ಶಿವಮೊಗ್ಗ: ಫೇಸ್ಬುಕ್ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಹಣದ ಸಹಾಯ ಮಾಡುವ ಆಮಿಷವೊಡ್ಡಿ ತೀರ್ಥಹಳ್ಳಿಯ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.
ಘಟನೆಯ ಹಿನ್ನೆಲೆ
ತೀರ್ಥಹಳ್ಳಿಯ ನಿವಾಸಿಗೆ ಫೇಸ್ಬುಕ್ನಲ್ಲಿ ಡಾ. ಅಲೆಕ್ಸಾ ಚಾರ್ಲ್ಸ್ ಎಂಬ ಹೆಸರಿನ ಖಾತೆಯಿಂದ ಪರಿಚಯವಾಗಿದೆ. ಆರಂಭದಲ್ಲಿ ಆತ್ಮೀಯವಾಗಿ ಮಾತನಾಡುತ್ತಾ ಸ್ನೇಹ ಬೆಳೆಸಿದ ವಂಚಕ, ತಾನು ದೊಡ್ಡ ಮೊತ್ತದ ಹಣದ ಸಹಾಯ ಮಾಡುವುದಾಗಿ ನಂಬಿಸಿದ್ದಾನೆ. ಇದನ್ನು ನಿಜವೆಂದು ನಂಬಿದ ದೂರುದಾರರು, ತಮ್ಮ ಬ್ಯಾಂಕ್ ಖಾತೆಯ ವಿವರಗಳು ಸೇರಿದಂತೆ ವೈಯಕ್ತಿಕ ಮಾಹಿತಿಗಳನ್ನು ಆತನೊಂದಿಗೆ ಹಂಚಿಕೊಂಡಿದ್ದಾರೆ.
ಕೆಲವು ದಿನಗಳ ನಂತರ ಸಂತ್ರಸ್ತರಿಗೆ ಅಪರಿಚಿತ ನಂಬರ್ನಿಂದ ಕರೆ ಬಂದಿದೆ. ಬ್ಯಾಂಕ್ ಸಿಬ್ಬಂದಿಯಂತೆ ಮಾತನಾಡಿದ ವಂಚಕರು, ಅಲೆಕ್ಸಾ ಚಾರ್ಲ್ಸ್ ಎಂಬುವವರು ನಿಮ್ಮ ಖಾತೆಗೆ 1,10,000 ಪೌಂಡ್ ಹಣವನ್ನು ಕಳುಹಿಸಿದ್ದಾರೆ. ಆದರೆ ನಿಮ್ಮದು ಉಳಿತಾಯ ಖಾತೆಯಾಗಿರುವುದರಿಂದ ಅಷ್ಟು ದೊಡ್ಡ ಮೊತ್ತವನ್ನು ನೇರವಾಗಿ ವರ್ಗಾಯಿಸಲು ಸಾಧ್ಯವಿಲ್ಲ. ಬದಲಾಗಿ ಆ ಮೊತ್ತವನ್ನು ನಿಮ್ಮ ಮನೆ ವಿಳಾಸಕ್ಕೆ ಕೊರಿಯರ್ ಮಾಡುತ್ತೇವೆ ಎಂದು ನಂಬಿಸಿದ್ದಾರೆ.
ನಂತರ ಕೊರಿಯರ್ ಪ್ರಕ್ರಿಯೆ ಮತ್ತು ವಿವಿಧ ತೆರಿಗೆಗಳ ಹೆಸರಿನಲ್ಲಿ ಹಂತಹಂತವಾಗಿ ದೂರುದಾರರಿಂದ ಒಟ್ಟು 12,52,299 ರೂಪಾಯಿಗಳನ್ನು ಆನ್ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದಾರೆ. ವಂಚಕರು ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ ಸಂಶಯಗೊಂಡ ಸಂತ್ರಸ್ತರು, ತಾವು ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಕೂಡಲೇ ಅವರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
Thirthahalli Man Scammed of ₹12.5 Lakh in Fraud


