ಶಿವಮೊಗ್ಗ: ಭದ್ರಾ ಡ್ಯಾಂ ಕುಡಿಯುವ ನೀರಿನ ಯೋಜನೆಗೆ ರೈತರಿಂದ ಆಕ್ಷೇಪ – ಕಾಲುವೆ ಒಡೆದಿದ್ದೆ ಸಮಸ್ಯೆಯ ಮೂಲನಾ? /Shivamogga: Farmers object to Bhadra drinking water project – was the canal rupture the root of the problem?
ಭದ್ರಾ ಜಲಾಶಯದ ಬಲದಂಡೆ ನಾಲೆ ಒಡೆದು ನಡೆಸಲಾಗುತ್ತಿರುವ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯು ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿರುವ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಬೇಡಿಕೆ ಈಡೇರದಿದ್ದರೆ ಜೂನ್ 28ರಂದು ದಾವಣಗೆರೆ ನಗರ ಬಂದ್ಗೆ ಕರೆ ನೀಡಿದ್ದಾರೆ.
ಕುಡಿಯುವ ನೀರಿನ ಯೋಜನೆಯ ಅಡಿಯಲ್ಲಿ ಚಿಕ್ಕಮಗಳೂರು ಸೇರಿದಂತೆ ಬಯಲು ಸೀಮೆಯ ಹಲವು ತಾಲ್ಲೂಕುಗಳಿಗೆ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷೆಯ ಈ ಯೋಜನೆಯು ರೈತರ ತೀವ್ರ ವಿರೋಧಕ್ಕೆ ಗುರಿಯಾಗಿದೆ. ಭದ್ರಾ ಡ್ಯಾಂನ ಬಲದಂಡೆ ಕಾಲುವೆಯ ಭಾಗವನ್ನು ಒಡೆದು ನೀರು ಹರಿಸಲು ಕೈಗೊಂಡಿರುವ ಕಾಮಗಾರಿಯೇ ಈ ಆಕ್ಷೇಪಕ್ಕೆ ಪ್ರಮುಖ ಕಾರಣವಾಗಿದೆ.

ಏನಿದು ಭದ್ರಾ ಕುಡಿಯುವ ನೀರಿನ ಯೋಜನೆ?
ಭದ್ರಾ ಮೇಲ್ದಂಡೆ ಯೋಜನೆಯಡಿ, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ, ಕಡೂರು, ಚಿಕ್ಕಮಗಳೂರು, ತರೀಕೆರೆ ತಾಲ್ಲೂಕುಗಳು ಸೇರಿದಂತೆ ಬಯಲು ಸೀಮೆಯ ಬರಪೀಡಿತ ಗ್ರಾಮಗಳಿಗೆ ವರ್ಷವಿಡೀ ಪ್ರತಿದಿನ 30 ಕ್ಯುಸೆಕ್ನಂತೆ ಒಟ್ಟು 1 ಟಿಎಂಸಿ ಅಡಿ ಕುಡಿಯುವ ನೀರನ್ನು ಪೂರೈಸಲು ಯೋಜನೆ ರೂಪಿಸಲಾಗಿದೆ.
ಈ ಯೋಜನೆಯಡಿ ಭದ್ರಾ ಡ್ಯಾಂನ ಪವರ್ಹೌಸ್ ಬಳಿಯ ಬಲದಂಡೆ ಕಾಲುವೆಯ ಒಂದು ಭಾಗವನ್ನು ಒಡೆದು, ಅದರ ಮೂಲಕ ನೀರನ್ನು ಶುದ್ಧೀಕರಣ ಘಟಕಕ್ಕೆ ಪೂರೈಸಲು ಕಾಮಗಾರಿ ಕೈಗೊಳ್ಳಲಾಗುತ್ತಿದೆ.
ಶುದ್ಧೀಕರಣ ಘಟಕದಿಂದ ಪೈಪ್ಲೈನ್ ಮೂಲಕ ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಿಗೆ ನೀರು ಒದಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. 2020ರಲ್ಲಿ ₹1,600 ಕೋಟಿ ವೆಚ್ಚದ ಈ ಯೋಜನೆಗೆ ಮಂಜೂರಾತಿ ದೊರೆತಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗವು ಸದ್ಯ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ.

ಕಾಲುವೆ ಒಡೆದಿದ್ದಕ್ಕೆ ರೈತರ ಆಕ್ಷೇಪವೇಕೆ? Bhadra drinking water project
ಯೋಜನೆಯು ಕುಡಿಯುವ ನೀರು ಒದಗಿಸುವ ಸದುದ್ದೇಶ ಹೊಂದಿದ್ದರೂ, ಭದ್ರಾ ಬಲದಂಡೆ ಕಾಲುವೆಯನ್ನು ಒಡೆದು ನೀರು ಒಯ್ಯುತ್ತಿರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಬಲದಂಡೆಯನ್ನು ಒಡೆಯುವುದರಿಂದ ಕಾಲುವೆಯ ನೀರಿನ ಸಹಜ ಹರಿವಿಗೆ ಅಡ್ಡಿಯಾಗುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಇದರ ಪರಿಣಾಮವಾಗಿ ದಾವಣಗೆರೆ ಜಿಲ್ಲೆಯ ಹರಿಹರ, ದಾವಣಗೆರೆ, ಹೊನ್ನಾಳಿ ಹಾಗೂ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಕೊನೆಯ ಭಾಗದವರೆಗೂ ನೀರು ಸಮರ್ಪಕವಾಗಿ ಹರಿಯುವುದಿಲ್ಲ ಎಂಬುದು ರೈತರ ಪ್ರಮುಖ ಆರೋಪವಾಗಿದೆ.
ಜಲಾಶಯದಿಂದಲೇ ನೇರವಾಗಿ ನೀರು ಒಯ್ಯಲು ಸಾಧ್ಯವಿದ್ದರೂ, ಪಂಪ್ ಮಾಡುವ ವಿಧಾನವು ದುಬಾರಿಯಾಗುತ್ತದೆ ಎಂಬ ಕಾರಣಕ್ಕೆ ಕಾಲುವೆ ಒಡೆದು ನೀರು ಹರಿಸಲಾಗುತ್ತಿದೆ ಎಂಬುದು ರೈತರ ಆಕ್ಷೇಪ.

ಅಧಿಕಾರಿಗಳ ಸ್ಪಷ್ಟೀಕರಣವೇನು? Bhadra drinking water project
ಕಾಲುವೆ ಒಡೆದು ನೀರು ಹರಿಸುವುದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ರೈತರ ಆತಂಕವನ್ನು ತಳ್ಳಿ ಹಾಕಿದ್ದಾರೆ. “ಭದ್ರಾ ಬಲದಂಡೆ ನಾಲೆಯಲ್ಲಿ ನಿತ್ಯ 2.650 ಕ್ಯುಸೆಕ್ ನೀರು ಹರಿಯುತ್ತಿದೆ. ಈಗ ಪ್ರಸ್ತುತ ನಡೆಯುತ್ತಿರುವ ಕುಡಿಯುವ ನೀರಿನ ಕಾಮಗಾರಿಯಿಂದಾಗಿ ಜಲಾನಯನ ಪ್ರದೇಶದ ಕೊನೆಯ ಭಾಗದ ರೈತರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಹಾಗಾಗಿ ಯಾವುದೇ ಆತಂಕ ಬೇಡ” ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಆದರೆ, ಅಧಿಕಾರಿಗಳ ಈ ಭರವಸೆ ರೈತರ ಆತಂಕವನ್ನು ಸಂಪೂರ್ಣವಾಗಿ ಕಡಿಮೆ ಮಾಡಿಲ್ಲ. ಯೋಜನೆಯಿಂದಾಗಿ ತಮ್ಮ ಜಮೀನುಗಳಿಗೆ ನೀರಿನ ಕೊರತೆ ಎದುರಾಗಬಹುದು ಎಂದು ರೈತರು ಆತಂಕದಲ್ಲಿದ್ದು, ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅಲ್ಲದೆ ಈ ಸಂಬಂಧ ಹೋರಾಟವನ್ನು ತೀವ್ರಗೊಳಿಸಿದ್ದಾರೆ.