SHIVAMOGGA | MALENADUTODAY NEWS | ಮಲೆನಾಡು ಟುಡೆ | Nov 30, 2024
ಶಿವಮೊಗ್ಗದಲ್ಲಿನಿರ್ಮಾಣ ಆಗಲಿರುವ ಕನಕಭವನದ ಶಂಕುಸ್ಥಾಪನೆಗಾಗಿ ಬಂದಿದ್ದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಮ್ಮ ಕಾರ್ಯಕ್ರಮ ಮುಗಿಸಿಕೊಂಡು ಸೀದಾ ಶಿವಮೊಗ್ಗ ಮಹಾನಗರ ಪಾಲಿಕೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿದರು. ಈ ವೇಳೆ ಪಾಲಿಕೆಯ ಅವ್ಯವಸ್ಥೆಯು ಸಚಿವರ ಮುಂದೆ ಅನಾವರಣಗೊಂಡಿತು.
ಪಾಲಿಕೆಯಲ್ಲಿ ದೂರು ಸ್ವೀಕೃತಿ ವಿಭಾಗಕ್ಕೆ ಭೇಟಿಕೊಟ್ಟ ಸಚಿವ ಭೈರತಿ ಸುರೇಶ್, ಅಲ್ಲಿದ್ದ ರಿಜಿಸ್ಟರ್ನ್ನ ಪರಿಶೀಲಿಸಿದರು. ದಾಖಲಾದ ದೂರುಗಳ ವಿವರಗಳನ್ನ ಪರಿಶೀಲಿಸಿದ ಸಚಿವರು, ಆ ಪೈಕಿ ರಿಜಿಸ್ಟ್ನಲ್ಲಿ ದಾಖಲಿಸಿದ್ದ ಫೋನ್ ನಂಬರ್ವೊಂದನ್ನು, ಆಯ್ಕೆ ಮಾಡಿ ಅವರಿಗೆ ಫೋನಾಯಿಸಿದರು.

ದೂರುದಾರರ ಬಳಿಯಲ್ಲಿ ನಾನು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮಾತನಾಡುತ್ತಿದ್ದೇನೆ, ಶಿವಮೊಗ್ಗ ಮಹಾನಗರ ಪಾಲಿಕೆಗೆ ವಿಸಿಟ್ ಮಾಡಿದ್ದೆ, ಇಲ್ಲಿ ನಿಮ್ಮದೊಂದು ದೂರು ದಾಖಲು ಮಾಡಿದ್ದೀರಿ, ಅದಕ್ಕೆ ಪಾಲಿಕೆಯಿಂದ ಪರಿಹಾರ ದೊರಕಿತೆ ಎಂದು ಪ್ರಶ್ನಿಸಿದರು.
ಅತ್ತ ಸಚಿವರ ಮಾತನ್ನ ಆಲಿಸಿದ ದೂರುದಾರರು ಚರಂಡಿ ಸ್ವಚ್ಚಗೊಳಿಸುವ ಸಂಬಂಧ ದೂರು ದಾಖಲಿಸಿದ್ದೆ. ಆದರೆ ಇದುವರೆಗೂ ಯಾರೊಬ್ಬರು ಸಮಸ್ಯೆಯನ್ನು ಬಗೆಹರಿಸಿಲ್ಲ ಎಂದರು.
ದೂರುದಾರರ ಬಳಿ ಮಾಹಿತಿ ತಿಳಿದ ಸಚಿವರು, ರಿಜಿಸ್ಟರ್ನಲ್ಲಿ ದೂರು ದಾಖಲಾದ ದಿನಾಂಕವನ್ನು ನೋಡಿ ಇಪ್ಪತ್ತು ದಿನ ಕಳೆದರೂ ಚರಂಡಿ ಕ್ಲೀನ್ ಮಾಡಿಸಲು ಆಗಲ್ವೇನ್ರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಯಾರದು? ಆರೋಗ್ಯ ನಿರೀಕ್ಷಿಕ ಅವರನ್ನ ಸಸ್ಪೆಂಡ್ ಮಾಡಿ ಎಂದು ಸ್ಥಳದಲ್ಲಿಯೇ ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್ಗೆ ಸೂಚಿಸಿದರು. ಮೇಲಾಗಿ ಆರೋಗ್ಯ ನಿರೀಕ್ಷರನ್ನು ಅಮಾನತ್ತು ಮಾಡಿದ ಪ್ರತಿಯನ್ನ ನನಗೆ ವಾಟ್ಸಾಪ್ ಮಾಡಬೇಕು ಎಂದು ತಿಳಿಸಿದರು.
ಅಲ್ಲದೆ ಈ ರೀತಿಯಲ್ಲಿ ಯಾರ್ಯಾರು ದಾಖಲಾದ ದೂರಿನ ಸಂಬಂಧ ಕ್ರಮ ಕೈಗೊಂಡಿಲ್ಲ ಅವರನ್ನೆಲ್ಲಾ ಸಸ್ಪೆಂಡ್ ಮಾಡಬೇಕು, ನಾನು ಮತ್ತೊಮ್ಮೆ ಬರುತ್ತೇನೆ. ಈ ರಿಜಿಸ್ಟರ್ನ್ನ ಪರಿಶೀಲನೆ ನಡೆಸ್ತೇನೆ, ಸುಮ್ಮನೆ ಲೆಡ್ಜರ್ ಮೇಂಟೇನ್ ಮಾಡಿ, ಸುಳ್ಳು ಹೇಳೋದಲ್ಲ, ಕೆಲಸ ಆಗಬೇಕು ಎಂದು ಆಯುಕ್ತರಿಗೆ ಸೂಚಿಸಿದರು.
ಶಿವಮೊಗ್ಗ ಮಹಾನಗರ ಪಾಲಿಕೆಗೆ ಸಚಿವ ಬೈರತಿ ಸುರೇಶ್ರವರು ದಿಢೀರ್ ಭೇಟಿಕೊಟ್ಟು, 20 ದಿನವಾದರೂ ಸಮಸ್ಯೆ ಸರಿಪಡಿಸದ ಅಧಿಕಾರಿಯನ್ನು ಸಸ್ಪೆಂಡ್ ಮಾಡುವಂತೆ ಸೂಚಿಸಿದರು. #shivamogga #bairatisuresh pic.twitter.com/VGIKXjvn1m
— Prathap Prathap shetty (@Prathap68840568) November 30, 2024
ರಸ್ತೆ ಗುಂಡಿ ಮುಚ್ಚಿಸಿ
ಸಚಿವರ ಈ ದಿಢೀರ್ ಆಕ್ಷನ್ ನೋಡಿದ ಅಧಿಕಾರಿಗಳು ಬೆಚ್ಚಿಬಿದ್ದರೆ, ಇತ್ತ ಸಚಿವರ ಕ್ರಮವನ್ನ ಕಂಡು ಇನ್ನಷ್ಟು ದೂರುಗಳನ್ನು ಅವರ ಎದುರಲ್ಲಿಯೇ ತೋಡಿಕೊಂಡರು. ಸಚಿವರ ಎದುರು ರಸ್ತೆಗುಂಡಿ ಬಗ್ಗೆ ದೂರು ಹೇಳಿದ ಸಾರ್ವಜನಿಕರೊಬ್ಬರು, ಶಿವಮೊಗ್ಗದ ಎಲ್ಲಾ ರಸ್ತೆಗಳಲ್ಲಿಯು ಗುಂಡಿ ಬಿದ್ದಿದೆ. ಆದರೆ ಯಾವೊಂದು ಗುಂಡಿಯನ್ನು ಮುಚ್ಚಿಲ್ಲ ಎಂದರು. ಅಲ್ಲದೆ ಪಾಲಿಕೆ ಕಮಿಷನರ್ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, 200 ಕೋಟಿ ರೂಪಾಯಿಯನ್ನ ಕಾರ್ಪೊರೇಷನ್ಗೆ ನೀಡಲಾಗಿದೆ. ಮಳೆಗಾಲ ಮುಗಿದಿದ್ದು, ಇನ್ನಷ್ಟೆ ಕೆಲಸ ಆರಂಭಿಸಲಾಗುತ್ತದೆ. ಅಲ್ಲದೆ ಎಲ್ಲಾ ಕಡೆಗಳಲ್ಲಿ ಹೊಸ ರಸ್ತೆ ಮಾಡಲಾಗುವುದು ಎಂದರು.
ಆಯುಕ್ತರು ಕೆಲಸ ಮಾಡುತ್ತಾರೆ
ಇದೇ ವೇಳೆ ಸಾರ್ವಜನಿಕರೊಬ್ಬರು ಪಾಲಿಕೆಯ ಮಳಿಗೆಗಳನ್ನ ಹಂಚಿಕೆ ಮಾಡಿಲ್ಲ ಎನ್ನುತ್ತ ಕಮಿಷನರ್ ಸರಿಯಿಲ್ಲ ಎಂದರು. ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಸಚಿವರು, ಕಮಿಷನರ್ ಶಿವಮೊಗ್ಗಕ್ಕೆ ಬಂದು, ಇನ್ನೂ ಮೂರು ತಿಂಗಳಾಗಿದೆಯಷ್ಟೆ ಎಂದರು. ಅಲ್ಲದೆ ಏನಾಗಬೇಕು ಎಂದು ಹೇಳಿ, ಜೋರು ಧ್ವನಿಯಲ್ಲಿ ಮಹಿಳಾ ಅಧಿಕಾರಿಗಳ ವಿರುದ್ಧ ಮಾತನಾಡಬೇಡಿ ಎಂದು ದೂರು ಹೇಳಿದ ವ್ಯಕ್ತಿಗೆ ಸಲಹೆ ನೀಡಿದರು.
ಇದರ ನಡುವೆಯು ದೂರು ಹೇಳಿದ ವ್ಯಕ್ತಿ ಆಯುಕ್ತರ ಜೊತೆ ಗಟ್ಟಿ ಧ್ವನಿಯಲ್ಲಿ ಮಾತನಾಡಿದರು. ಆಗ ಅಡ್ಡಬಂದ ಸಚಿವರು ಹಾಗಲ್ಲ ಹೆಣ್ಣುಮಕ್ಕಳ ಜೊತೆ ನಡೆದುಕೊಳ್ಳಬಾರದು. ನಿಮಗೆ ಏನಾಗಬೇಕಿದೆ ಎಂಬುದರ ಬಗ್ಗೆ ಒಂದು ಮನವಿ ಕೊಡಿ ಎಂದು ಸೂಚಿಸಿದರು.
ಲಮ್ಸಮ್ನಲ್ಲಿ ಎಲ್ಲರನ್ನೂ ಆಚೆ ಕಳಸ್ತಿನಿ
ಸಾರ್ವಜನಿಕರ ಅಹವಾಲು ಕೇಳಿ ಹೊರಬಂದ ಸಚಿವ ಬೈರತಿ ಸುರೇಶ್ ಆಯುಕ್ತರಿಗೆ ನೋಡಿ ಮೇಡಂ ನಾನು ಇನ್ನೊಮ್ಮೆ ಬರುತ್ತೇನೆ. ಮೊದಲೇ ಹೇಳಿಕೊಂಡು ಬಂದರೆ ಅಲರ್ಟ್ ಆಗುತ್ತಾರೆ ಅಂತಾ ನಾನು ಹೇಳದೇ ಬಂದಿದ್ದೇನೆ, ಮತ್ತೊಮ್ಮೆ ಇಲ್ಲಿಗೆ ಬರುವರಷ್ಟರಲ್ಲಿ ಸಮಸ್ಯೆಗಳು ಬಗೆಹರಿಸಬೇಕು. ಹಾಗೊಂದು ವೇಳೆ ಸಮಸ್ಯೆಗಳನ್ನ ಬಗೆಹರಿಸಿದೇ ಇದ್ದರೆ, ಲಮ್ಸಮ್ ಆಗಿ ಎಲ್ಲರನ್ನೂ ಆಚೆ ಕಳುಹಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಕೃಷ್ಣಮೂರ್ತಿ ಎಂಬವರ ಖಾತೆ ವಿಚಾರ ಏನಾಯ್ತು ಎಂದು ಸ್ಥಳದಲ್ಲಿಯೇ ವಿಚಾರಿಸಿದ ಸಚಿವರಿಗೆ ಸರ್ವರ್ ಡೌನ್ ಎಂಬ ಉತ್ತರ ಬಂತು. ಇದರಿಂದ ಮತ್ತಷ್ಟು ಸಿಟ್ಟಾದ ಸಚಿವರು, ಆರ್ ಒ ರವರಿಗೆ ಯಾಕ್ರಿ ಸರ್ವರ್ ಇಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಅಧಿಕಾರಿ ಸಭೆಗೆ ಹೋಗಿದ್ದೆ ಎಂದು ಉತ್ತರಿಸಿದರು. ಅಲ್ಲಾರಿ ಅವರು ಅರ್ಜಿ ಕೊಟ್ಟು ಎಷ್ಟು ದಿನವಾಯ್ತು ಮೂರು ತಿಂಗಳಾದರೂ ಅವರ ಖಾತೆ ಆಗಿಲ್ಲ ಎಂದರೇ ಏನು? ಮೂರು ತಿಂಗಳಾದರೂ ಸರ್ವರ್ ಇಲ್ವಾ? ಸರ್ವರ್ ಸರಿ ಮಾಡಿಸಿ ಬೇಗ, ಅವರಿಗೆ ಖಾತೆ ಕೊಟ್ಟಿಲ್ಲ ಎಂದರೇ? ನಿಮ್ಮನ್ನು ಸಹ ಸಸ್ಪೆಂಡ್ ಮಾಡುತ್ತೇನೆ ಎಂದರು. ಜೊತೆಯಲ್ಲಿ ಹಕ್ಕು ಪತ್ರ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ವಾರದಲ್ಲಿ ಕೆಲಸ ಮುಗಿಸಿಕೊಡಿ, ನೀವು ಯಂಗ್ ಆಂಡ್ ಯನರ್ಜೆಟಿಕ್ ಆಫಿಸರ್ ಆಗಿದ್ದೀರಿ, ಚೆನ್ನಾಗಿ ಕೆಲಸ ಮಾಡಿ ಎಂದು ಸೂಚಿಸಿದರು. ಬಳಿಕ ದೂರುದಾರರಿಗೆ ತಮ್ಮ ವಿಸಿಟಿಂಗ್ ಕಾರ್ಡ್ ತೆಗೆದುಕೊಳ್ಳಿ ವಾರದೊಳಗೆ ಕೆಲಸ ಆಗದಿದ್ದ ಪಕ್ಷದಲ್ಲಿ ತಮಗೆ ಕರೆ ಮಾಡಿ ತಿಳಿಸಿ ಎಂದರು
ಇದೇ ಹೊತ್ತಿನಲ್ಲಿ ಸಚಿವರ ಬಳಿ ತಮ್ಮನ್ನ ಪರಿಚಯ ಮಾಡಿಕೊಂಡ ಮಾಜಿ ಕಾರ್ಪೊರೇಟರ್ ರಮೇಶ್ ಹೆಗ್ಡೆಗೆಯವರಿಗೆ ತಕ್ಷಣವೇ ಸಚಿವರು ಅಧ್ಯಕ್ಷರೇ ಹೇಳಿ ಎಂದರು. ಈ ವೇಳೆ ರಮೇಶ್ ಹೆಗ್ಡೆಯವರು. ಸಮಸ್ಯೆಯೊಂದನ್ನ ಸಚಿವರ ಗಮನಕ್ಕೆ ತಂದರು. ಗಂಡನ ಹೆಸರಲ್ಲಿ ಆಗಿರುವ ಪೌತಿ ಖಾತೆಯನ್ನು ಅವರ ಮರಣದ ನಂತರ ಹೆಂಡತಿಗೆ ಮಾಡಿಕೊಡುವಂತೆ ಹೇಳಿದರೂ ಆಗುತ್ತಿಲ್ಲ ಎಂದು ರಮೇಶ್ ಹೆಗ್ಡೆಯವರು ಸಮಸ್ಯೆ ಹೇಳಿದರು. ತಕ್ಷಣವೇ ಸಚಿವರು ಬೇಗ ಖಾತೆ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಮಾತನಾಡಿದ ಸಚಿವರು, ಚರಂಡಿ ಬ್ಲ್ಯಾಕ್ ಆಗಿರುವ ಸಮಸ್ಯೆಯನ್ನು ಆಲಿಸದ ಆರೋಗ್ಯ ನಿರೀಕ್ಷಿಕ ವೇಣುಗೋಪಾಲ್ರವರನ್ನು ಸಸ್ಪೆಂಡ್ ಮಾಡುವಂತೆ ತಿಳಿಸಿದ್ದೇನೆ. ಅಲ್ಲದೆ ಖಾತೆ ಕೊಡದೇ ಕಾರಣ ಹೇಳಿದವರಿಗೆ ಅಮಾನತ್ತು ಮಾಡುವ ಎಚ್ಚರಿಕೆ ನೀಡಿದ್ದೇನೆ ಎಂದರು. ಇದೇ ವೇಳೆ ಇ ಸ್ವೊತ್ತು ಆಗದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು ಹೊಸ ವ್ಯವಸ್ಥೆಯನ್ನು ಅಪ್ಗ್ರೇಡ್ ಮಾಡುವಾಗ ಕೆಲವೊಂದು ಸಮಸ್ಯೆಯಾಗುತ್ತದೆ. ಈ ನಿಟ್ಟಿನಲ್ಲಿ ಕಂದಾಯ ಇಲಾಖೆಯಿಂದ ಈ ಸ್ವೊತ್ತು ಮಾಡಲು ಕೆಲವೊಂದು ದಾಖಲೆಗಳು ಕಡ್ಡಾಯ ಎಂದು ತಿಳಿಸಲಾಗಿದೆ. ಆ ವಿಚಾರದಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ. ಎರಡು ಮೂರು ವಾರಗಳಲ್ಲಿ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದರು. ಶಿವಮೊಗ್ಗ ಮಹಾನಗರ ಪಾಲಿಕೆಯ ವಾರ್ಡುವಾರು ವಿಂಗಡಣೆ ಅವಶ್ಯಕತೆ ಇದ್ದರೇ ಮಾಡಲಾಗುತ್ತದೆ. ಚುನಾವಣೆ ಸಂಬಂಧ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿದೆ. ಅವರು ದಿನಾಂಕ ಸೂಚಿಸಿದ ತಕ್ಷಣ ಚುನಾವಣೆ ನಡೆಯಲಿದೆ ಎಂದರು.
SUMMRY| Urban Development Minister Byrathi Suresh, who was in Shivamogga to lay the foundation stone of the upcoming Kanaka Bhavan, made a surprise visit to the Shivamogga City Corporation after completing his programme. During this time, the chaos of the corporation was exposed in front of the minister.
KEYWORDS| Urban Development Minister Byrathi Suresh, Kanaka Bhavan, Shivamogga City,