SHIVAMOGGA | MALENADUTODAY NEWS | ಮಲೆನಾಡು ಟುಡೆ
ಶಿವಮೊಗ್ಗ | ಷೆಡ್ಯುಲ್ ಒನ್ ಎನಿಮಲ್ ನ ಸಾಲಿನಲ್ಲಿ ಅಗ್ರಸಾಲಿನಲ್ಲಿರುವ ಹುಲಿ ಸಂರಕ್ಷಣೆಗೆ ಕೇಂದ್ರ ಹಾಗು ರಾಜ್ಯ ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ.ದೇಶದಲ್ಲಿ ಕೇವಲ 2700 ಆಸುಪಾಸಿನಲ್ಲಿ ಹುಲಿಗಳ ಸಂಖ್ಯೆ ಇರುವಾಗ ಅವುಗಳ ಸಂರಕ್ಷಣೆಗೆ ರಾಷ್ಟ್ರೀಯ ನೀತಿಯನ್ನು ರೂಪಿಸಿಲಾಗಿದೆ. ಇನ್ನು ಹುಲಿ ಸಾವನ್ನಪ್ಪಿದ ಸಂದರ್ಭದಲ್ಲೂ, ಅದರ ವೈದ್ಯಕೀಯ ಪರೀಕ್ಷೆ ಹಾಗು ತನಿಖೆ ಹೇಗಿರಬೇಕು ಎಂಬ ನಿಯಮವನ್ನು ಸಹ ರೂಪಿಸಲಾಗಿದೆ. ಆದರೆ ಈ ನಿಯಮವನ್ನು ಅಂಬ್ಲಿಗೋಳದಲ್ಲಿ ಸಾವನ್ನಪ್ಪಿದ ಹುಲಿ ಪ್ರಕರಣದಲ್ಲಿ ಅನುಸರಿಸಲಾಗಿದೆಯಾ ಎಂಬ ಅನುಮಾನ ಮೂಡತೊಡಗಿದೆ.
ಶಿವಮೊಗ್ಗ ಜಿಲ್ಲೆಯ ಅಂಬ್ಲಿಗೋಳ ರೇಂಜ್ನ ಜಲಾಶಯದಲ್ಲಿ ಕಳೆದ ವಾರ ಗಂಡು ಹುಲಿಯು ನೀರಿನಲ್ಲಿ ತೇಲುತ್ತಿದ್ದ ದೃಷ್ಯವನ್ನು ಸ್ಥಳೀಯರು ಕಂಡು, ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಹುಲಿಯ ದೇಹವನ್ನು ಅವಲೋಕಿಸಿದಾಗ ಅದು ಸಾವನ್ನಪ್ಪಿ ನೀರಿನಲ್ಲಿ ತೇಲುತ್ತಿರುವುದು ಗೊತ್ತಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಹುಲಿಯ ದೇಹದ ಭಾಗಕ್ಕೆ ಬೇಟೆಗಾರರ ಗನ್ ಶಾಟ್ ಆಗಿದೆಯಾ ಅಥವಾ ಟೆರಿಟೋರಿಯಲ್ ವಾರ್ ನಲ್ಲಿ ಗಾಯಗೊಂಡಿದೆಯಾ ಇಲ್ಲವೇ ಸ್ವಾಭಾವಿಕ ಕಾಯಿಲೆಗೆ ತುತ್ತಾಗಿದೆಯಾ ಎಂಬ ಅನುಮಾನಗಳು ಅಧಿಕಾರಿಗಳಿಗೆ ಕಾಡಿದ್ದಂತೂ ಸುಳ್ಳಲ್ಲ. ಹುಲಿ ಸಾವಿನ ಸುದ್ದಿ ಬೆಂಗಳೂರಿನ ಅರಣ್ಯ ಭವನಕ್ಕೆ ಬಡಿಯುತ್ತಿದ್ದಂತೆ ಅರಣ್ಯ ಸಚಿವ ಈಶ್ವರ ಖಂಡ್ರೆಯವರು ಹುಲಿ ಸಾವಿನ ತನಿಖೆಗೆ ಅದೇಶಿಸಿದ್ದಾರೆ. ಆದರೆ ಹುಲಿ ಸಾವಿನ ತನಿಖೆ ಎನ್.ಟಿ.ಸಿ.ಎ ಗೈಡ್ ಲೈನ್ ಪ್ರಕಾರ ನಡೆದಿದೆಯಾ ಎಂಬ ಅನುಮಾನ ಕಾಡುತ್ತಿದೆ.

ಹುಲಿ ರಾಷ್ರೀಯ ಪ್ರಾಣಿ ಆಗಿರುವುದರಿಂದ ಅದರ ಸಾವಿಗೆ ಪೂರಕವಾಗಿ ತನಿಖೆ, ತಪಾಸಣೆ, ವೈದ್ಯಕೀಯ ಪರೀಕ್ಷೆ, ಅಂತ್ಯ ಸಂಸ್ಕಾರ ಮಾಡುವಾಗ ಸರ್ಕಾರದ ಮಾರ್ಗಸೂಚಿಗಳನ್ನು ಚಾಚು ತಪ್ಪದೆ ಅನುಸರಿಸಬೇಕಾಗುತ್ತದೆ. ಅಂಬ್ಲಿಗೋಳದಲ್ಲಿ ಸಾವನ್ನಪ್ಪಿದ ಗಂಡು ಹುಲಿಗೆ ಎಂಟರಿಂದ ಒಂಬತ್ತು ವರ್ಷ ವಯಸ್ಸು ಆಗಿದ್ದು, ಸಧೃಡವಾಗಿತ್ತು. ಈ ಹುಲಿ ಸಾವಿನ ತನಿಖೆಯಲ್ಲಿ ನ್ಯಾಷನಲ್ ಟೈಗರ್ ಪ್ರೊಟೆಕ್ಷನ್ ಆಕ್ಟ್ನ ಗೈಡ್ ಲೈನ್ ಫಾಲೋ ಆಗಿಲ್ಲ. ಒಂದು ಹುಲಿ ಸಾವನ್ನಪ್ಪಿದಾಗ, ವಿಭಾಗ ಮಟ್ಟದ ಅರಣ್ಯಾಧಿಕಾರಿ ಹಾಗು ವೈಲ್ಡ್ ಲೈಫ್ ವಾರ್ಡನ್ ನೇತೃತ್ವವದಲ್ಲಿ ಒಂದು ತಂಡವೇ ರಚನೆಯಾಗಬೇಕಾಗುತ್ತದೆ. ಕನಿಷ್ಟ ಇಬ್ಬರು ವೈದ್ಯರು ಘಟನಾ ಸ್ಥಳದಲ್ಲಿರಬೇಕಾಗುತ್ತದೆ. ಇದಲ್ಲದೆ ಜಿಲ್ಲಾ ಮಟ್ಟದ ವನ್ಯಜೀವಿ ವೈದ್ಯರ ಉಪಸ್ಥಿತಿಯೂ ಮುಖ್ಯವಾಗಿರುತ್ತದೆ. ಸಬ್ಜೆಕ್ಟ್ ಎಕ್ಸ್ ಪರ್ಟ್ ಅಂದರೆ ವೆಟನರಿ ಕಾಲೇಜಿನ ಪ್ಯಾಥೋಲಾಜಿಸ್ಟ್ ಉಪಸ್ಥಿತಿ ಮುಖ್ಯವಾಗುರುತ್ತದೆ.
ಆದರೆ ಅಂಬ್ಲಿಗೋಳ ಜಲಾಶಯದಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡ ಗಂಡು ಹುಲಿ ಮೃತದೇಹದ ವೈದ್ಯಕೀಯ ತಪಾಸಣೆಯಲ್ಲಿ ಈ ನಿಯಮಾವಳಿಗಳನ್ನು ಗಾಳಿಗೆ ತೂರಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಪ್ಯಾಥೋಲಾಜಿಸ್ಟ್ ನೇತ್ರತ್ವದಲ್ಲಿ ನಡೆಯಬೇಕಾದ ವೈದ್ಯಕೀಯ ಪರೀಕ್ಷೆ, ಲಯನ್ ಸಫಾರಿಯ ಔಟ್ ಸೋರ್ಸ್ ವೈದ್ಯರಿಂದ ನಡೆಸಲಾಗಿದೆ.ಇವರು ಓದಿರುವುದು ಬಿ.ವಿಎಸ್ಸಿ ಅಷ್ಟೆ. ಹಾಗಂತ ಈ ವೈದ್ಯರ ಕಾರ್ಯಕ್ಷಮತೆಯನ್ನು ಪ್ರಶ್ನಿಸುತ್ತಿಲ್ಲ. ಬದಲಾಗಿ ಹುಲಿ ಸಾವಿನ ವೈದ್ಯಕೀಯ ಪರೀಕ್ಷೆಯನ್ನ ಪ್ಯಾಧೋಲಾಜಿಸ್ಟ್ ಮಾಡಬೇಕಿತ್ತು ಎಂಬುದು ಮುಖ್ಯ ಉದ್ದೇಶವಾಗಿದೆ. ಇಲ್ಲಿ ಕೊಲ್ಲಲ್ಪಟ್ಟಿರುವುದು ಅಥವಾ ಸಾವನ್ನಪ್ಪಿರುವುದು ಕುರಿ ಕೋಳಿ ಅಲ್ಲ ಎಂಬ ಪರಿಜ್ಞಾನವೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಇದ್ದಂತೆ ಇಲ್ಲ. ಇಲ್ಲಿ ಎನ್.ಟಿ.ಸಿ.ಎ ಗೈಡ್ ಲೈನ್ ಅನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.ಈ ಬಗ್ಗೆ ಅರಣ್ಯ ಭವನದಲ್ಲಿರುವ ಚೀಫ್ ವೈಲ್ಡ್ ಲೈಫ್ ವಾರ್ಡನ್ ಸ್ಷಷ್ಟನೇ ನೀಡಿ, ಹುಲಿ ಸಾವಿಗೆ ನ್ಯಾಯ ಕೊಡುವರೇ…ಎಂಬದು ಮಿಲಿಯನ್ ಡಾಲರ್ ಪ್ರಶ್ಮೆಯಾಗಿದೆ. ಅಂಬ್ಲಿಗೋಳ ಹುಲಿ ಸಾವಿನ ತನಿಖೆಯ ಬಗ್ಗೆ ಪ್ರಾಣಿಪ್ರಿಯರು ವನ್ಯಜೀವಿ ತಜ್ಞರು ಧ್ವನಿ ಎತ್ತಬೇಕಿದೆ.
SUMMARY | A national policy has been formulated to protect tigers when the number of tigers in the country is only around 2700.
KEYWORDS | tiger, death, ambligola, forest department,