SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 19, 2025
ಶಿವಮೊಗ್ಗ | ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಸಿಬ್ಬಂಧಿಗಳು ತಮ್ಮ ಕಾರ್ಯಕ್ಷೇತ್ರದಲ್ಲಿ ಸೇವೆ ಬಯಸಿ ಬರುವ ಸಾರ್ವಜನಿಕರಿಗೆ ಅನವಶ್ಯಕ ವಿಳಂಬಕ್ಕೆ ಅವಕಾಶವಿಲ್ಲದಂತೆ ಸೇವೆ ಒದಗಿಸಿಕೊಡುವ ಮೂಲಕ ಜನಸ್ನೇಹಿಯಾಗಿ ನಡೆದುಕೊಳ್ಳುವಂತೆ ಉಪಲೋಕಾಯುಕ್ತ ನ್ಯಾ. ಕೆ.ಎನ್.ಫಣೀಂದ್ರ ಅವರು ತಿಳಿಸಿದರು.
ಅವರು ಇಂದು ನಗರದ ಗಾಂಧಿ ಉದ್ಯಾನವನ, ತುಂಗಾನಾಲೆ, ಇಂದಿರಾ ಕ್ಯಾಂಟೀನ್ಮತ್ತು ನವುಲೆ ಕೆರೆ ಪ್ರದೇಶಗಳಿಗೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಇಂದು ಬೆಳಿಗ್ಗೆ ಗಾಂಧಿ ಉದ್ಯಾನವನಕ್ಕೆ ಭೇಟಿ ನೀಡಿದ ಅವರು ಅಲ್ಲಿನ ಪಾದಚಾರಿಗಳು ಮಾಡಿದ ಸಾಮಾನ್ಯದಿಂದ ಗಂಭೀರ ಸ್ವರೂಪದ ಆರೋಪಗಳನ್ನು ಆಲಿಸಿದ ಅವರು, ಮುಂದಿನ 20 ದಿನಗಳೊಳಗಾಗಿ ವಾಯುವಿಹಾರಿಗಳಿಗೆ ಅನುಕೂಲವಾಗುವಂತೆ ಉದ್ಯಾನವನದ ಆಯ್ದ ನಾಲ್ಕು ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ, ಬೆಳಕು, ಒದಗಿಸುವುದರ ಜೊತೆಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಸೂಚಿಸಿದರು.
ನಿಗದಿಪಡಿಸಿದ ಕಾಲಮಿತಿಯಲ್ಲಿ ಸಂಪೂರ್ಣ ಕಾರ್ಯವನ್ನು ಪೂರ್ಣಗೊಳಿಸಬೇಕು. ಅಲ್ಲಿಯವರೆಗೂ ಪಾಲಿಕೆ ಆಯುಕ್ತರ ವಿರುದ್ಧ ಸ್ವಯಂ ಪ್ರೇರಿತ ದೂರನ್ನು ದಾಖಲಿಸಿಕೊಳ್ಳಲಾಗುವುದು. ಸಮಸ್ಯೆಗಳಿಗೆ ಪರಿಹಾರ ದೊರಕಿದ ಮಾಹಿತಿ ನೀಡಿದ ನಂತರ ದಾಖಲಿಸಿಕೊಳ್ಳಲಾದ ದೂರನ್ನು ವಿಲೇ ಮಾಡಲಾಗುವುದು ಎಂದ ಅವರು, ಪಾಲಿಕೆ ಅಧಿಕಾರಿಗಳು, ಉದ್ಯಾನವನದ ಉಸ್ತುವಾರಿ ಸಿಬ್ಬಂಧಿಗಳು ತಮ್ಮ ಜಬಾಬ್ದಾರಿಯರಿತು ಕಾರ್ಯನಿರ್ವಹಿಸುವಂತೆ ಸೂಚಿಸಿದರು. ಈ ಉದ್ಯಾನವನಕ್ಕೆ ಸ್ಥಳೀಯ ಲೋಕಾಯುಕ್ತ ಅಧಿಕಾರಿ-ಸಿಬ್ಬಂಧಿಗಳು ಕಾಲಕಾಲಕ್ಕೆ ಭೇಟಿ ನೀಡಿ ಪರಿಶೀಲಿಸಿ ವಾಸ್ತವ ವರದಿ ನೀಡುವರು ಎಂದವರು ನುಡಿದರು.
ಉದ್ಯಾನವನದ ಅಭಿವೃದ್ಧಿಗೆ ಹಣಕಾಸಿನ ಅಗತ್ಯವಿದ್ದಲ್ಲಿ ಕೂಡಲೇ ಅನುದಾನ ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು. ಪಾಲಿಕೆ ಆಯುಕ್ತರು ಉದ್ಯಾನವನದಲ್ಲಿ ಕೈಗೊಳ್ಳಬೇಕಾಗಿರುವ ತುರ್ತು ಕಾರ್ಯಗಳ ಬಗ್ಗೆ ಕೂಡಲೇ ಕ್ರಿಯಾಯೋಜನೆಯನ್ನು ರಚಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅವರು ಸೂಚಿಸಿದರು. ಸಾರ್ವಜನಿಕರೂ ಕೂಡ ಇಲ್ಲಿನ ಸ್ವಚ್ಚತೆಗೆ ಗಮನಹರಿಸುವಂತೆ ಸೂಚಿಸಿದರು. ಮುಂದಿನ ದಿನಗಳಲ್ಲಿ ಉದ್ಯಾನವನದಲ್ಲಿ ಮಕ್ಕಳ ಸುರಕ್ಷತೆಗೆ ಕ್ರಮಗಳನ್ನು ಕೈಗೊಳ್ಳುವಂತೆಯೂ ಅವರು ಸಲಹೆ ನೀಡಿದರು.
ದಿನನಿತ್ಯ ಉದ್ಯಾನವನಕ್ಕೆ ಆಗಮಿಸುವ ವಾಯುವಿಹಾರಿಗಳು ತಮ್ಮದಾದ ಸಂಘಟನೆಯೊಂದನ್ನು ರಚಿಸಿಕೊಂಡು ಪಾರ್ಕನ್ನು ಮಾದರಿಯನ್ನಾಗಿ ನಿರ್ಮಿಸುವ ಬಗ್ಗೆ ಚರ್ಚಿಸಬೇಕು. ಅಲ್ಲದೇ ಸಕಾಲದಲ್ಲಿ ಪಾಲಿಕೆ ಅಧಿಕಾರಿಗಳಿಗೆ ಸಲಹೆ ನೀಡುವಂತೆ ಅವರು ಸೂಚಿಸಿದರು. ಉದ್ಯಾನವನದ ಅಭಿವೃದ್ಧಿಗೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವಾಗಿರುವುದರ ಜೊತೆಗೆ ಅನುದಾನದ ಕೊರತೆಯೂ ಪ್ರಮುಖವಾದ ಕಾರಣವಾಗಿರುವುದನ್ನು ಗುರುತಿಸಲಾಗಿದೆ. ಇಲ್ಲಿನ ಅಭಿಯಂತರರು ಮುಂದಿನ ಆರು ತಿಂಗಳೊಳಗಾಗಿ ಉದ್ಯಾನವನ್ನು ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದಾರೆ. ಸಮಸ್ಯೆಗಳನ್ನು ಆಧ್ಯತೆಯ ಮೇಲೆ ಇತ್ಯರ್ಥಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ತುಂಗಾ ನಾಲೆಗೆ ಅಧಿಕಾರಿಗಳೊಂದಿಗೆ ಲೋಕಾಯುಕ್ತರ ಭೇಟಿ
ರಾಜೇಂದ್ರ ನಗರದಲ್ಲಿ ಹರಿದು ಹೋಗುವ ತುಂಗಾನಾಲೆ ನಗರದ ತ್ಯಾಜ್ಯದಿಂದ ತುಂಬಿಹೋಗಿದ್ದು, ಸಾಂಕ್ರಾಮಿಕ ರೋಗಗಳ ಆಗರವಾಗಿದೆ. ಇದನ್ನು ಸ್ವಚ್ಚಗೊಳಿಸುವಲ್ಲಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಸ್ವಚ್ಚತೆ ಎಂಬುದು ಸರ್ಕಾರದ ಇಲಾಖೆಗಳ ಕಾರ್ಯ ಮಾತ್ರವಲ್ಲ, ಇಲ್ಲಿನ ನಿವಾಸಿಗಳು ಕೂಡ ನಾಲೆಗೆ ಕಸ ಹಾಕದಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ಈ ಪ್ರದೇಶದಲ್ಲಿನ ಅಶುದ್ಧ ಗಾಳಿ ಮತ್ತು ತ್ಯಾಜ್ಯದ ನಿಯಂತ್ರಣಕ್ಕೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳುವಂತೆ ಉಪಲೋಕಾಯುಕ್ತರು ಪಾಲಿಕೆ ಅಭಿಯಂತರ ಭರತ್ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಮಾತನಾಡಿ, ಈ ನಾಲೆಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸಂಬಂಧಿಸಿದ ಇಲಾಖಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ತುರ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು, ಆಸ್ಪತ್ರೆಯ ತ್ಯಾಜ್ಯ ಹಾಕುತ್ತಿರುವವರ ಬಗ್ಗೆ ಮಾಹಿತಿ ನೀಡಿದಲ್ಲಿ ಅಂತಹ ಆಸ್ಪತ್ರೆಗಳ ವೈದ್ಯರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದರು.
SUMMARY | Upa-Lokayukta Justice directed the officers and staff working in various departments of the government to behave in a people-friendly manner by providing services to the public seeking service in their field of work without any unnecessary delay. K.N. Phanindra said.
KEYWORDS | Upa-Lokayukta, K.N. Phanindra, officers, public seeking service,