Bhadravathi news ಅವರಿಬ್ಬರೂ ಒಂದೇ ಕಾಲೊನಿಯ ಜೋಡಿ ಹಕ್ಕಿಗಳು. ಪ್ರತಿನಿತ್ಯದ ಕುಡಿಮಿಂಚಿನ ಕಣ್ಣೋಟ ಅವರನ್ನು ಪ್ರೀತಿಯ ಸೆಲೆಯಲ್ಲಿ ಸಿಲುಕಿಸಿತು. ಇನ್ನೇನು ಓಡಿ ಹೋಗಿ ಮದುವೆಯಾದ ಜೋಡಿ ಪೊಲೀಸ್ ಠಾಣೆಯಲ್ಲಿ ರಕ್ಷಣೆ ಕೇಳಿತು. ಬನ್ನಿ ಮಾತುಕತೆ ಮಾಡೋಣ ಎಂದು ಕರೆದ ಯುವತಿಯ ಸಹೋದರ ಮುಂದೆ ಮಾಡಿದ್ದೇ ಘನಘೋರ ಅಪರಾಧ..ಪ್ರೇಮಿಗಳ ಪರ ನಿಂತವರ ಎರಡು ಜೀವಗಳು ಬಲಿಯಾಗಿದ್ದೇ ಇಲ್ಲಿ ದುರಂತ..ಏನಿದು ಭದ್ರಾವತಿಯ ಜೈ ಭೀಮ್ ನಗರದ ರಕ್ತ ಚರಿತ್ರೆ..ಇಲ್ಲಿದೆ ವರದಿ
ಶಿವಮೊಗ್ಗ ನಗರ ಪಾಲಿಕೆಯಲ್ಲಿ ಇ ಸ್ವತ್ತು ವಿತರಣೆ ತಾತ್ಕಾಲಿಕ ಸ್ಥಗಿತ! ಕಾರಣ ಇದೆ! ಪೂರ್ತಿ ವಿವರ ಓದಿ
ಇಷ್ಟು ದಿನ ಓಸಿ ಇಸ್ಪೀಟ್ ನಂತ ದಂಧೆಗಳಿಂದಲೇ ಕುಖ್ಯಾತಿ ಪಡೆದಿದ್ದ ಭದ್ರಾವತಿ ನಗರ, ಈಗ ನೆತ್ತರು ಹರಿಸುವಷ್ಟರ ಮಟ್ಟಿಗೆ ಮತ್ತೆ ದಾಪುಗಾಲಿಟ್ಟಿದೆ. ಭದ್ರಾವತಿಯಲ್ಲಿ ಕಳೆದ ರಾತ್ರಿ ಡಬಲ್ ಮರ್ಡರ್ ಆಗಿದ್ದು, ಜನತೆಯ ನಿದ್ದೆಗೆಡಿಸಿದೆ. ಕಳೆದ ಎರಡು ಮೂರು ದಿನಗಳಿಂದ ಭದ್ರಾವತಿಯ ಜೈ ಭೀಮ್ ಕೇರಿಯಲ್ಲಿ ಕೊತಕೊತ ಕುದಿಯುವ ವಾತಾವರಣ ನಿರ್ಮಾಣವಾಗಿತ್ತು. ಒಂದೇ ಕೇರಿಯ ಇಬ್ಬರು ಪ್ರೇಮಿಗಳು ಮನೆಯನ್ನು ತೊರೆದು ಹೋಗಿದ್ದರು. ಮಗಳು ಎಲ್ಲಿ ಹೋದಳು..ಮಗ ಎತ್ತ ಹೋದ ಎಂದು ಕುಟುಂಬಸ್ಥರು ಆತಂಕಗೊಂಡಿದ್ದರು. ಆದರೆ ಕೆಲವರಿಗೆ ಇಬ್ಬರು ಓಡಿ ಹೋಗಿದ್ದಾರೆ ಎಂಬ ಖಚಿತ ಮಾಹಿತಿ ಇತ್ತು. ಇಲ್ಲಿಂದ ಆರಂಭವಾಗಿದ್ದೇ ದ್ವೇಷ ಪ್ರತಿಕಾರದ ಜ್ವಾಲೆ.ಅದರಲ್ಲೂ ಯುವತಿಯ ಸಹೋದರ ಅಂತೂ ನೆತ್ತರು ಹರಿಸಲು ನಿರ್ಧರಿಸಿಬಿಟ್ಟಿದ್ದ…ಏರಿಯಾದ ಗಂಭೀರ ವಾತಾವರಣ ಅರಿತು ಓಡಿ ಹೋದ ಪ್ರೇಮಿಗಳು ಪೊಲೀಸ್ ಠಾಣೆಗೆ ಬಂದು ರಕ್ಷಣೆ ಕೋರಿದ ನಂತರ ನಡೆದಿದ್ದೆಲ್ಲಾ ಒಂದು ದುರಂತ ಸನ್ನಿವೇಶವೇ ಸರಿ.

Bhadravathi news ಘಟನೆ ಹಿನ್ನಲೆ
ಭದ್ರಾವತಿಯ ಜೈ ಭೀಮ್ ನಗರದ ಒಂದೇ ಕೇರಿಯಲ್ಲಿದ್ದ ನಂದೀಶ್ ಮತ್ತು ಶೃತಿ ಪರಸ್ಪರ ಎರಡು ವರ್ಷದಿಂದ ಪ್ರೀತಿಸುತ್ತಿದ್ದರು. ಶೃತಿ ಮೂಲತಃ ಚೆನ್ನಪಟ್ಟಣದವರಾಗಿದ್ದು, ಭದ್ರಾವತಿಗೆ ಡಿಗ್ರಿ ವ್ಯಾಸಂಗ ಮಾಡಲು ಬಂದಿದ್ದಳು. ಓದಿಕೊಂಡೇ ಮೆಡಿಕಲ್ ಶಾಪ್ ಒಂದರಲ್ಲಿ ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದ ಶೃತಿಗೆ ಅದೇ ಕೇರಿಯ ನಂದೀಶ್ ಜೊತೆ ಸ್ನೇಹವಾಗುತ್ತದೆ. ನಂದೀಶ್ ವೃತ್ತಿಯಲ್ಲಿ ಪೇಂಟರ್ ಆಗಿದ್ದರೂ, ಪಾರ್ಟ್ ಟೈಂ ಪೌರ ಕಾರ್ಮಿಕನಾಗಿಯೂ ಕೆಲಸ ಮಾಡುತ್ತಿದ್ದ. ಇವರಿಬ್ಬರ ಪ್ರೇಮಕ್ಕೆ ಕುಟುಂಬದವರ ವಿರೋಧವಿತ್ತು. ಹೀಗಾಗಿ ಕಳೆದ ಮೂರು ದಿನದ ಹಿಂದೆ ನಂದೀಶ್ ಮತ್ತು ಶೃತಿ ಇಬ್ಬರು ಓಡಿ ಹೋಗಿ ಮದುವೆಯಾಗಿದ್ದರು. ಮದುವೆಯ ನಂತರ ಜೈ ಭೀಮ್ ನಗರದ ಏರಿಯದಲ್ಲಿ ಎರಡು ಕುಟುಂಬಗಳ ನಡುವೆ ಬಿರುಸಿನ ಮಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ನಂದೀಶ್ ಮತ್ತು ಶೃತಿ ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡುತ್ತಾರೆ. ಈ ಸಂದರ್ಭದಲ್ಲಿ ಶೃತಿ ನಾನು ತವರು ಮನೆಗೆ ಹೋಗುವುದಿಲ್ಲ. ಗಂಡನ ಮನೆಗೆ ಹೋಗುತ್ತೇನೆ ಎಂದು ಪಟ್ಟು ಹಿಡಿದಾಗ ಶೃತಿ ಸಹೋದರ ಭರತ್ ಕೆರಳಿ ಕೆಂಡವಾಗುತ್ತಾನೆ.
Bhadravathi news ಪೌರ ಕಾರ್ಮಿಕ ಸಂಘದ ಅಧ್ಯಕ್ಷ ಜಗಳ ಬಿಡಿಸಲು ಹೋಗಿದ್ದೇ ತಪ್ಪಾಯ್ತಾ?
ಯಾವಾಗ ಶೃತಿ ತವರು ಮನೆಗೆ ಹೋಗಲು ಒಪ್ಪದಿರುವ ವಿಚಾರ ಗೊತ್ತಾಗುತ್ತಿದ್ದಂತೆ ಸಹೋದರ ಭರತ್ ರೊಚ್ಚಿಗೇಳುತ್ತಾನೆ. ಇದಕ್ಕೆಲ್ಲಾ ಕಾರಣ ಸುರೇಶ ಅಂತಾ ಭರತ್ ಮತ್ತು ಸ್ನೇಹಿತರು ತಿಳಿದಿದ್ದರು. ಆದರೆ ಅಲ್ಲಿ ಆಗಿದ್ದೇ ಬೇರೆ. ಆಗ ತಾನೆ ಪೆಂಟಿಂಗ್ ಕೆಲಸ ಮುಗಿಸಿಕೊಂಡು ಮನೆಗೆ ಬಂದು ಟೀ ಕುಡಿದಿದ್ದ ಕಿರಣ್ ಸ್ನೇಹಿತರನ್ನ ನೋಡಲು ಬಂದಿದ್ದ. ಅದೇ ಸಂದರ್ಭದಲ್ಲಿಯೇ ಭರತ್ ಮತ್ತು ಸ್ನೇಹಿತರು ನಂದೀಶ್ ಮನೆಯವರ ಮೇಲೆ ಜಗಳ ತೆಗೆದಿದ್ದರು.
Bhadravathi news ಪೌರ ಕಾರ್ಮಿಕ ಸಂಘದ ಅಧ್ಯಕ್ಷ ರಾಗಿದ್ದ ಮಂಜುನಾಥ್ ಸಂಧಾನದ ಮಾತುಕತೆಗೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಭರತ್ ಮತ್ತು ಸ್ನೇಹಿತರು ತಗಾದೆ ತೆಗೆದು ಸುರೇಶ್ ನ ಮೇಲೆ ಹಲ್ಲೆಗೆ ಮುಂದಾದಾಗಿದ್ದಾರೆ,ಗಲಾಟೆ ತಡೆಯಲು ಹೋದ ಮಂಜುನಾಥ್ ಹಾಗು ಕಿರಣ್ ಮೇಲೆ ಭರತ್ ಮತ್ತು ಸ್ನೇಹಿತರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಸುರೇಶ್, ಮಂಜುನಾಥ್ ಮತ್ತು ಕಿರಣ್ ಗೆ ಗಂಭೀರ ಗಾಯಗಳಾಗಿವೆ. ತೀವ್ರವಾಗಿ ಗಾಯಗೊಂಡ, ಮಂಜುನಾಥ್ ಮತ್ತು ಕಿರಣ್ ಸಾವನ್ನಪ್ಪಿದ್ದಾರೆ. ಈ ಘಟನೆಗೆ ಹಳೆಯ ದ್ವೇಷ ಕೂಡ ಥಳಕು ಹಾಕಿಕೊಂಡಿದೆ ಎಂಬುದು ಮೃತ ಕಿರಣ್ ಕುಟುಂಬಸ್ಥರ ಗಂಭೀರ ಆರೋಪವಾಗಿದೆ.

ಸಧ್ಯಕ್ಕೆ ಜೈ ಭೀಮ್ ನಗರದಲ್ಲಿ ಪರಿಸ್ಥಿತಿ ಶಾಂತವಾಗಿದೆ. ಭರತ್ ಸೇರಿದಂತೆ ಐವರು ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರೀತಿಸಿ ಮದುವೆಯಾದ ನಂದೀಶ್ ಮತ್ತು ಶೃತಿ ಬದುಕು ಚೆನ್ನಾಗಿರಲಿ ಎಂದು ಗಲಾಟೆ ತಡೆಯಲು ಹೋದ ಎರಡು ಜೀವಗಳು ಬಲಿಯಾಗಿವೆ. ಅಮಾಯಕರಿಬ್ಬರ ಸಾವಿಗೆ ಕೇರಿಯ ಜನರು ಕಂಬನಿ ಮಿಡಿದಿದ್ದಾರೆ.

