ಸ್ವಾಮೀಜಿಗಳಿಗೆ ಬೆದರಿಕೆ ಆರೋಪ ! ದೇವಸ್ಥಾನದಲ್ಲಿ ಘಂಟೆ ಹೊಡೆಯುತ್ತೇನೆ ಎಂದ ಸಂಸದ ರಾಘವೇಂದ್ರ

This Article Written by / Malenadu Today / ಮಾರ್ಚ್ 29, 2024

Shivamogga  Mar 29, 2024  ಶಿವಮೊಗ್ಗದಲ್ಲಿ ಚುನಾವಣೆ ಬರುವ ಹೊತ್ತಿಗೆ ಘಂಟೆ ಹೊಡೆಯುವ ಮಾತು ಬರುವುದು ಮಾಮೂಲಾದಂತಿದೆ. ಈ ಹಿಂದೇ ಜಿಲ್ಲೆಯ ರಾಜಕಾರಣಿಗಳು ಪವಿತ್ರ ದೇವಸ್ಥಾನಗಳಲ್ಲಿ ಘಂಟೆ ಹೊಡೆಯುತ್ತೇನೆ ಎಂದು ಸವಾಲು ಹಾಕಿದ ಉದಾಹರಣೆಗಳಿವೆ. ಈಗಿನ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ , ಬಿಜೆಪಿ ಮಾಜಿ ಶಾಸಕ ಹರತಾಳು ಹಾಲಪ್ಪ ಹಿಂದೆ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಘಂಟೆ ಹೊಡೆಯುವ ಮಾತನಾಡಿದ್ದರು. ಆ ವಿಚಾರ ಸಾಕಷ್ಟು ಚರ್ಚೆಯಾಗಿತ್ತು. ಇನ್ನೊಂದು ಪ್ರಕರಣದಲ್ಲಿ ಕಿಮ್ಮನೆ ರತ್ನಾಕರ್‌ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿದ್ದರು. ಬಿಎಸ್‌ವೈ ಹಾಗೂ ಶೋಭಾ ಕರಂದ್ಲಾಜೆಗೆ ಈ ಮೂಲಕ ಸವಾಲು ಹಾಕಿದ್ದರು. 

ಇದೀಗ ಲೋಕಸಭಾ ಚುನಾವಣೆ 2024 ರಲ್ಲಿಯು ದೇವಸ್ಥಾನದ ಘಂಟೆ ಹೊಡೆಯುವ ಮಾತು ಕೇಳಿಬಂದಿದೆ. ಈ ವಿಚಾರವನ್ನ ಸಂಸದ ಬಿವೈ ರಾಘವೇಂದ್ರರವರು ಹೇಳಿದ್ದಾರೆ. ಕೆಎಸ್‌ ಈಶ್ವರಪ್ಪ ಸ್ವಾಮೀಜಿಗಳಿಗೆ ಬಿವೈ ರಾಘವೇಂದ್ರರವರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದರು. ಬೇಕಿದ್ದರೇ ನನ್ನ ಹತ್ತಿರ ಬನ್ನಿ, ಬೆದರಿಕೆ ಹಾಕಿದ್ದನ್ನ ಸಾಬೀತು ಪಡಿಸುತ್ತೇನೆ ಎಂದು ಈಶ್ವರಪ್ಪ ಸವಾಲು ಹಾಕಿದ್ದರು. 

ಈ ಬಗ್ಗೆ ಇಂದು ಸೊರಬದಲ್ಲಿ ದೇವಸ್ಥಾನಕ್ಕೆ ತೆರಳಿ ಮತಪ್ರಚಾರ ಆರಂಭಿಸಿದ ಸಂಸದ ರಾಘವೇಂದ್ರ ಸತ್ಯಕ್ಕೆ ದೂರವಾದ ಸಂಗತಿಗಳನ್ನ ಈಶ್ವರಪ್ಪ ನವರು ಹೇಳುತ್ತಿದ್ದಾರೆ. ಸ್ವಾಮಿಜಿಗಳಿಗೆ,ಗುರುಗಳಿಗೆ ನಾನು ಬೆದರಿಕೆ ಹಾಕಿದ್ದೇನೆ ಎಂದು  ಹೇಳಿದ್ದಾರೆ. ಹಾಗೆ ಬೆದರಿಕೆ ಹಾಕಿದ್ದರೇ ತಾಯಿ ರೇಣುಕಮ್ಮ ನನ್ನನ್ನು ನೋಡಿಕೊಳ್ಳಲಿ. ಹಾಗೆ ಅವರ ಮಾತು ಸತ್ಯವಾದರೆ ನಾನು ಬಂದು ದೇವರಿಗೆ ಘಂಟೆ ಹೊಡೆಯುತ್ತೇನೆ. ಅವರು ಸಹ ಬಂದು ಘಂಟೆ ಹೊಡೆಯಲಿ .ಈ ಮಾತಿನಿಂದ ನೋವಾಗಿದೆ ನನಗೆ ಎಂದು ಸವಾಲು ಹಾಕಿದ್ದಾರೆ. 

ಯಡಿಯೂರಪ್ಪ ಕುಟುಂಬ ಸ್ವಾರ್ಥಿಗಳ ಕುಟುಂಬ ಅಂತ ಆರೋಪಿಸಿದ್ದಾರೆ. ಆದರೆ ಹೃದಯಪೂರ್ವಕವಾಗಿ ಕಾಂತೇಶ್ ಗೆ ಟಿಕೆಟ್ ಸಿಗಲಿ ಅಂತ ಆಶೀರ್ವಾದ ಮಾಡಿದ್ದೇವು. ನಮ್ಮ ಮನೆಗೆ ಬಂದು ಅವರು ಮಾತನಾಡಿದಾಗ ನಾವು ಇಲ್ಲ ಎನ್ನಲು ಸಾಧ್ಯವೆ? ಆ ನಿಟ್ಟಿನಲ್ಲಿ ಆಶೀರ್ವಾದ ಮಾಡಿದ್ದು ನಿಜ. ಅದು ಮಾತಲ್ಲ. ಆದರೆ ಸರ್ವೆ ಪ್ರಕಾರ ಕೇಂದ್ರದ ನಾಯಕರು ಟಿಕೆಟ್‌ ನೀಡಿದ್ದಾರೆ. ಈಗ ಅವರಿಗೆ ಟಿಕೆಟ್‌ ಸಿಕ್ಕಿಲ್ಲ ಎಂದು ಈಶ್ವರಪ್ಪನವರು ಹೀಗೆ ಮಾತನಾಡುತ್ತಿದ್ದಾರೆ ಎಂದ ಬಿವೈಆರ್‌  ಹಿಂದೂತ್ವದ ಬಗ್ಗೆ ಈಶ್ವರಪ್ಪ ನವರಿಂದ ನಮ್ಮ ಕುಟುಂಬ ಕಲಿಯಬೇಕಾಗಿಲ್ಲ. ಮೊನ್ನೆಯ ವರೆಗೆ ಈಶ್ವರಪ್ಪ ಬಿಜೆಪಿ ಪರ ಮಾತಾಡುತ್ತಿದ್ದರು. ವಿಜಯೇಂದ್ರನ ಬಗ್ಗೆ ವಿಶ್ವಾಸ ಇಲ್ಲ ಎಂದರೆ ಅವತ್ತೆ ಕೇಳಬಹುದಿತ್ತು ವಿಜಯೇಂದ್ರ ಮರಿ ಹುಲಿ ಎಂದ ಈಶ್ವರಪ್ಪರಿಗೆ ಈಗ ಅವರು ಬೇಡವಾದರೆ ಎಂದು ಪ್ರಶ್ನಿಸಿದರು.  ನನ್ನನ್ನ ಐದು ಲಕ್ಷ ಅಂತರದಿಂದ ಗೆಲ್ಲಿಸಬೇಕು ಎಂದು ಹೇಳಿದವರು ಯಾಕೆ ಬದಲಾದರು ಎಂಬ ಬೇಸರ ನನ್ನಲ್ಲಿದೆ ಎಂದು ತಿಳಿಸಿದರು

ಮಲೆನಾಡಿನಲ್ಲಿ ದೇವಸ್ಥಾನಕ್ಕೆ ಬಂದು ಘಂಟೆ ಹೊಡೆಯಬೇಕು ಎಂಬುದು ದೊಡ್ಡ ಸಂಗತಿ. ಸುಳ್ಳು ಹೇಳಿಲ್ಲ, ಚಾಡಿ ಹೇಳಿಲ್ಲ, ತಮ್ಮ ತಪ್ಪಿಲ್ಲ ಎಂದು ಸಾಬೀತು ಮಾಡುವುದಕ್ಕೆ ದೇವಸ್ಥಾನಕ್ಕೆ ದೇವರ ಎದುರಿನ ಘಂಟೆಯನ್ನು ಹೊಡೆಯಲಿ ಎಂದು ಊರಿನ ಹಿರಿಯರು ಅಥವಾ ಸ್ಥಳೀಯ ಮುಖಂಡರು ಹೇಳುವುದುಂಟು.ಸಂಬಂಧಿಕರ ನಡುವೆಯು ಈ ರೀತಿಯ ಸವಾಲು ಕೇಳಿಬರುತ್ತದೆ. ದಾಯಾದಿಗಳಲ್ಲಿ ಘಂಟೆ ಹೊಡೆಯುವ ವಿಚಾರ ನಂಬಿಕೆಯ ಪ್ರಶ್ನೆಯಾಗಿಸುತ್ತದೆ. ದೇವರ ಮುಂದೆ ಘಂಟೆ ಹೊಡೆಯುವುದು ಎಂದರೆ ಸುಲಭದ ಮಾತು ಸಹ ಅಲ್ಲ. ಮಲೆನಾಡ ಪ್ರತೀತಿಗಳಲ್ಲಿ ಮಾತು ಸತ್ಯವಾದರೆ ಮಾತ್ರ ಘಂಟೆ ಹೊಡೆಯುತ್ತಾರೆ. ಇಲ್ಲದಿದ್ದರೇ ಅದರ ಪರಿಣಾಮವೂ ಅವರ ಮೇಲೆ ಆಗುತ್ತದೆ ಎಂಬ ನಂಬಿಕೆ ಇದೆ.. ಈ ಕಾರಣಕ್ಕೆ ಜನರು ದೇವರ ಮುಂದಿನ ಘಂಟೆಯನ್ನು ಸತ್ಯದ ಹಾಗೂ ನ್ಯಾಯದ ತೀರ್ಮಾನ ಎಂದು ಭಾವಿಸ್ತಾರೆ. 

ಮುಂದಿನ ಸುದ್ದಿ ಒದಿ

Leave a Comment