ಶಿವಮೊಗ್ಗ: ಕೇಂದ್ರ ಕಾರಾಗೃಹದಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟಕ್ಕೆ ಯತ್ನಿಸಿದ ಎರಡು ಪ್ರತ್ಯೇಕ ಘಟನೆಗಳು ಕಳೆದ ವಾರ ವರದಿಯಾಗಿದ್ದು, ಈ ಸಂಬಂಧ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎಫ್ಐಆರ್ಗಳು ದಾಖಲಾಗಿವೆ. ಒಂದು ಪ್ರಕರಣದಲ್ಲಿ ಆಟೋ ಚಾಲಕ ಬಾಳೆಗೊನೆಯ ದಿಂಡಿನೊಳಗೆ ಗಾಂಜಾ ಸಾಗಿಸಲು ಪ್ರಯತ್ನಿಸಿದ್ದರೆ, ಇನ್ನೊಂದು ಘಟನೆಯಲ್ಲಿ ಜೈಲಿನ ಅಧಿಕಾರಿಯೇ ತನ್ನ ಒಳಉಡುಪಿನಲ್ಲಿ ಗಾಂಜಾ ಒಯ್ಯುವಾಗ ಸಿಕ್ಕಿಬಿದ್ದಿದ್ದಾರೆ.
ಶಿವಮೊಗ್ಗದಲ್ಲಿಯೇ ತೆರೆಯಲಿದೆ ಕಂಠೀರವ ಸ್ಟುಡಿಯೋ! ಬೇಗ ಬರಲಿದೆ ಸರ್ಕಾರಿ OTT, ಫಿಲ್ಮ್ ಸಿಟಿ
Shivamogga Jail ಬಾಳೆ ದಿಂಡಿನೊಳಗೆ ಗಾಂಜಾ ಸಾಗಾಟ ಪ್ರಕರಣ : ಎಫ್ಐಆರ್ನಲ್ಲಿ ಏನಿದೆ
ನವೆಂಬರ್ 19, 2025 ರಂದು ಮಧ್ಯಾಹ್ನ ಸುಮಾರು 2:15 ಗಂಟೆಗೆ ಕಪ್ಪು ಬಣ್ಣದ ಪ್ರಯಾಣಿಕರ ಆಟೋವೊಂದು 5 ಬಾಳೆಗೊನೆಗಳನ್ನು ಕೇಂದ್ರ ಕಾರಾಗೃಹದ ಮುಂಭಾಗಕ್ಕೆ ತಂದಿತ್ತು. ಆಟೋ ಚಾಲಕನು ಕ್ಯಾಂಟೀನ್ ಉಸ್ತುವಾರಿಯವರ ಸೂಚನೆ ಮೇರೆಗೆ ತಂದಿರುವುದಾಗಿ ತಿಳಿಸಿ, ಬಾಳೆಗೊನೆಗಳನ್ನು ಇಟ್ಟು ತೆರಳಿದ್ದಾನೆ. ನಂತರ, ಕಾರಾಗೃಹದ ಮುಖ್ಯ ದ್ವಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಎಸ್.ಐ.ಎಸ್.ಎಫ್. (KSISF) ಸಿಬ್ಬಂದಿಗಳಾದ ಪ್ರವೀಣ್ ಮತ್ತು ನಿರೂಪಬಾಯಿ ರವರು ಪಾಳಿ ಉಸ್ತುವಾರಿ ಅಧಿಕಾರಿಯಾದ ಪ್ರೊ. ಪಿ.ಎಸ್.ಐ. ಪ್ರಭು ಎಸ್. ಅವರ ಸಮ್ಮುಖದಲ್ಲಿ ಈ ಬಾಳೆಗೊನೆಗಳನ್ನು ಎಕ್ಸ್-ರೇ ಬ್ಯಾಗೇಜ್ ಸ್ಕ್ಯಾನರ್ನಲ್ಲಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಬಾಳೆಗೊನೆಯ ದಿಂಡಿನೊಳಗೆ ಸಂಶಯಾಸ್ಪದ ವಸ್ತುಗಳು ಇರುವುದು ಕಂಡುಬಂದಿದೆ.

ನಂತರ ಬಾಳೆದಿಂಡನ್ನು ಕೊರೆದು ಅದರೊಳಗೆ ಕಪ್ಪು ಗಮ್ ಟೇಪ್ನಲ್ಲಿ ಸುತ್ತಿದ 5 ವಸ್ತುಗಳು ಪತ್ತೆಯಾಗಿವೆ. ಅವುಗಳನ್ನು ತೆರೆದು ನೋಡಿದಾಗ ನಿಷೇಧಿತ ವಸ್ತುವಾದ ಗಾಂಜಾ (4 ಪ್ಯಾಕೆಟ್ಗಳು) ಮತ್ತು ಸಿಗರೇಟ್ಗಳು (1 ಪ್ಯಾಕೆಟ್) ಕಂಡುಬಂದಿವೆ. ಈ ಸಂಬಂಧ ಗಾಂಜಾ ಮತ್ತು ಸಿಗರೇಟ್ಗಳನ್ನು ಅಕ್ರಮವಾಗಿ ಸಾಗಿಸಲು ಪ್ರಯತ್ನಿಸಿದ ಆಟೋ ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೆ.ಎಸ್.ಐ.ಎಸ್.ಎಫ್ ಪೊಲೀಸ್ ಇನ್ಸ್ಪೆಕ್ಟರ್ ದುರನ್ನು ನೀಡಿದ್ದಾರೆ.

Shivamogga Jail ಒಳ ಉಡುಪಿನಲ್ಲಿ ಗಾಂಜಾ ಸಾಗಣೆ : ಎಫ್ಐಆರ್ನಲ್ಲಿ ಏನಿದೆ
ನವೆಂಬರ್ 20, 2025 ರಂದು ಬೆಳಗ್ಗೆ ಸುಮಾರು 10:20 ರಂದು ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಎಸ್.ಡಿ.ಎ (Senior Division Assistant) ಆಗಿ ಕಾರ್ಯನಿರ್ವಹಿಸುತ್ತಿದ್ದ ಸಾತ್ವಿಕ್ ಮನೋಹರ ಅರಕೇರಿ ಅವರು ಕರ್ತವ್ಯಕ್ಕೆ ಹಾಜರಾಗಲು ಬಂದಿದ್ದರು.ಈ ವೇಳೆ ‘ಬಿ’ ಪಾಳಿಯ ಆಕ್ಸೆಸ್ ಕಂಟ್ರೋಲ್ನಲ್ಲಿ ಕರ್ತವ್ಯನಿರತ ಸಿಬ್ಬಂದಿ ಕುರ ಬಸವರಾಜು (ಪಿ.ಸಿ. 895) ರವರು ಸಾತ್ವಿಕ್ ಮನೋಹರ ಅರಕೇರಿ ಅವರನ್ನು ತಪಾಸಣೆ ನಡೆಸುವ ಸಂದರ್ಭದಲ್ಲಿ, ಅವರ ಒಳ ಉಡುಪಿನಲ್ಲಿ ಸಂಶಯಾಸ್ಪದ ವಸ್ತು ಇರುವುದನ್ನು ಗಮನಿಸಿದ್ದಾರೆ. ಕೂಡಲೇ ಈ ವಿಷಯವನ್ನು ‘ಎ’ ಪಾಳಿಯ ಉಸ್ತುವಾರಿ ಅಧಿಕಾರಿಯಾದ ಪ್ರೊಬೆಷನರಿ ಪಿ.ಎಸ್.ಐ ಪ್ರಭು ಎಸ್. ಅವರಿಗೆ ತಿಳಿಸಲಾಗಿದೆ.

ಅಧಿಕಾರಿಯನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಿದಾಗ, ಅವರ ಒಳಉಡುಪಿನಲ್ಲಿದ್ದ ಕಪ್ಪು ಗಮ್ ಟೇಪ್ನಲ್ಲಿ ಸುತ್ತಿದ ಒಂದು ವಸ್ತುವಿನಲ್ಲಿ ನಿಷೇಧಿತ ವಸ್ತುವಾದ ಗಾಂಜಾ ಪತ್ತೆಯಾಗಿದೆ. ವಿಚಾರಣೆ ನಡೆಸಿದಾಗ, ಅವರು ಅಕ್ರಮವಾಗಿ ಕಾರಾಗೃಹದೊಳಗೆ ಗಾಂಜಾ ತೆಗೆದುಕೊಂಡು ಹೋಗುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಈ ಕುರಿತು ಕೆ.ಎಸ್.ಐ.ಎಸ್.ಎಫ್. ಪೊಲೀಸ್ ಇನ್ಸ್ಪೆಕ್ಟರ್ ಅವರು ಎಸ್.ಡಿ.ಎ ಅಧಿಕಾರಿಯ ವಿರುದ್ಧ ದೂರನ್ನು ನೀಡಿದ್ದಾರೆ
ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ, ಅಕ್ರಮವಾಗಿ ಗಾಂಜಾ ಸಾಗಾಟಕ್ಕೆ ಯತ್ನಿಸಿದ ಆಟೋ ಚಾಲಕ ಮತ್ತು ಎಸ್.ಡಿ.ಎ. ಅಧಿಕಾರಿ ಸಾತ್ವಿಕ್ ಮನೋಹರ ಅರಕೇರಿ ಅವರ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.


