
ಭದ್ರಾವತಿ : ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರನ್ನು ಅಡಿಕೆ ಮರಕ್ಕೆ ಕಟ್ಟಿ ಹಾಕಿ, ಮಚ್ಚಿನಿಂದ ಕೊಚ್ಚಿ ಕೊಲೆಗೆ ಯತ್ನಿಸಿದಘಟನೆಗೆ ಸಂಬಂಧಿಸಿದಂತೆ ಭದ್ರಾವತಿಯ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳಾದ ನಾಗರಾಜ್ ಹೆಚ್. (48) ಮತ್ತು ಶೀಲಾ (32) ಅವರಿಗೆ ತಲಾ 3 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಒಟ್ಟು 80,000 ರೂ. ದಂಡ ವಿಧಿಸಿ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.


Bhadravathi Court ಘಟನೆಯ ಹಿನ್ನೆಲೆ
ಈ ಘಟನೆ ನಡೆದಿದ್ದು 2021ರಲ್ಲಿ. ದೂರುದಾರರಾದ ಬಸವರಾಜ್ ಅವರು ಭದ್ರಾವತಿ ತಾಲೂಕಿನ ಹಿರಿಯೂರು ಗ್ರಾಮದಲ್ಲಿರುವ ತಮ್ಮ ಜಮೀನಿಗೆ ನೀರು ಹಾಯಿಸಲು ಹೋದಾಗ, ಆರೋಪಿಗಳು ಭತ್ತದ ಕೊಯ್ಲು ಮಾಡುತ್ತಿದ್ದರು. ಈ ವೇಳೆ ಹಳೆಯ ಜಮೀನು ವ್ಯಾಜ್ಯವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಆರೋಪಿ ನಾಗರಾಜ್ ಮತ್ತು ಚಿದಾನಂದ ಎಂಬುವವರು ಬಸವರಾಜ್ ಅವರ ಮೇಲೆ ದೊಣ್ಣೆಯಿಂದ ಮನಬಂದಂತೆ ಹಲ್ಲೆ ನಡೆಸಿದ್ದರು. ಅಷ್ಟಕ್ಕೇ ನಿಲ್ಲದ ಇವರು, ಬಸವರಾಜ್ ಅವರ ಕೈಗಳನ್ನು ಹಗ್ಗದಿಂದ ಕಟ್ಟಿ ಹಾಕಿ ಅಡಿಕೆ ಮರಕ್ಕೆ ಒರಗಿಸಿ ಕ್ರೌರ್ಯ ಮೆರೆದಿದ್ದರು.
ಈ ಸಂದರ್ಭದಲ್ಲಿ ಆರೋಪಿ ಶೀಲಾ ಎಂಬಾಕೆ ಮನೆಯಿಂದ ಮಚ್ಚನ್ನು ತಂದುಕೊಟ್ಟಿದ್ದು, ನಾಗರಾಜ್ ಆ ಮಚ್ಚಿನಿಂದ ಬಸವರಾಜ್ ಅವರ ತಲೆ ಮತ್ತು ಮುಖಕ್ಕೆ ಬಲವಾಗಿ ಹಲ್ಲೆ ನಡೆಸಿದ್ದನು. “ಇವತ್ತು ಸತ್ತರೆ ನಮಗೆ ನೆಮ್ಮದಿ” ಎಂದು ಕೂಗಾಡಿದ್ದರು. ರಕ್ತಸಿಕ್ತ ಸ್ಥಿತಿಯಲ್ಲಿದ್ದ ಬಸವರಾಜ್ ಅವರಿಗೆ ಜೀವ ಬೆದರಿಕೆ ಹಾಕಲಾಗಿತ್ತು. ಈ ಕುರಿತು ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಸೇರಿದಂತೆ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿತ್ತು.

ಅಂದಿನ ತನಿಖಾಧಿಕಾರಿಗಳಾಗಿದ್ದ ಪಿಎಸ್ಐ ಶಿಲ್ಪಾ ನಾಯನೇಗಲಿ ಅವರು ಪ್ರಕರಣದ ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ನ್ನು ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಅಭಿಯೋಜಕಿ ರತ್ನಮ್ಮ ಪಿ. ಅವರು ಪ್ರಬಲ ವಾದ ಮಂಡಿಸಿದ್ದರು. ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್, ಆರೋಪಿಗಳ ಮೇಲಿನ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಕಠಿಣ ಶಿಕ್ಷೆ ವಿಧಿಸಿದ್ದಾರೆ. ಒಂದು ವೇಳೆ ದಂಡದ ಮೊತ್ತ ಪಾವತಿಸಲು ವಿಫಲವಾದರೆ ಹೆಚ್ಚುವರಿ 3 ತಿಂಗಳ ಶಿಕ್ಷೆ ಅನುಭವಿಸಬೇಕು ಎಂದು ತೀರ್ಪಿನಲ್ಲಿ ಪ್ರಕಟಿಸಲಾಗಿದೆ.
Bhadravathi Court Sentences Two to 3 Years Jail



