SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 27, 2024 ಶಿವಮೊಗ್ಗ ಜಿಲ್ಲೆಯಲ್ಲಿ ಅರಣ್ಯ ಮತ್ತು ಕಂದಾಯ ಭೂಮಿ ಬಗರ್ ಹುಕುಂ ರೈತರು ಲಕ್ಷಾಂತರ ಸಂಖ್ಯೆಯಲ್ಲಿದ್ದಾರೆ. ಅರಣ್ಯ ಒತ್ತುವರಿ ತೆರವಿಗೆ ಸರ್ವ ಸನ್ನದ್ಧರಾಗಿರುವ ಅರಣ್ಯ ಅಧಿಕಾರಿಗಳ ಕ್ರಮಕ್ಕೆ ಜಿಲ್ಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಇದರ ಬೆನ್ನಲ್ಲೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ನೇತ್ರತ್ವದಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದರು. ಈ ವೇಳೆ ಮಲೆನಾಡಿನ ಅರಣ್ಯ ಸಾಗುವಳಿದಾರರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವುದಿಲ್ಲ. ಕೋರ್ಟ್ನಲ್ಲಿ ದಾವೆ ಹಾಕಿರುವ ಕೇಸ್ಗಳನ್ನು ಕಾನೂನಿನ ಮೂಲಕವೇ ಬಗೆಹರಿಸಬೇಕಿದೆ 2015 ರ ನಂತರದ ಒತ್ತುವರಿಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಸ್ತುವಾರಿ ಸಚಿವ ಮದು ಬಂಗಾರಪ್ಪ ಹೇಳಿದ್ದರು. ಸಚಿವರ ಅಭಯಕ್ಕೆ ಜಿಲ್ಲೆಯ ರೈತರು ನಿಟ್ಟುಸಿರು ಬಿಟ್ಟಿದ್ದರು.
ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ರಾಜಕೀಯ ನಾಯಕರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಸಾಗರ ಸೊರಬ ಹೊಸನಗರ ತೀರ್ಥಹಳ್ಳಿ ಭಾಗಗಳಲ್ಲಿ ರೈತರಿಗೆ ನೋಟಿಸ್ ಕೊಡುವ ಪ್ರಕ್ರಿಯೆ ಮುಂದುವರೆದಿದೆ. ಜಮೀನಿನ ದಾಖಲೆಗಳೊಂದಿಗೆ ಇಲಾಖೆ ಕಛೇರಿಗಳಿಗೆ ಹಾಜರಾಗುವಂತೆ ಸೂಚಿಸುತ್ತಿದ್ದಾರೆ
ಕರ್ನಾಟಕ ಅರಣ್ಯ ಕಾಯ್ದೆ 1963ರ ಕಲಂ U/S 24[g][gg] ಮತ್ತು ಕಲಂ 73(d) ಉಲ್ಲಂಘನೆ ಎಂದು ರೈತರಿಗೆ ನೊಟೀಸ್ ನೀಡಲಾಗುತ್ತಿದೆ. ಇದು ರೈತ ಸಮೂಹವನ್ನು ಕೆರಳಿಸಿದೆ. ಪ್ರತಿದಿನ ಜಿಲ್ಲೆಯ ಯಾವುದಾದರೂ ತಾಲೂಕಿನಲ್ಲಿ ಬಗರ್ ಹುಕಂ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಸಾಗರ ತಾಲೂಕಿನ ಕೆಳದಿ ಶಾಖೆಯ ರೈತರೊಬ್ಬರಿಗೆ ನೋಟಿಸ್ ನೀಡಿರುವುದಕ್ಕೆ ರೈತ ಮುಖಂಡರು ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿಯೇ ಪ್ರತಿಭಟನೆ ನಡೆಸಿ, ನೋಟಿಸ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಅರಣ್ಯ ಸಚಿವರಿಗೆ ಮಲೆನಾಡಿನ ರೈತ ಸಮಸ್ಯೆಗಳ ಬಗ್ಗೆ ಅರಿವಿಲ್ಲ ಎಂದು ಕಿಡಿಕಾರಿದರು. ಭದ್ರಾವತಿ ತಾಲೂಕಿನ ರೈತರು ಶಿವಮೊಗ್ಗದ ಶಿವಪ್ಪ ನಾಯಕ ವೃತ್ತದಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಪಾದಯಾತ್ರೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಜಿಲ್ಲೆಯಲ್ಲಿ ಬಗರ್ ಹುಕಂ ರೈತರ ಆಕ್ರೋಶ ಬುಗಿಲೆದ್ದಿದ್ದು, ಮಂದಿನ ದಿನಗಳಲ್ಲಿ ಪ್ರತಿಭಟನೆಯ ಸ್ವರೂಪ ಮತ್ತಷ್ಟು ಕಾವೇರಿದರೂ ಅಚ್ಚರಿಯಿಲ್ಲ.