Caste census ಶಿವಮೊಗ್ಗ: ಜಾತಿ ಗಣತಿಯ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರವು ವೀರಶೈವ ಸಮಾಜವನ್ನು ಛಿದ್ರಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರು ಗಂಭೀರ ಆರೋಪ ಮಾಡಿದ್ದಾರೆ.
ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಜನಗಣತಿಯ ವಿಚಾರದಲ್ಲಿ ಕಾಂಗ್ರೆಸ್ ಹಿಂದೂ ಸಮಾಜವನ್ನು ಒಡೆಯುವ ಹುನ್ನಾರ ನಡೆಸಿದೆ. ಇದರಿಂದಾಗಿ ಹೆಚ್ಚಾಗಿ ಲಿಂಗಾಯತ ಹಾಗೂ ವೀರಶೈವ ಸಮಾಜಗಳಿಗೆ ಅನ್ಯಾಯವಾಗಿ ಅವರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗುತ್ತಿವೆ.ಈ ವರದಿ ಬಿಡುಗಡೆಯಾಗುವ ವೇಳೆಗೆ ಜನರು ನಮ್ಮ ಸಮಾಜ ಸಂಖ್ಯೆ ಕಡಿಮೆ ಬಂದಿದೆ’ ‘ನಮ್ಮ ಸಮಾಜ ಕಡಿಮೆ ಬಂದಿದೆ’ ಎಂದು ಎಂದು ಅನೇಕ ಸಮಾಜದವರು ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಾರೆ. ಆದ್ದರಿಂದ 99 ರಷ್ಟು ಈ ವರದಿ ಬಿಡುಗಡೆಯಾಗುವುದಿಲ್ಲ. ಒಂದು ವೇಳೆ ಬಿಡುಗಡೆಯಾದರೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪದವಿ ಹೋಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾಂತರಾಜು ವರದಿಯನ್ನು ಜಾರಿ ಮಾಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಹೈಕಮಾಂಡ್ ಆದೇಶದ ಮೇರೆಗೆ ಅದನ್ನು ಮುಚ್ಚಿಹಾಕಿದರು ಎಂದು ಈಶ್ವರಪ್ಪ ಟೀಕಿಸಿದರು. ಸೆಪ್ಟೆಂಬರ್ 22 ರಿಂದ ಜಾತಿ ಗಣತಿಗಾಗಿ 420 ಕೋಟಿ ಹಣವನ್ನು ತೆಗೆದಿಡಲಾಗಿದೆ. ಕಾಂತರಾಜು ವರದಿ ಹಳೆಯದೆಂದು ಹೇಳಿ 158 ಕೋಟಿ ಹಣವನ್ನು ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ಅವರು ಸರ್ಕಾರದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

