400ಕ್ಕೂ ಹೆಚ್ಚು ಜನರಿಗೆ ಉಚಿತ ಆರೋಗ್ಯ ಸೇವೆ ಒದಗಿಸಿದ ಮೊಬೈಲ್ ಆಸ್ಪತ್ರೆ

ಹಂಚಿಕೊಳ್ಳಿ
WhatsApp Facebook X Telegram
checkup camp organized by Sri Bharati Tirtha Mahaswamiji Mobile Hospital in Sringeri,

Sri Bharati Tirtha Mahaswamiji / ಮಲೆನಾಡು ಟುಡೆ ಸುದ್ದಿ / ಶೃಂಗೇರಿ / ಗ್ರಾಮೀಣ ಭಾಗದ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಸೇವೆ ಒದಗಿಸುವ ಸದುದ್ದೇಶದಿಂದ ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅಂಗಸಂಸ್ಥೆಯಾದ ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ಮೊಬೈಲ್ ಆಸ್ಪತ್ರೆಯು ಎರಡು ದಿನಗಳ ಕಾಲ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಈ ವೈದ್ಯಕೀಯ ಶಿಬಿರದ ಮೂಲಕ 400 ಕ್ಕೂ ಹೆಚ್ಚು ಸಾರ್ವಜನಿಕರು ಅಗತ್ಯ ಆರೋಗ್ಯ ತಪಾಸಣೆ ಸೇವೆಗಳನ್ನು ಪಡೆದುಕೊಂಡಿದ್ದಾರೆ.

ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ಮೊಬೈಲ್ ಆಸ್ಪತ್ರೆಯ ನೇತೃತ್ವದಲ್ಲಿ 29.06.2026 ರ ಸೋಮವಾರ ರೋಟರಿ ಕ್ಲಬ್ ಶೃಂಗೇರಿ ಹಾಗೂ ತೆಕ್ಕೂರು ಗ್ರಾಮದ ನಿವಾಸಿಗಳ ಸಹಕಾರದೊಂದಿಗೆ ತೆಕ್ಕೂರು ವೃತ್ತದ ಸಮೀಪವಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೊದಲ ದಿನದ ಶಿಬಿರ ನಡೆಯಿತು. ತದನಂತರ 30.06.2026 ರಂದು ವಿಕಾಸ ಸ್ವಸಹಾಯ ಸಂಘ ಸಿದ್ದರಮಠ ಹಾಗೂ ಶ್ರೀ ಸಿದ್ದೇಶ್ವರ ಹಳೆಯ ವಿದ್ಯಾರ್ಥಿಗಳ ಸಂಘದ ಜಂಟಿ ಆಶ್ರಯದಲ್ಲಿ ಸಿದ್ದರಮಠದ ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ರಕ್ತದಾನ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ತೆಕ್ಕೂರು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಶಿಬಿರದಲ್ಲಿ 168 ಜನರು ಪಾಲ್ಗೊಂಡು ತಪಾಸಣೆಗೊಳಪಟ್ಟರೆ, ಸಿದ್ದರಮಠದ ಆವರಣದಲ್ಲಿ ನಡೆದ ಶಿಬಿರದಲ್ಲಿ 250 ಕ್ಕೂ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಉಚಿತ ವೈದ್ಯಕೀಯ ಸೇವೆಯ ಲಾಭವನ್ನು ಪಡೆದುಕೊಂಡಿದ್ದಾರೆ.

ಈ ಆರೋಗ್ಯ ಶಿಬಿರದಲ್ಲಿ ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನುರಿತ ಮಕ್ಕಳ ತಜ್ಞರು, ನೇತ್ರ ತಜ್ಞರು, ಕಿವಿ ಮೂಗು ಗಂಟಲು ತಜ್ಞರು, ದಂತ ವೈದ್ಯರು, ಜನರಲ್ ಮೆಡಿಸಿನ್ ತಜ್ಞರು ಹಾಗೂ ಆಹಾರ ತಜ್ಞರು ಉಪಸ್ಥಿತರಿದ್ದರು. ವೈದ್ಯರ ತಂಡವು ಶಿಬಿರದಲ್ಲಿ ಪಾಲ್ಗೊಂಡ ಜನರಿಗೆ ಅಗತ್ಯ ತಪಾಸಣೆ ನಡೆಸಿ, ಸೂಕ್ತ ವೈದ್ಯಕೀಯ ಸಲಹೆಗಳನ್ನು ನೀಡಿದರು. ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪ್ರಯೋಗಾಲಯದ ಪರೀಕ್ಷೆಗಳು ಹಾಗೂ ಎಕ್ಸ್-ರೇ ಸೇವೆಗಳನ್ನು ಶೇಕಡ 50 ರಷ್ಟು ರಿಯಾಯಿತಿ ದರದಲ್ಲಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಮಳೆಯ ನಡುವೆಯೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವ ಮೂಲಕ ಆರೋಗ್ಯ ಶಿಬಿರವನ್ನು ಯಶಸ್ವಿಗೊಳಿಸಿದರು.

ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor