SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 26, 2024
ಶಿವಮೊಗ್ಗ | ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ರವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಅಪಮಾನ ಮಾಡಿದ್ದಾರೆ. ಅವರನ್ನು ಪ್ರಧಾನಿ ಮೋದಿಯವರು ಕೂಡಲೇ ಗೃಹಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಅಂಬೇಡ್ಕರ್ರವರ ಪ್ರತಿ ಹಿಡಿದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು. ಹಾಗೆಯೇ ಅಮಿತ್ ಶಾ ವಿರುದ್ದ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಚಿನ್ನಯ್ಯ ಮಾತನಾಡಿ ಈ ಹಿಂದೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿ.ಜೆ.ಪಿ. ಸರ್ಕಾರದಲ್ಲಿ ಗೃಹಮಂತ್ರಿಯಾಗಿರುವ ಅಮಿತ್ ಷಾ ರವರು ಸಂಸತ್ನಲ್ಲಿ ಭಾಷಣ ಮಾಡುವಾಗ ವಿರೋಧಪಕ್ಷದ ನಾಯಕರು ಪದೇ ಪದೇ ಸಂವಿಧಾನ ಮತ್ತು ಅಂಬೇಡ್ಕರ್ ರವರ ಭಾವಚಿತ್ರಗಳನ್ನು ಪ್ರದರ್ಶಿಸುವುದನ್ನು ಸಹಿಸಿಕೊಳ್ಳಲಿಲ್ಲ. ಹಾಗಾಗಿ ತಮ್ಮ ಭಾಷಣದ ವೇಳೆ, ಬಾಬಾಸಾಹೇಬ್ರನ್ನ ಅವಮಾನಿಸಿದ್ದಾರೆ ಎಂದು ದೂರಿದರು. ಇದರಿಂದ ಬಿ.ಜೆ.ಪಿ. ಸರ್ಕಾರಕ್ಕೆ ಅಂಬೇಡ್ಕರ್ ರವರ ಬಗ್ಗೆ ಇರುವ ಸಂಕುಚಿತ ಮನೋಭಾವ ತಿಳಿಯುತ್ತದೆ. ಸಂವಿಧಾನ ಶಿಲ್ಪಿಗೆ ಮನವಾದಿಗಳು ಮಾಡುವ ಅಪಮಾನಗಳು ತಮ್ಮ ಮಾತುಗಳಿಂದ ಬಹಿರಂಗಗೊಂಡಿದೆ. ಪ್ರಜಾಪ್ರಭುತ್ವ ಭಾರತದ ರಾಜ್ಯಾಂಗ, ನ್ಯಾಯಾಂಗ, ಶಾಸಕಾಂಗ ಹಾಗೂ ಕಾರ್ಯಾಂಗಗಳು ಈ ದೇಶದ ಸಂವಿಧಾನದ ವ್ಯವಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಂಥಹ ಸಂವಿಧಾನವನ್ನು ರಚಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ಅಪಮಾನ ಮಾಡಿರುವುದು ಖಂಡನೀಯ. ಇಡೀ ವಿಶ್ವ ಮೆಚ್ಚುವಂತಹ ದೇಶದಲ್ಲಿನ 136 ಕೋಟಿ ಜನರು ಸಾಮಾಜಿಕ, ಸಮಾನತೆ ಹಾಗೂ ಭ್ರಾತೃತ್ವದಿಂದ ಜೀವಿಸಲು ಸಮಾನತೆಯ ಸಂದೇಶವನ್ನು ಸಾರಿದ ಸಂವಿಧಾನವನ್ನು ಪ್ರತಿಯೋಬ್ಬರು ಗೌರವಿಸುವಂತಹ ಸಂದರ್ಭದಲ್ಲಿ ಸಂವಿಧಾನ ನಿರ್ಮಾಣ ಕರ್ತರನ್ನು ಹೀಯಾಳಿಸುವುದು ಎಷ್ಟು ಸರಿ. ಈ ಕೂಡಲೇ ಅಮಿತ್ ಷಾ ರವರು ಈ ವಿಚಾರದ ಬಗ್ಗೆ ಕ್ಷಮೆಯಾಚಿಸಬೇಕು. ಕೂಡಲೇ ಪ್ರಧಾನಿ ನರೇಂದ್ರ ಮೋದಿಯವರು ಅಮಿತ್ ಷಾ ರಿಂದ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ಪಡೆಯಬೇಕು. ರಾಷ್ಟ್ರಪತಿಗಳು ಅಮಿತ್ ಷಾ ರವರ ಸಂಸತ್ ಸದಸ್ಯತ್ವ ಸ್ಥಾನವನ್ನು ವಜಾ ಮಾಡಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದರು.

SUMMARY | The Karnataka Dalit Sangharsha Samiti staged a protest in front of the deputy commissioner’s office demanding the removal of Amit Shah from the post of home minister.
KEYWORDS | Karnataka Dalit Sangharsha Samiti, Amit Shah, protest, shivamogga,