ಎಕ್ಸ್​ಪೋರ್ಸ್​  ಪ್ರೈ.ಲಿ ನಿಂದ ಮಾಲಿನ್ಯ ಉಂಟಾಗುತ್ತಿದ್ದು ಕೈಗಾರಿಕಾ ಪ್ರದೇಶದ ಘಟಕಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಯವರು ಈಗಾಗಲೇ ನೋಟಿಸ್ ನೀಡಿದ್ದಾರೆ. 

ಆದರೂ ಮಾಲಿನ್ಯ ನಿಯಂತ್ರಣವಾಗಿಲ್ಲದ ಕಾರಣ ಅವರ ವಿರುದ್ದ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಮಾಲಿನ್ಯ ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದ್ಧಾರೆ. ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ನಡೆದ 187 ನೇ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ ಹಾಗೂ ಕೈಗಾರಿಕಾ ಸ್ಪಂದನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಯವರು,  ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದಲ್ಲಿ 150 ಪ್ಲಾಟ್‍ಗಳಿದ್ದು, ಇದಕ್ಕೆ ಸರಿಹೊಂದುವಂತೆ ಸಬ್ ಸ್ಟೇಷನ್ ನಿರ್ಮಿಸುವ ಸಂಬಂಧ ಮೆಸ್ಕಾಂ ಅಧಿಕಾರಿಗಳು ಸಮರ್ಪಕವಾಗಿ ಲೈನ್ ಅಸೆಸ್‍ಮೆಂಟ್ ಮಾಡಿ ಒಂದು ವಾರದ ಒಳಗೆ ವರದಿ ನೀಡುವಂತೆ ಸೂಚನೆ ನೀಡಿದರು.

ಎಲೆಕ್ಟ್ರಾನಿಕ್ಸ್​ ತ್ಯಾಜ್ಯವಿಲೇವಾರಿ ಜಾಗ

ನಿಸ್ತೇಜಗೊಂಡ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ವೈಜ್ಞಾನಿಕವಾಗಿ ಇ-ತ್ಯಾಜ್ಯ ನಿರ್ವಹಣೆಗಾಗಿ ಹಾಗೂ ಇ-ಮಾಲಿನ್ಯ ತಡೆಗಾಗಿ ನಗರದ ಹೊರವಲಯದಲ್ಲಿ 5 ಎಕರೆಯಷ್ಟು ಜಮೀನನ್ನು ಗುರುತಿಸಿ, ಅದನ್ನು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘಕ್ಕೆ ಲೀಸ್ ಆಧಾರದಲ್ಲಿ ನೀಡಲು ಕ್ರಮ ಕೈಗೊಳ್ಳುವಂತೆ ಕೆಐಎಡಿಬಿ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದರು.

ಕುಡಿಯುವ ನೀರು ಸರಬರಾಜು

ದೇವಕಾತಿಕೊಪ್ಪದ ಕೈಗಾರಿಕಾ ಪ್ರದೇಶಕ್ಕೆ ಗ್ರಾಮೀಣ ನೀರು ಸರಬರಾಜು ಯೋಜನೆಯ ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ನೀರು ಒದಗಿಸಲು ಯೋಜಿನೆ ರೂಪಿಸಲಾಗಿದ್ದು ಈ ಕುರಿತಾದ ಡಿಪಿಆರ್ ತಾಂತ್ರಿಕ ಪರಿಶೀಲನೆ ಹಂತದಲ್ಲಿದೆ ಎಂದು ತಿಳಿಸಿದರು.

ಜಮೀನು ಹಸ್ತಾಂತರಕ್ಕೆ ಸಮಿತಿ ರಚನೆ 

ಸೋಗಾನೆ ಕೈಗಾರಿಕಾ ಪ್ರದೇಶ ಅಭಿವೃದ್ದಿಪಡಿಸುವ ಸಂಬಂಧ ಅನಧಿಕೃತ ಸಾಗುವಳಿ, ಜಮೀನು ಹಸ್ತಾಂತರ, ಕೋರ್ಟ್ ಪ್ರಕರಣಗಳು ಇತರೆ ಸಮಸ್ಯೆಗಳಿದ್ದು ಇದನ್ನು ಸರಿಪಡಿಸಲು ಎಸಿ, ತಹಶೀಲ್ದಾರ್, ಎಸ್‍ಎಲ್‍ಎಓ, ಕೆಐಎಡಿಬಿ ಅಧಿಕಾರಿ ಇತರರ ಒಂದು ಸಮಿತಿ ರಚಿಸಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು

ಸಭೆಯಲ್ಲಿ   ಜಿಲ್ಲಾ ಪಂಚಾಯತ್ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಪ್ರೊಬೇಷನರಿ ಐಎಎಸ್ ಅಧಿಕಾರಿ ದಲ್ಜೀತ್ ಕುಮಾರ್, ಕೆಐಎಡಿಬಿ ಕಾರ್ಯಪಾಲಕ ಅಭಿಯಂತರ ನಾರಾಯಣ್, ಡಿಐಸಿ ಜಂಟಿ ನಿರ್ದೇಶಕ ಗಣೇಶ್, ಮಹಾನಗರಪಾಲಿಕೆ ಕಾ.ಅಭಿಯಂತರ ನಟೇಶ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್, ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷರು, ಇತರೆ ಅಧಿಕಾರಿಗಳು, ಕೈಗಾರಿಕೋದ್ಯಮಿಗಳು ಹಾಜರಿದ್ದರು.