ಶಿವಮೊಗ್ಗ: ನಗರದ ಸೂಳೆಬೈಲು ಭಾಗದ ಬಟ್ಟೆ ವ್ಯಾಪಾರಿಯೊಬ್ಬರ ಮನೆಗೆ ನುಗ್ಗಿ, ಮಾರಕಾಸ್ತ್ರಗಳನ್ನು ತೋರಿಸಿ ಜೀವ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿರುವ ಘಟನೆ ನಡೆದಿದೆ. ಈ ಸಂಬಂಧ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ
ಸೂಳೆಬೈಲಿನಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿರುವ ವ್ಯಕ್ತಿಯೊಬ್ಬರಿಗೆ ಏಪ್ರಿಲ್ 18ರ ಸಂಜೆ ದುಷ್ಕರ್ಮಿಯೊಬ್ಬ ಕರೆ ಮಾಡಿ ಮಾತನಾಡಬೇಕು ಎಂದು ಮನೆ ಬಳಿ ಬಂದಿದ್ದಾನೆ. ಮನೆಗೆ ಬಂದವನೇ ನನಗೆ ಹಣ ಬೇಕು ಎಂದು ಬೇಡಿಕೆಯಿಟ್ಟಿದ್ದಾನೆ. ವ್ಯಾಪಾರಿ ತನ್ನ ಬಳಿ ಹಣವಿಲ್ಲ ಎಂದು ಹೇಳಿದಾಗ, ರಾತ್ರಿ 8 ಗಂಟೆಗೆ ಬರುತ್ತೇವೆ, ಅಷ್ಟರೊಳಗೆ ಹಣ ರೆಡಿ ಇಟ್ಟುಕೋ ಎಂದು ಬೆದರಿಕೆ ಹಾಕಿ ಹೋಗಿದ್ದಾನೆ.
ರಾತ್ರಿ 8 ಗಂಟೆಯ ಸುಮಾರಿಗೆ ತನ್ನ ಸಹಚರರೊಂದಿಗೆ ಮರಳಿ ಬಂದ ದುಷ್ಕರ್ಮಿ, ನಮ್ಮ ಬಾಸ್ ಹೇಳಿದ್ದಾರೆ, ಕೂಡಲೇ ಒಂದು ಲಕ್ಷ ರೂಪಾಯಿ ಕೊಡಬೇಕು, ಇಲ್ಲದಿದ್ದರೆ ನಿನ್ನನ್ನು ಸಾಯಿಸುತ್ತೇವ” ಎಂದು ಲಾಂಗ್ ಮತ್ತು ಚಾಕು ತೋರಿಸಿ ಬೆದರಿಸಿದ್ದಾನೆ. ಇದರಿಂದ ಭಯಗೊಂಡ ವ್ಯಾಪಾರಿ ಮೊದಲಿಗೆ 25,000 ರೂಪಾಯಿ ಹಣವನ್ನು ನೀಡಿದ್ದಾರೆ. ಅಷ್ಟಕ್ಕೇ ಸುಮ್ಮನಾಗದ ಕಿರಾತಕರು, ಅಕೌಂಟ್ನಲ್ಲಿದ್ದ ಉಳಿದ ಹಣವನ್ನು ವರ್ಗಾಯಿಸುವಂತೆ ಪೀಡಿಸಿದ್ದಾರೆ. ಅನಿವಾರ್ಯವಾಗಿ ವ್ಯಾಪಾರಿ ಅವರು ನೀಡಿದ ನಂಬರ್ಗೆ ಮತ್ತೆ 25,000 ರೂಪಾಯಿಗಳನ್ನು ಫೋನ್ ಪೇ ಮೂಲಕ ವರ್ಗಾಯಿಸಿದ್ದಾರೆ.
ನಂತರ ರಾತ್ರಿ 10 ಗಂಟೆಯಾದರೂ ದುಷ್ಕರ್ಮಿಗಳ ಕಾಟ ನಿಂತಿಲ್ಲ. ಮತ್ತೆ ಮನೆ ಬಳಿ ಬಂದ ತಂಡ, ಚಾಕು ಮತ್ತು ಲಾಂಗ್ಗಳಿಂದ ಮನೆಯ ಗೇಟ್ ಹಾಗೂ ಕಾಂಪೌಂಡ್ ಮೇಲೆ ಹಲ್ಲೆ ನಡೆಸಿ ಗೇಟ್ ತೆಗೆಯುವಂತೆ ಬೆದರಿಸಿದ್ದಾರೆ. ತಕ್ಷಣ ಎಚ್ಚೆತ್ತ ವ್ಯಾಪಾರಿ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿರುವುದನ್ನು ಕಂಡ ದುಷ್ಕರ್ಮಿಗಳ ತಂಡ ಅಲ್ಲಿಂದ ಪರಾರಿಯಾಗಿದೆ.
Cloth Merchant Robbed at Knife-Point in Shivamogga

