ಮಲೆನಾಡು ಟುಡೆ ಸುದ್ದಿ/ ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನ ಕಲ್ಗುಂಡಿ ಬಳಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಪಿಕ್ ಅಪ್ ವಾಹನವನ್ನು ಸ್ಥಳೀಯ ಸಾರ್ವಜನಿಕರು ಹಾಗೂ ಪೊಲೀಸರು ತಡೆದು ಕಾರ್ಯಾಚರಣೆ ನಡೆಸಿದ್ದಾರೆ.
ವಾಹನದಲ್ಲಿದ್ದ ಸುಮಾರು 8 ರಿಂದ 10 ಗೋವುಗಳನ್ನು ರಕ್ಷಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರ್ಯಾಚರಣೆಯ ವೇಳೆ ಸ್ಥಳೀಯರ ಕಣ್ಣು ತಪ್ಪಿಸಿ ಮತ್ತಿಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಬಂಧಿತ ಆರೋಪಿಗಳಲ್ಲಿ ಒಬ್ಬನನ್ನು ಕುಂದಾಪುರ ಮೂಲದ ಇಲಿಯಾಸ್ ಎಂದು ಗುರುತಿಸಲಾಗಿದ್ದು, ಈ ದನಗಳನ್ನು ವಧೆ ಮಾಡುವ ಉದ್ದೇಶದಿಂದಲೇ ಕರೆದೊಯ್ಯಲಾಗುತ್ತಿತ್ತು ಎಂಬುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ .
ಸಾರ್ವಜನಿಕ ರಸ್ತೆಗಳಲ್ಲಷ್ಟೇ ಅಲ್ಲದೆ, ಸ್ಥಳೀಯ ಗೋಶಾಲೆಗಳಿಂದಲೂ ಅಕ್ರಮವಾಗಿ ಗೋವುಗಳನ್ನು ಕದ್ದು ಸಾಗಾಟ ಮಾಡಲಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿ ದೂರು ನೀಡಿದ್ದಾರೆ.
ಜಪ್ತಿ ಮಾಡಲಾದ ವಾಹನ ಮತ್ತು ರಕ್ಷಿಸಿದ ಗೋವುಗಳನ್ನು ತೀರ್ಥಹಳ್ಳಿಯ ಸೊಪ್ಪುಗುಡ್ಡೆ ಪೊಲೀಸ್ ಠಾಣೆಯ ಎದುರು ಇರಿಸಲಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.
