ಶಿವಮೊಗ್ಗ: ಶಿಕಾರಿಪುರ ತಾಲ್ಲೂಕಿನ ಹುಣಸೇಕಟ್ಟೆ ಗ್ರಾಮದಲ್ಲಿ ನಡೆದಿದ್ದ ಅಡಿಕೆ ಕಳ್ಳತನ ಪ್ರಕರಣವನ್ನು ಶಿರಾಳಕೊಪ್ಪ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಕಳವು ಮಾಡಲಾಗಿದ್ದ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನ ಸೇರಿದಂತೆ ಒಟ್ಟು 6 ಲಕ್ಷ ರೂಪಾಯಿ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.
ತೀರ್ಥಹಳ್ಳಿಯ ಶಾರೀಖ್ಗೆ 10 ವರ್ಷ ಜೈಲು! ಶಿವಮೊಗ್ಗ ಜೈಲಿಗೆ ವರ್ಗಾವಣೆ ಕೇಳಿದ್ದಕ್ಕೆ ಕೋರ್ಟ್ ನಕಾರ
ಘಟನೆಯ ವಿವರ
ಹುಣಸೇಕಟ್ಟೆ ನಿವಾಸಿ ಭುವನೇಶ್ವರ್ ಎಂಬುವರು ಮಾರ್ಚ್ 26 ಮತ್ತು 27ರ ಮಧ್ಯರಾತ್ರಿ ತಮ್ಮ ಮನೆಯ ಮುಂದಿನ ಖಾಲಿ ಜಾಗದಲ್ಲಿ ಒಣಗಲು ಹಾಕಿದ್ದ ಸುಮಾರು 16 ಕ್ವಿಂಟಾಲ್ ಸಿಪ್ಪೆ ಗೋಟು ಅಡಿಕೆಯಲ್ಲಿ, 1 ಲಕ್ಷ ರೂ. ಮೌಲ್ಯದ 4 ಕ್ವಿಂಟಾಲ್ ಅಡಿಕೆಯನ್ನು ಕಿಡಿಗೇಡಿಗಳು ಕಳ್ಳತನ ಮಾಡಿದ್ದರು. ಈ ಬಗ್ಗೆ ಭುವನೇಶ್ವರ್ ಅವರು ನೀಡಿದ ದೂರಿನನ್ವಯ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಶಿರಾಳಕೊಪ್ಪ ಪಿಎಸ್ಐ ಪ್ರಶಾಂತ್ ಕುಮಾರ್ ಟಿ.ಬಿ ನೇತೃತ್ವದ ತಂಡ ತನಿಖೆ ಕೈಗೊಂಡಿತ್ತು. ಖಚಿತ ಮಾಹಿತಿ ಬೆನ್ನತ್ತಿದ ಪೊಲೀಸರು, ಕುಂಬಾರ ಗುಂಡಿ ಕೊಪ್ಪಲುವಿನ ಮೊಹಮ್ಮದ್ ಮನ್ಸೂರ್ (30) ಮತ್ತು ಗಬ್ಬೂರು ನಿವಾಸಿ ಷಹಾದ ಉಲ್ಲಾ (35) ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನದ ಸತ್ಯಾಂಶ ಬೆಳಕಿಗೆ ಬಂದಿದೆ.
ಬಂಧಿತರಿಂದ ಕಳ್ಳತನ ಮಾಡಲಾಗಿದ್ದ 4 ಕ್ವಿಂಟಾಲ್ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ್ದ ಸುಮಾರು 5 ಲಕ್ಷ ರೂ. ಮೌಲ್ಯದ ಮಾರುತಿ ಸುಜುಕಿ ಸೂಪರ್ ಕ್ಯಾರಿ ಗೂಡ್ಸ್ ವಾಹನವನ್ನು ಜಪ್ತಿ ಮಾಡಲಾಗಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Shiralakoppa Police Arrest Two for Areca Nut Theft

