shimoga ಶಿವಮೊಗ್ಗ: ಸೊಸೆಯೊಬ್ಬಳು ಅತ್ತೆಯ ಮೇಲೆ ಕುಕ್ಕರ್ ಮುಚ್ಚಳದಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾರೆ ಎಂದು ಆರೋಪಿಸಿ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ: ಶಾಲಾ ಬಸ್ ಹರಿದು 18 ತಿಂಗಳ ಮಗು ಸಾವು
ಘಟನೆಯ ವಿವರ
ಈ ಘಟನೆ ಜಿಲ್ಲೆಯ ಪ್ರದೇಶವೊಂದರಲ್ಲಿ ನಡೆದಿದ್ದು, ಗಾಯಾಳು ವೃದ್ಧೆ ತನ್ನ ಮಗನ ಮನೆಯ ಕೆಳಭಾಗದಲ್ಲಿ ಒಬ್ಬರೇ ವಾಸವಿದ್ದರು. ಇವರ ಇನ್ನೊಬ್ಬ ಮಗ ಮತ್ತು ಸೊಸೆ ಮನೆ ಕಟ್ಟುವವರೆಗೆ ಜೊತೆಯಲ್ಲಿರುತ್ತೇವೆ ಎಂದು ಹೇಳಿ ಕಳೆದ ಕೆಲವು ತಿಂಗಳಿಂದ ವೃದ್ಧೆಯ ಮನೆಯಲ್ಲೇ ವಾಸವಿದ್ದರು. ಈ ಅವಧಿಯಲ್ಲಿ ಸೊಸೆ ಪದೇ ಪದೇ ಹಣ ಮತ್ತು ಬಂಗಾರಕ್ಕಾಗಿ ಅತ್ತೆಯೊಂದಿಗೆ ಜಗಳವಾಡುತ್ತಿದ್ದರು ಎನ್ನಲಾಗಿದೆ.
ಏಪ್ರಿಲ್ 2ರ ಬೆಳಗ್ಗೆ ಅಡುಗೆ ಮನೆಯಲ್ಲಿ ವೃದ್ಧೆ ಕ್ಯಾರೆಟ್ ಜ್ಯೂಸ್ ಮಾಡುತ್ತಿದ್ದಾಗ ಘಟನೆ ಸಂಭವಿಸಿದೆ. ನಾನು ತಂದ ತರಕಾರಿಯಿಂದ ಜ್ಯೂಸ್ ಮಾಡಲು ನನ್ನನ್ನು ಕೇಳಿದ್ದೀಯಾ? ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ ಸೊಸೆ, ಕುಕ್ಕರ್ ಮುಚ್ಚಳದಿಂದ ಅತ್ತೆಯ ತಲೆಗೆ ಹೊಡೆಯಲು ಮುಂದಾಗಿದ್ದಾರೆ.
ಈ ವೇಳೆ ಅತ್ತೆ ಕೈ ಅಡ್ಡ ಹಿಡಿದಾಗ, ಕುಕ್ಕರ್ ಮುಚ್ಚಳ ತಗುಲಿ ಅವರ ಎಡಗೈ ಅಂಗೈ ಭಾಗ ಸೀಳಿದ್ದು, ತೀವ್ರ ರಕ್ತಸ್ರಾವವಾಗಿದೆ. ರಕ್ಷಣೆಗೆಂದು ಅವರು ಕಿರುಚಿಕೊಂಡಾಗ ನೆರೆಹೊರೆಯವರು ಧಾವಿಸಿ ಜಗಳ ಬಿಡಿಸಿದ್ದಾರೆ. ತಕ್ಷಣವೇ ಗಾಯಾಳುವನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೃದ್ಧೆ ನೀಡಿದ ಹೇಳಿಕೆಯ ಆಧಾರದ ಮೇಲೆ ದೊಡ್ಡಪೇಟೆ ಪೊಲೀಸರು ಸೊಸೆಯ ವಿರುದ್ಧ ಹಲ್ಲೆ ಮತ್ತು ಕೊಲೆ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


