ಒಲವ ಹೆಗಲ ಅಗಲಿ, ನೇಣಿಗೆ ಕೊರಳು ಕೊಟ್ಟವಳ ಸಾವಿನ ಪತ್ರದಲ್ಲಿ ಏನಿತ್ತು ಗೊತ್ತಾ? ಜೆಪಿ ಬರೆಯುತ್ತಾರೆ.

ಹಂಚಿಕೊಳ್ಳಿ
WhatsApp Facebook X Telegram

SHIVAMOGGA  |  Jan 18, 2024  |  ಬದುಕಿನ ಹಾದಿಯ ಆರಂಭದಲ್ಲಿಯೇ ಅದೃಷ್ಟದಂತೆ ಸಿಕ್ಕ ಪ್ರೇಮ.. ಅದನ್ನು ಒಪ್ಪಿಕೊಂಡು ಅಪ್ಪಿಕೊಂಡ ಕುಟುಂಬ..ಸಪ್ತಪದಿಯ ಹೆಜ್ಜೆಗಳನ್ನ ಸ್ವರ್ಗದ ಮೆಟ್ಟಿಲಾಗಿಸಿದ ಹುಡುಗ.. ಸೌಂದರ್ಯ ತುಂಬಿದ್ದ ಅವಳ ಕಣ್ಣುಗಳಲ್ಲಿ ಕಾಣುತ್ತಿದ್ದಿದ್ದು ತೃಪ್ತಿಯ ನಗು.. ಇಷ್ಟಿದ್ದರೂ ಆಕೆ ಉಪ್ಪರಿಗೆಯ ಕೋಣೆಯಲ್ಲಿ ಉಸಿರಿಗೆ ನೇಣಿನ ಗೋಣು ಬಿಗಿಸಿದ್ದಳು.. ಆಗುಂಬೆಯ ನಿಸರ್ಗದ ಆಪ್ತತೆಯ ಸಂಕೇತದಂತ್ತಿದ್ದ ಅವಳು ಇಹಲೋಕ ಬಿಟ್ಟು ಹೋಗಿದ್ದೇಕೆ? ಈ  ವಿಚಾರ ನಿಜಕ್ಕೂ ಪ್ರೀತಿಯನ್ನೆ ಅಪರಾಧಿಯನ್ನಾಗಿಸುತ್ತೆ.. 

ಆಗುಂಬೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಮೊನ್ನೆ ರಾತ್ರಿ ಯುವತಿಯೊಬ್ಬಳು ನೇಣಿಗೆ ಶರಣಾಗಿದ್ದಳು. ಅದರ ಬಗೆಗಿನ ವಿವರ ರಾತ್ರಿ ಕೋಣೆಗೆ ಹೋಗಿ ಮಲಗಿದ್ದ ಯುವತಿ ಶವ ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಈ ಸ್ಟೋರಿಯಲ್ಲಿದೆ. 

ಮುಂದುವರಿದು ಹೇಳುವುದಾದರೆ, ಆಕೆ ತನ್ನ ಸಾವಿಗೆ ಯಾರನ್ನೂ ಸಹ ಕಾರಣವಾಗಿಸಿಲ್ಲ. ಬರೆದಿಟ್ಟ ಡೈರಿಯ ಡೆತ್​ ನೋಟ್​ನಲ್ಲಿ ಯಾರನ್ನು ಸಹ ದೂರಿಲ್ಲ. ಹೊಣೆಯಾಗಿಸಿಲ್ಲ. ಅಪರಾಧಿಯಾಗಿಸಿಲ್ಲ. ಹಾಗೆ ನೋಡಿದರೆ, ಕಾನೂನಿನ ಅಡಿಯಲ್ಲಿ ಇವತ್ತು ಆಗುಂಬೆ  ಪೊಲೀಸ್ ಸ್ಟೇಷನ್​ನಲ್ಲಿ ರಿಜಿಸ್ಟರ್ ಆದ ಕೇಸ್​ ತುಂಬಾನೇ ಗಂಭೀರವಾದುದು. 

ಮದುವೆಯಾದ 10 ತಿಂಗಳಿನಲ್ಲಿಯೇ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಎಂದರೆ, ಅದರ ಹಿಂದೆ ಪತಿಯ ಪರಿವಾರದ ವಿರುದ್ಧ ಅನಾಮತ್ತಾಗಿ ಆರೋಪಗಳು, ಅನುಮಾನಗಳು, ಕಾಯ್ದೆ ಕಟ್ಟಳೆಗಳು ತಿರುಗಿಬೀಳುತ್ತವೆ. ವರದಕ್ಷಿಣೆ ಕಿರುಕುಳದಂತಹ ಆರೋಪಗಳು ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್​ನಲ್ಲಿ ದಾಖಲಾಗುತ್ತಿದ್ದವು. 

ಆದರೆ ಆಗುಂಬೆಯ ಪ್ರಕರಣದಲ್ಲಿ ಅದ್ಯಾವುದು ಆಗಿಲ್ಲ. ಕಾರಣ ಯುವತಿ ಮತ್ತು ಆಕೆಯ ಪರಿಶುದ್ಧ ಒಲವು.. ಪರಸ್ಪರ ಪ್ರೀತಿಸಿದವರು ವಿದ್ಯಾರ್ಥ್​ ಮತ್ತು ಶಮಿತಾ..ಸುಂದರವಾಗಿದ್ದ ಜೋಡಿಯನ್ನ ಅಷ್ಟೆ ಖುಷಿಯಾಗಿ ಮನೆ ತುಂಬಿಸಿಕೊಂಡಿತ್ತು ಎರಡು ಕುಟುಂಬ. ಪರ್ಮಿಟ್ಟು ಸಿಕ್ಕ ಪ್ರೀತಿಯಲ್ಲಿಯು ಹಾಲಹಲ ಎದ್ದಿದ್ದು ಇದೆ.ಇದಕ್ಕೆ ಹೊರತಾಗಿತ್ತು ಇಬ್ಬರ ಲವ್ ಲೈಫ್​. ಶಮಿತಾ ಮತ್ತು ವಿದ್ಯಾರ್ಥ್​ ಪ್ರೀತಿಯ ಮನೆಯಲ್ಲಿ ಸೀತಾರಾಮರಂತಿದ್ದರು. ಇಬ್ಬರ ಒಲವಿನ ಮುಂಗಾರು ಮಳೆಗೆ ವಿಧಿಯದ್ದೆ ದೃಷ್ಟಿ ತಾಗಿರಬೇಕು.. 

ಶಮಿತಾಳಿಗೆ ಅನಾರೋಗ್ಯ ಕಾಡುತ್ತಿತ್ತು. ಥೈರಾಯಡ್​ಗೆ ಸಂಬಂಧಿಸಿದ ಚಿಕಿತ್ಸೆ ಪಡೆಯುತ್ತಿದ್ದಳು. ಅದರಿಂದ ಮಾನಸಿಕವಾಗಿಯು ಖಿನ್ನತೆಗೊಳಗಾಗಿದ್ದಳು. ಪತಿಯು ತೋರುತ್ತಿದ್ದ ಪ್ರೀತಿಯನ್ನ ಸ್ವಂತವಾಗಿಸಿಕೊಂಡು ಒಲವಿನ ಸಾಮ್ರಾಜ್ಯ ಸೃಷ್ಟಿಸಲು ಆಗುತ್ತಿಲ್ಲವಲ್ಲಾ ಎಂಬ ನೋವಿತ್ತು ಅವಳಲ್ಲಿ . ಮನಸ್ಸಿಗೆ ನೋವಾದರೆ, ಮದ್ದು ಹುಡುಕಬಹುದು. ಆದರೆ ಮನವೇ ವ್ಯಾದಿ ಮೂಲವಾದರೆ, ಅದಕ್ಕೆ ಮುಲಾಮಿಲ್ಲ. ಬಹುಶಃ ಶಮಿತಾಳಿಗೆ ಹೀಗೆ ಅನಿಸಿದೆ. ಆ ಕಾರಣಕ್ಕೆ ಮಂಗಳವಾರ ರಾತ್ರಿ ಉಪ್ಪರಿಗೆಯ ಕೋಣೆಗೆ ಹೋದವಳು ಮತ್ತೆ ಆಚೆ ಬರಲಿಲ್ಲ. 

ಎದೆಯಾಳದ ಮೂಸೆಯ ನೋವು, ಹೇಗೆ ಹೊರಜಗತ್ತಿಗೆ ಕಾಣುವುದಿಲ್ಲವೋ ಹಾಗೆ ಅರ್ಥವೂ ಸಹ ಆಗದು. ಶಮಿತಾಳ ಮನದಾಳದಲ್ಲಿ ಓಡುತ್ತಿದ್ದ ವಿಚಾರವೂ ಸಹ ಅವಳೊಳಗೆ ಅವಳನ್ನೆ ಜರ್ಜರಿತವಾಗಿಸುತ್ತಿತ್ತು, ಹೊರತಾಗಿ ಇನ್ಯಾರಿಗೂ ಅದರ ಸುಳಿವು ಸಿಗುತ್ತಿರಲಿಲ್ಲ. ಪ್ರೀತಿಸಿದ ಹುಡುಗನಿಗೆ  ಭಾವನೆಗಳು ಅರ್ಥವಾಗಿತ್ತು. ದುಡಿಮೆಯ ಜವಾಬ್ದಾರಿ ಇಲ್ಲದಿದ್ದರೇ ಆಕೆಯನ್ನು ಆತ ಉಳಿಸಿಕೊಳ್ಳುತ್ತಿದ್ದ. ನಡುವೆಯೂ ಶಮಿತಾಳನ್ನು ಸಾಧ್ಯವಾದಷ್ಟು ವಿಚಾರದಿಂದಾಚೆಗೆ ಕರೆದುಕೊಂಡು ಬಂದಿದ್ದ ಆತ, ಮೊನ್ನೆಯಷ್ಟೆ ಕೆಲಸಕ್ಕೆ ಹೋಗಿದ್ದ. ಕೆಲಸ ಮುಗಿಸಿ ಬರುವಷ್ಟರಲ್ಲಿ ಆತನ ಪ್ರೇಮದೊಡತಿ ನೇಣಿಗೆ ಶರಣಾಗಿದ್ದಳು.. 

ಬುಧವಾರ ಬೆಳಗ್ಗೆ ಶಮಿತಾಳ ಹೆಜ್ಜೆಯ ಸದ್ದು ನಡುಮನೆಯಲ್ಲಿ ಕೇಳದಿದ್ದಾಗ ಮನೆಯವರು ಏಕೆ ಈ ಹುಡುಗಿ ಇನ್ನೂ ಎದ್ದಿಲ್ಲವಾ? ಎಂದು ಮೇಲಿನ ಕೋಣೆಗೆ ಹೋಗಿ ಕದ ತಟ್ಟಿದ್ದಾರೆ. ಬಾಗಿಲು ಸದ್ದು ಮಾಡಿತ್ತು. ಒಳಗೆಡೆ ಅವಳು ಉಸಿರು ನಿಲ್ಲಿಸಿದ್ದಳು. ಆಚೆ ನಿಂತವರಲ್ಲಿ ಸಣ್ಣಕ್ಕೆ ಎದೆ ನಡುಗುತ್ತಿತ್ತು. ಅನುಮಾನದಲ್ಲಿಯೇ ಕಿಟಕಿಯಲ್ಲಿ ಹಣಕಿದ್ದಾರೆ. ಸಂಶಯ ಸತ್ಯವಾಗಿತ್ತು. ಇಡೀ ಮನೆ ಮೌನವಾಗಿತ್ತು. 

ಒಳಗಡೆಯಿಂದ ಲಾಕ್ ಆಗಿದ್ದ ಕೋಣೆಯನ್ನ ಶಮಿತಾಳ ತಂದೆಯ ಸಮ್ಮುಖದಲ್ಲಿಯೇ ತೆರೆದಿದ್ದಾರೆ ಆಗುಂಬೆ ಪೊಲೀಸರು. ಮಗಳನ್ನು ಆ ಸ್ಥಿತಿಯಲ್ಲಿ ನೋಡಿದ ತಂದೆಯ ಪರಿಸ್ಥಿತಿಗೆ ಏನು ಹೇಳೋದು.. ಭಗವಂತನೇ ಇಳಿದು ಬಂದು ಸಾಂತ್ವನ ಹೇಳಬೇಕಷ್ಟೆ.. 

ಮಳೆ ಸುರಿಯದ ಮೋಡದ ಆಕ್ರಂದನದಂತೆ, ಹೆತ್ತ ಹೊಟ್ಟೆಯಲ್ಲಿ ದುಃಖ ತುಂಬಿಕೊಂಡಿದ್ದ ತಂದೆ, ಪೊಲೀಸರ ಪಂಚನಾಮೆಗೆ ಅನುವುಮಾಡಿಕೊಟ್ರು. ಕೋಣೆ ತುಂಬಾ ಹುಡುಕಾಡಿದ ಪೊಲೀಸ್ ಕಣ್ಣುಗಳಿಗೆ ಕಂಡಿದ್ದು ಶಮಿತಾಳ ಡೈರಿ. ಬಹುಶಃ ಡೆತ್ ನೋಟ್ ಅಲ್ಲಿಯೇ ಇತ್ತು. ಸಾವಿನ ಸತ್ಯ ತಿಳಿದು ಪ್ರಕರಣದ ತಾರ್ಕಿಕ ಅಂತ್ಯಕ್ಕೆ ಬರಬೇಕಾಗಿದ್ದು ಪೊಲೀಸರ ಕರ್ತವ್ಯ. ಈ ಕೆಲಸವನ್ನು ನಿಷ್ಣಾತವಾಗಿ ಮಾಡ್ತಿದ್ದ ಪೊಲೀಸರಿಗೆ ಡೈರಿಯಲ್ಲಿದ್ದ ಬರಹಗಳಲ್ಲಿ ಶಮಿತಾಳ ಕೊನೆ ಮಾತುಗಳಿದ್ದವು. 

ಸೋದರಿಗೆ ಅಪ್ಪನನ್ನ ಚೆನ್ನಾಗಿ ನೋಡಿಕೊ ಎಂದು ಬರೆದಿದ್ದ ಯುವತಿ, ತನ್ನ ನಿರ್ಧಾರದಲ್ಲಿ ಯಾರ ತಪ್ಪು ಸಹ ಇಲ್ಲ. ನನ್ನ ಇಷ್ಟ ಪಟ್ಟ ಒಲವಿಗೆ ತಕ್ಕಷ್ಟು ಪ್ರೀತಿ ಪೂರ್ಣ ರೀತಿಯಲ್ಲಿ ಕೊಡಲು ಆಗುತ್ತಿಲ್ಲ ಎಂದು ಬರೆದಿದ್ದಳು. 

ಈಗ ಹೇಳಿ,, ಪ್ರೀತಿ ಕೊಡಲಾಗುತ್ತಿಲ್ಲ ಎಂಬ ಕಾರಣಕ್ಕೆ ಒಂದು ಜೀವ ತನ್ನ ಜೀವ ಕಳೆದುಕೊಳ್ಳುತ್ತದೆ ಎಂದರೆ, ಆ  ಜೀವವನ್ನ ದೂರಬೇಕೆ? ಅಥವಾ ಅವಳ ಸಾವಿಗೆ ಕಾರಣವಾದ ಪ್ರೀತಿಯನ್ನ ದೂರಬೇಕೆ? ಅರ್ಥವಾಗ್ತಿಲ್ಲ.. 


ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor