ಶಿವಮೊಗ್ಗ: ಬಹುದಿನಗಳಿಂದ ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿದ್ದ ಸಚಿವ ಸಂಪುಟ ಪುನರ್ರಚನೆ ಕೊನೆಗೂ ನೆರವೇರಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ವಿವಿಧ ಶಾಸಕರು ರಾಜೀನಾಮೆಗೆ ಮುಂದಾಗಿದ್ದು, ಶಿವಮೊಗ್ಗದಲ್ಲೂ ಸಹ ಬಂಡಾಯದ ಬಿಸಿ ಶುರುವಾಗಿದೆ.
ಗುರುಪೂರ್ಣಿಮೆ ವಿಶೇಷ: ಶಿವಮೊಗ್ಗದ ದುರ್ಗಿಗುಡಿ ರಾಯರ ಮಠದಲ್ಲಿ ವಿಶೇಷ ಪೂಜೆ!
ಹೌದು, ಮಧು ಬಂಗಾರಪ್ಪನವರಿಗೆ ಸಚಿವ ಸ್ಥಾನ ಸಿಕ್ಕ ಬೆನ್ನಲ್ಲೇ ಜಿಲ್ಲೆಯ ಇಬ್ಬರು ಕಾಂಗ್ರೆಸ್ ಶಾಸಕರು ರಾಜೀನಾಮೆಗೆ ಮುಂದಾಗಿದ್ದಾರೆ. ಇತ್ತ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ನಾಳೆ 10 ಗಂಟೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘಂಟಾಘೋಷವಾಗಿ ಘೋಷಿಸಿದ್ದಾರೆ. ಇತ್ತ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಕೂಡ ರಾಜೀನಾಮೆಯ ಸುಳಿವು ನೀಡಿದ್ದಾರೆ.
ರಾಜೀನಾಮೆಯ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿ ಬೇಳೂರು, ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ನಾಯಕರು ಹಾಗೂ ನಿಷ್ಠಾವಂತ ಕಾರ್ಯಕರ್ತರನ್ನು ಸತತವಾಗಿ ಕಡೆಗಣಿಸಲಾಗುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು. ಪಕ್ಷದಲ್ಲಿ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಹಾಗೂ ಪ್ರಭಾವಿ ಕುಟುಂಬಗಳ ನಾಯಕರಿಗೆ ಮಾತ್ರ ಆದ್ಯತೆ ನೀಡಿ ಸೂಕ್ತ ಸ್ಥಾನಮಾನ ಕಲ್ಪಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ತಮ್ಮ ಮೂರು ಅವಧಿಯ ಶಾಸಕತ್ವ ಹಾಗೂ ಸುದೀರ್ಘ ಕಾಲ ಪಕ್ಷ ಸಂಘಟನೆಗಾಗಿ ಸಲ್ಲಿಸಿದ ನಿರಂತರ ಸೇವೆಯನ್ನು ಪರಿಗಣಿಸದೆ ತಮಗೆ ತೀವ್ರ ಅನ್ಯಾಯ ಎಸಗಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇತ್ತ ಹಿರಿಯ ಶಾಸಕ ಬಿ.ಕೆ. ಸಂಗಮೇಶ್ ಕೂಡ ಅಸಮಾಧಾನ ಹೊರಹಾಕಿದ್ದು, ಬಿಜೆಪಿ ಸರ್ಕಾರ ಇದ್ದಾಗ ದುಡ್ಡು ಹಾಗೂ ಮಂತ್ರಿಗಿರಿ ಆಮಿಷವೊಡ್ಡಿದರೂ ಪಕ್ಷ ಬಿಡದೆ ನಿಷ್ಠೆ ತೋರಿದ್ದೆ. ನಾಲ್ಕು ಬಾರಿ ಗೆದ್ದವನಿಗೆ ಈ ರೀತಿ ಮೋಸ ಮಾಡಿದರೆ, ಪಕ್ಷಕ್ಕಾಗಿ ಶ್ರಮಿಸುವ ಸಾಮಾನ್ಯ ಕಾರ್ಯಕರ್ತರನ್ನು ಹೇಗೆ ಗುರುತಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಹಿರಿಯ ಶಾಸಕನಾದ ನಿಮಗೆ ಯಾಕೆ ಸಚಿವ ಸ್ಥಾನ ನೀಡಿಲ್ಲ ಎಂದು ಕ್ಷೇತ್ರದ ಜನರು, ಕಾರ್ಯಕರ್ತರು ಮತ್ತು ಮುಖಂಡರು ಪ್ರಶ್ನಿಸುತ್ತಿದ್ದಾರೆ. ಭದ್ರಾವತಿಗೆ ತೆರಳಿ ಜನರ ಹಾಗೂ ಮುಖಂಡರ ಜೊತೆ ಚರ್ಚಿಸಿ ಅವರ ಮಾತಿಗೆ ಸಂಪೂರ್ಣ ಮನ್ನಣೆ ನೀಡುತ್ತೇನೆ. ಹೈಕಮಾಂಡ್ ವಿರುದ್ಧ ಆಕ್ರೋಶ ಹೊರಹಾಕಿದ ಅವರು, ಕಳೆದ ಬಾರಿ ಸಚಿವರಾಗಿದ್ದವರಿಗೇ ಪುನಃ ಸಚಿವ ಸ್ಥಾನ ನೀಡಲಾಗಿದೆ. ದೆಹಲಿಗೆ ಹೋಗಿ ಹೈಕಮಾಂಡ್ಗೆ ಕಿವಿ ಊದುವವರಿಗೆ ಮಾತ್ರ ಮಂತ್ರಿಗಿರಿ ಸಿಗುತ್ತಿದೆ. ನೊಂದಿರುವ ಎಲ್ಲ ಶಾಸಕರು ಒಂದೇ ಕಡೆ ಸೇರಿ ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳುತ್ತೇವೆ. ನಾಳೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದೇನೆ ಎಂದಿದ್ದಾರೆ. ಚುನಾವಣೆಯಲ್ಲಿ 136 ಸ್ಥಾನಗಳು ಬಂದಿರುವುದರಿಂದ ಕಾಂಗ್ರೆಸ್ನಲ್ಲಿ ಕೆಲವರಿಗೆ ಹಮ್ಮು ಬಂದಿದೆ. ಹತ್ತು ಮಂದಿ ಶಾಸಕರು ರಾಜೀನಾಮೆ ನೀಡಿದರೆ ಸರ್ಕಾರಕ್ಕೇನು ಆಗುವುದಿಲ್ಲ ಎಂದು ಅವರು ಭಾವಿಸಿದ್ದಾರೆ ಎಂದು ಸಂಗಮೇಶ್ ವಾಗ್ದಾಳಿ ನಡೆಸಿದರು.
