Shivamogga | Feb 10, 2024 | ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ವಿರುದ್ದ ದಾವಣಗೆರೆಯಲ್ಲಿ ಕೇಸ್ ದಾಖಲಾಗಿದೆ. ಉದ್ರೇಕಕಾರಿ ಭಾಷಣ ಸಂಬಂಧ ದಾವಣಗೆರೆ ಬಡಾವಣೆ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಈ ಸಂಬಂಧ ಇವತ್ತು ಬೆಳಗ್ಗೆಯೇ ದಾವಣಗೆರೆ ಪೊಲೀಸರು ಶಿವಮೊಗ್ಗದ ಮಲ್ಲೇಶ್ವರ ಬಡಾವಣೆಯಲ್ಲಿರುವ ಕೆ.ಎಸ್. ಈಶ್ವರಪ್ಪನವರ ನಿವಾಸಕ್ಕೆ ಆಗಮಿಸಿ, ಪ್ರಕರಣದ ಕುರಿತಾದ ನೋಟಿಸ್ ನೀಡಿದ್ದಾರೆ.
ದಾವಣಗೆರೆಯಲ್ಲಿ ನಡೆದಿದ್ದ ಬಿಜೆಪಿ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದ ಆರೋಪ ಸಂಬಂಧ ಮಾಜಿ ಸಚಿವ ಈಶ್ವರಪ್ಪರಿಗೆ ಈ ನೋಟಿಸ್ ನೀಡಲಾಗಿದೆ. ರಾಷ್ಟ್ರ ದ್ರೋಹಿಗಳ ಗುಂಡಿಕ್ಕಿ ಕೊಲ್ಲುವ ಕಾನೂನು ತರುವಂತೆ ಹೇಳಿಕೆ ನೀಡಿದ್ದ ಈಶ್ವರಪ್ಪರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೆ ಈ ಸಂಬಂಧ ವಿಚಾರಣೆಗಾಗಿ 15 ರಂದು ಸ್ಟೇಷನ್ಗೆ ಆಗಮಿಸುವಂತೆ ಸೂಚಿಸಲಾಗಿದೆ.
ನೋಟಿಸ್ ನಲ್ಲಿ ಏನಿದೆ?
(ಕಲಂ 41 (ಎ) ಸಿ.ಆರ್.ಪಿ.ಸಿ ಅನ್ವಯ ಸಂಜ್ಞೆಯ ಅಪರಾಧ ಪ್ರಕರಣಗಳಲ್ಲಿ)
ನಾನು ಈ ಮೂಲಕ ನಿಮಗೆ ತಿಳಿಯಪಡಿಸುವುದೆನೆಂದರೆ ದಂಡ ಪ್ರಕ್ರಿಯಾ ಸಂಹಿತೆ ಕಲಂ 41(ಎ) ಉಪಕಲಂ (1) ರಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸುತ್ತಾ ಕರ್ನಾಟಕ ರಾಜ್ಯ, ದಾವಣಗೆರೆ ಜಿಲ್ಲೆಯ. ಅಪರಾಧ ಸಂಖ್ಯೆ 19/2024 ಕಲಂ 505(1)(ಸಿ), 505(2), 506 ಐಪಿಸಿ ರೀತ್ಯಾ ದಿನಾಂಕ 09-02-2024 ರಂದು ತಮ್ಮ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ. ಸದರಿ ಕೇಸಿನಲ್ಲಿ ಘಟನೆ ಬಗ್ಗೆ ಕೆಲವು ಸತ್ಯಾಂಶ ಹಾಗೂ ಸನ್ನಿವೇಶಗಳನ್ನು ಖಚಿತ ಪಡಿಸಿಕೊಳ್ಳಬೇಕಾಗಿರುವುದರಿಂದ ಮೇಲ್ಕಂಡ ಪ್ರಕರಣದಲ್ಲಿ ತಮಗೆ ವಿಚಾರಣೆ ಮಾಡಲು ಸಾಕಷ್ಟು ಪೂರಕ ಕಾರಣಗಳು ಕಂಡುಬಂದಿರುತ್ತವೆ. ಆದುದರಿಂದ ತಾವು ಸದರಿ ಕೇಸಿನಲ್ಲಿ ಆರೋಪ ವಿಚಾರಣೆಗಾಗಿ ದಿನಾಂಕ 15-02-2024 ರಂದು ಬೆಳಗ್ಗೆ 10-30 ಗಂಟೆಗೆ ದಾವಣಗೆರೆ, ಬಡಾವಣೆ ಪೊಲೀಸ್ ಠಾಣೆಗೆ ಹಾಜರಾಗಲು ಈ ಮೂಲಕ ತಿಳಿಸಿರುತ್ತದೆ.
ತನಿಖಾಧಿಕಾರಿ : ;ಲತಾ ವಿ ತಾಳಕರ್, ಉಪನಿರೀಕ್ಷಕರು, ಬಡಾವಣೆ ಪೊಲೀಸ್ ಠಾಣೆ, ದಾವಣಗೆರೆ
ಇನ್ನೂ ನೋಟಿಸ್ ಕುರಿತಂತೆ ಮಾತನಾಡಿರುವ ಮಾಜಿ ಡಿಸಿಎಂ ನನ್ನ ಹೇಳಿಕೆಯನ್ನ ಕಾಂಗ್ರೆಸ್ ನಾಯಕರು ತಿರುಚುತ್ತಿದ್ದಾರೆ.
ನಾನು ಡಿ.ಕೆ.ಸುರೇಶ್ ರನ್ನ ಗುಂಡಿಕ್ಕಿ ಕೊಲೆ ಅಂತಾ ಹೇಳಿಲ್ಲ . ಹೊಸ ಕಾನೂನು ತನ್ನಿ ಅಂತಾ ಹೇಳಿದ್ದೀನಿ. ನೋಟೀಸ್ ಗೆ ಕಾನೂನು ಬದ್ಧವಾಗಿ ಹೋರಾಟ ಮಾಡ್ತೇನೆ, ಈಗಾಗಲೇ ಸಾಕಷ್ಟು ಕೇಸ್ ನಲ್ಲಿ ಕ್ಲೀನ್ ಚಿಟ್ ಸಿಕ್ಕಿವೆ , ಈ ಕೇಸ್ ನಲ್ಲೂ ನನಗೆ ಕ್ಲೀನ್ ಚಿಟ್ ಸಿಗುತ್ತದೆ ಎಂದಿದ್ದಾರೆ.
case against Eshwarappa, Davanagere police notice , Shivamogga
