ವಿದ್ಯಾರ್ಥಿ ತಪ್ಪಿಗೆ ಶಿಕ್ಷಕನಿಗೆ ಬೆತ್ತದೇಟು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಮುಂದೆ ಮೇಷ್ಟ್ರ ಗಾಂಧಿಗಿರಿ!

ಹಂಚಿಕೊಳ್ಳಿ
WhatsApp Facebook X Telegram

Shivamogga  Mar 28, 2024  master gandhigiri, government junior primary school  ಸ್ಟೂಡೆಂಟ್ಸ್‌ ತಪ್ಪು ಮಾಡಿದಾಗ ಮೇಷ್ಟ್ರು ಎರಡೇಟು ಹೊಡೆಯೋದು ಮಾಮೂಲು. ಮೊದಲೆಲ್ಲಾ ಪೋಷಕರೇ ನಮ್ಮ ಮಕ್ಕಳಿಗೆ ನೀವೇ ಸರಿ ಮೇಷ್ಟ್ರು ಹೊಡ್ದು ಬಡ್ದು ಬುದ್ದಿ ಕಲಿಸಿ ಎನ್ನುತ್ತಿದ್ರು. ಆದರೆ ಕಲಿಯುಗ ಪೀಕ್‌ ನಲ್ಲಿರುವ ಈ ಟೈಮ್‌ನಲ್ಲಿ ವಿದ್ಯಾರ್ಥಿಗಳನ್ನ ಶಿಕ್ಷಕ ಶಿಕ್ಷಿಸುವುದು ಅಪರಾಧವಾಗ್ತಿದೆ. ಹೀಗಾಗಿ ತುಂಟಾಟದ ಮಕ್ಕಳಿಗೆ ಪಾಠ ಹೇಳಿಕೊಡ್ತಾ, ಶಿಸ್ತು ಕಲಿಸುವಷ್ಟರಲ್ಲಿ ಮೇಷ್ಟ್ರು ಕಲಿತ ವಿದ್ಯೆಯನ್ನೆಲ್ಲಾ ಬಳಸಬೇಕಾಗುತ್ತದೆ.. ಈಗ್ಯಾಕೆ ಈ ಮಾತು ಅಂದರೆ,  ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಿ ಮೇಷ್ಟ್ರು ಒಬ್ಬರು ಮಕ್ಕಳಿಗೆ ಹೊಡೆಯುವ ತಾಪತ್ರಯನೇ ಬೇಡ ಅಂತಾ ನಾನೇ ಮಕ್ಕಳ ತಪ್ಪಿಗೆ ಏಟು ತಿಂತೀನಿ ಅಂತಾ ವಿದ್ಯಾರ್ಥಿಗಳ ಕೈಗೆ ಬೆತ್ತ ಕೊಡುತ್ತಿದ್ದಾರೆ. ಮೇಷ್ಟ್ರ ಈ ಗಾಂಧಿಗಿರಿ ಸಖತ್‌ ಆಗಿಯೇ ವರ್ಕ್‌ ಔಟ್‌ ಆಗ್ತಿದೆ.. 

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ

 

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಅಮೃತ ಗ್ರಾಮ ಪಂಚಾಯಿತಿ. ಅಲ್ಲಿನ ಹಳ್ಳಿ ಹಾಲಂದೂರುನಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ಮಕ್ಕಳ ಕೈಯಲ್ಲಿ ಬೆತ್ತದೇಟು ತಿನ್ನುತ್ತಾ ಶಾಲೆಯಲ್ಲಿ ಶಿಸ್ತು ಮೂಡಿಸ್ತಿದ್ದಾರೆ. ಹೌದು, ಪೆಟ್ಟು ತಿನ್ನುವುದು ದೊಡ್ಡ ವಿಷಯವಲ್ಲ, ಆದರೆ ತಾವು ಮಾಡಿದ ತಪ್ಪಿಗೆ ಮೇಷ್ಟ್ರಿಗೆ ಬೆತ್ತದೇಟು ಕೊಡಬೇಕು ಎನ್ನುವ ಭಾವ, ವಿದ್ಯಾರ್ಥಿಗಳಲ್ಲಿ ಬೇಸರ ಮೂಡಿಸ್ತಿದೆ. ಅಲ್ಲದೆ ತಪ್ಪು ಮಾಡದಂತೆ ಅವರನ್ನ ಎಚ್ಚರಿಸ್ತಿದೆ. ಅಕ್ಷರ ಕಲಿಸುವ ಜವಾಬ್ದಾರಿ ಹೊತ್ತ ಗುರುವು ಮಕ್ಕಳ ತಪ್ಪು ಸಹ ತಮ್ಮದೇ ಹೊಣೆಗಾರಿಕೆ ಅಂತಾ ಬೆತ್ತದೇಟಿಗೆ ಕೈವೊಡ್ಡುವುದು ಪೋಷಕರಲ್ಲಿಯು ಕಾಳಜಿ ಮೂಡಿಸ್ತಿದೆ. 

 

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 8 ವಿದ್ಯಾರ್ಥಿಗಳಿದ್ದಾರೆ. ಐದನೇ ಕ್ಲಾಸ್‌ ತನಕ ಇಲ್ಲಿ ಓದಬಹುದು. ಮಕ್ಕಳು ಕಮ್ಮಿಯಿದ್ದಾರೆ ಮೇಷ್ಟ್ರು ಬೇಸರ ಮಾಡಿಕೊಂಡಿಲ್ಲ. ಎಲ್ಲರ ಮೇಲೂ ನಿಗಾ ಇಟ್ಟುಕೊಂಡು ಪಾಠ ಹೇಳಿಕೊಡಬಹುದು ಎಂದು ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಸಿಟಿಗಳಲ್ಲಿ ಇರೋ ಹೈಟೆಕ್‌ ಸ್ಕೂಲ್‌ಗಳಿಗಿಂತಲೂ ಈ ಸರ್ಕಾರಿ ಶಾಲೆಯಲ್ಲಿ ಹೆಚ್ಚಿನ ಶಿಕ್ಷಣ ಮಕ್ಕಳಿಗೆ ಸಿಗುತ್ತಿದೆ. ಯಾವ ಟ್ಯೂಶನ್‌ ಇಲ್ಲಿಲ್ಲ, ಪೋಷಕರು ಮನೆಯಲ್ಲಿ ಪಾಠ ಹೇಳಿಕೊಡಬೇಕು, ಹೋಮ್‌ ವರ್ಕ್‌ ಮಾಡಿಸಬೇಕು ಅನ್ನುವ ಪ್ರಮೇಯವೂ ಇಲ್ಲ. ಏಕೆಂದರೆ ಶಿಸ್ತಿನ ಮೇಷ್ಟ್ರು ಇಲ್ಲಿ ತುಂಬಾನೇ ಕಟ್‌ನಿಟ್ಟು.. 

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ

 

ಪುಟ್ಟ ಮಕ್ಕಳು ತಪ್ಪು ಮಾಡೋದು ಸಹಜ, ಹೋಮ್ ವರ್ಕ್‌ ಮಾಡಿಲ್ಲವೆಂತಲೋ? ಹೇಳಿದ್ದು ಬರೆದಿಲ್ಲವೆಂತಲೋ? ಮರೆತು ಹೋಗಿದ್ರಿಂದಲೋ? ಗಲಾಟೆ ಮಾಡ್ತಿದ್ದಾರೆ ಅಂತಲೋ? ಅಥವಾ ಇನ್ಯಾವುದೋ ರೀತಿಯಲ್ಲಿ ಮಕ್ಕಳಿಲ್ಲಿ ತಪ್ಪು ಮಾಡಿದ್ರೆ, ಆ ಮಗುವಿನಿಂದ ಮೇಷ್ಟ್ರು ಬೆತ್ತದೇಟು ತಿಂತಾರೆ. ಪುಟ್ಟ ಕೈಗಳಿಂದ ಬಿದ್ದ ಬೆತ್ತದೇಟಿನ ನೋವು ಕಡಿಮೆಯೇ ಆದರೆ ಮೇಷ್ಟ್ರಿಗೆ ಪೆಟ್ಟು ಕೊಟ್ಟೆ ತನ್ನ ತಪ್ಪಿಗೆ ಅನ್ನೋ ಭಾವ ಪುಟ್ಟ ಮಕ್ಕಳ ದೊಡ್ಡ ಮನಸ್ಸಿಗೆ ತುಂಬಾನೇ ಪ್ರಭಾವ ಬೀರುತ್ತಿದೆ. ಮೇಷ್ಟ್ರಿಗೆ ಏಟು ಕೊಡಬೇಕಾಗುತ್ತೆ ಅಂತಾ ಮಕ್ಕಳೆ ತಮ್ಮತಮ್ಮಲ್ಲಿ ತಿಳಿದು ತಪ್ಪನ್ನ ಸರಿಮಾಡಿಕೊಳ್ತಿದ್ದಾರೆ. ಗೊತ್ತಾಗದಿದ್ದರೇ ಮೇಷ್ಟ್ರೇ ಹೇಳಿಕೊಡಿ ಅಂತಾ ಮೊದಲೇ ಕೇಳುತ್ತಿದ್ದಾರೆ. ತಪ್ಪಿಗೂ ಮೊದಲೇ ಸರಿಯಾದುದನ್ನ ಮಾಡುತ್ತಿದ್ದಾರೆ. ಇದು ಬೆತ್ತದೇಟಿನ ಕೈ ಬದಲಾವಣೆಯಾದ್ದರ ಪರಿಣಾಮ 

 

ಏನ್‌ ಮೇಷ್ಟ್ರೇ ಹೀಗೀದೆ ನಿಮ್ಮ ಸ್ಟೈಲ್‌ ಅಂದರೆ, ಶಿಕ್ಷಕ ಗೋಪಾಲ್‌ ಹೇಳೋದೇನು ಅನ್ನೋದನ್ನ ನೋಡುವುದಾದರೆ,  ಇದು ಸಣ್ಣ ಗ್ರಾಮ. ಆದರೂ ಸಹ ತಮ್ಮ ಮಕ್ಕಳನ್ನು ನಮ್ಮ ಶಾಲೆಗೆ ಕಳುಹಿಸುತ್ತಾರೆ. ಹಾಲಿ ವಿದ್ಯಾರ್ಥಿಗಳ ತಂದೆರವರು ಸಹ ನಮ್ಮ ಶಾಲೆಯಲ್ಲಿಯೇ ಓದಿದವರು. ತಪ್ಪು ಮಾಡಿದಾಗ ನಾನು ಅವರಿಗ ಏಟು ಕೊಡುವುದಕ್ಕಿಂತ, ತಪ್ಪು ಮಾಡಿದ ವಿದ್ಯಾರ್ಥಿಗಳೇ ನನಗೆ ಏಟು ನೀಡಬೇಕೆಂದು ಹೇಳಿದಾಗ ವಿದ್ಯಾರ್ಥಿಗಳು ತಪ್ಪು ಮಾಡ್ತಿಲ್ಲ, ಅವರಲ್ಲಿ ಶಿಸ್ತು ಮೂಡುತ್ತಿದೆ. ಕಲಿಕೆಯ ಆಸಕ್ತಿ ಹೆಚ್ಚುತ್ತಿದೆ. ಅದಕ್ಕಿಂತ ಸಂತೋಷ ಇನ್ನೇನಿದೆ ಅನ್ನುತ್ತಾರೆ. 

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ

 

ಇನ್ನೂ  ಹಾಲಂದೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ದಿ ಸಮಿತಿ ಕೂಡ ಶಿಕ್ಷಕರ ಪ್ರಯೋಗಕ್ಕೆ ಎಸ್‌ ಎನ್ನುತ್ತಿದೆ. ತಾವು ಮಾಡುವ ತಪ್ಪಿಗೆ ಮೇಸ್ಟ್ರಿಗೆ ನಾವೇ ಏಟು ನೀಡಬೇಕೆ ಎಂಬುದೇ ಮಕ್ಕಳಿಗೆ ದೊಡ್ಡ ವಿಚಾರವಾಗಿದೆ. ಅದರಿಂದಲೇ ಮಕ್ಕಳಲ್ಲಿ ಬದಲಾವಣೆ ಕಾಣುತ್ತಿದ್ದೇವೆ. ಆದರೆ ಶಿಕ್ಷಕ ಗೋಪಾಲ್‌ ನಿವೃತ್ತಿಯಾಗುತ್ತಿದ್ದಾರೆ. ಅವರ ಅನುಭವ ನಮ್ಮೂರ ಶಾಲೆಗೆ ಹೆಚ್ಚು ದಿನ ಸಿಗಲಾರದು ಎಂಬುದು ನಮ್ಮನ್ನ ಕಾಡುತ್ತಿದೆ ಎನ್ನುತ್ತಾರೆ ಸಮಿತಿ ಸದಸ್ಯರು 

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor