Fraud in Shivamogga | ಮಲೆನಾಡು ಟುಡೆ | ಶಿವಮೊಗ್ಗ | ಜುಲೈ 3, 2026 | ವಿಜಯವಾಡದಲ್ಲಿ ಟೆಲಿಫೋನ್ ಕೇಬಲ್ ಹಾಕಲು ಹಳ್ಳ ತೋಡುತ್ತಿದ್ದ ವೇಳೆ ಮೂರು ಕೆಜಿಯಷ್ಟು ಚಿನ್ನದ ಸರವಿದ್ದ ಮಡಿಕೆ ಸಿಕ್ಕಿದೆ ಎನ್ನಲಾದ ಪ್ರಕರಣಕ್ಕೆ ಶಿವಮೊಗ್ಗ ಪೊಲೀಸರು ಮೊದಲ ತಾರ್ಕಿಕ ಅಂತ್ಯ ನೀಡಿದ್ದಾರೆ. ಇಡೀ ಪ್ರಕರಣದ ವಿವರ ಹೀಗಿದೆ.
ಶಿವಮೊಗ್ಗದ ಖಾಸಗಿ ಟ್ರಾವೆಲ್ಸ್ ಮ್ಯಾನೇಜರ್ ಗೆ ಕಳೆದ ಮೇ 10ರಿಂದ 20ರ ಅವಧಿಯಲ್ಲಿ ಗಣೇಶ್ ಎಂಬಾತ ವಿಜಯವಾಡದಲ್ಲಿ ಟ್ರಂಚ್ ಮಾಡುವಾಗ ಮಣ್ಣಿನ ಮಡಿಕೆಯಲ್ಲಿ ಮೂರು ಕೆಜಿ ಚಿನ್ನದ ಸರಗಳು ಸಿಕ್ಕಿವೆ ಎಂದು ತಿಳಿಸಿದ್ದ. ತನಗೆ ಹಣದ ತುರ್ತು ಅವಶ್ಯಕತೆ ಇರುವುದರಿಂದ ಕಡಿಮೆ ರೇಟಿಗೆ ಚಿನ್ನ ನೀಡುವುದಾಗಿ ಹೇಳಿದ್ದ. ಇದನ್ನ ಮ್ಯಾನೇಜರ್ ಸಹ ನಂಬಿದ್ದರು. ನಂತರ ಮೇ 20ರಂದು ಶಿವಮೊಗ್ಗದ ಹಳೇ ಮಂಡ್ಲಿ ಏರಿಯಾದಲ್ಲಿ ಮ್ಯಾನೇಜರ್ಗೆ ಸಿಕ್ಕ ಗಣೇಶ್ ಹಾಗೂ ಇನ್ನಿಬ್ಬರು ಎರಡು ಗ್ರಾಂ ತೂಕದ ಚಿನ್ನದ ಮಣಿಯನ್ನು ಸ್ಯಾಂಪಲ್ ಆಗಿ ಕೊಟ್ಟಿದ್ದಾರೆ.
ಇದನ್ನ ಟೆಸ್ಟ್ ಮಾಡಿಸಿದ ಮ್ಯಾನೆಜರ್ಗೆ ಆರೋಪಿಗಳ ಮೇಲೆ ನಂಬಿಕೆ ಬಂದಿದೆ. ಹಾಗಾಗಿ ತಮ್ಮ ಬಳಿ ಸದ್ಯಕ್ಕೆ 10 ಲಕ್ಷ ರೂಪಾಯಿ ಇದೆ ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಆರೋಪಿಗಳು 1.5 ಕೆಜಿ ಚಿನ್ನ ನೀಡುವುದಾಗಿ ಡೀಲ್ ಮಾಡಿಕೊಂಡಿದ್ದರು. ಮಾತನಾಡಿದಂತೆ ಓಲ್ಡ್ ಮಂಡ್ಲಿಯಲ್ಲಿ ಚಿನ್ನ ಇಸ್ಕೊಳ್ಳಲು ಮ್ಯಾನೇಜರ್ ತಮ್ಮ ಇಬ್ಬರು ಸ್ನೇಹಿತರೊಂದಿಗೆ ತೆರಳಿ ದುಡ್ಡುಕೊಟ್ಟು, ದುಡ್ಡಿಗೆ ಬದಲಾಗಿ ನೀಲಿ ಕವರ್ವೊಂದನ್ನ ತಗೊಂಡು ಬಂದಿದ್ದರು. ಆನಂತರ ಅದನ್ನು ನೋಡಿದಾಗ ಕವರ್ನಲ್ಲಿದ್ದ ಆಭರಣ ನಕಲಿ ಆಗಿತ್ತು.
ಅಂತಿಮವಾಗಿ ಮೋಸದಾಟದ ಟ್ರಂಚ್ ಗುಂಡಿಗೆ ಬಿದ್ದಿದ್ದು ಗೊತ್ತಾಗುತ್ತಲೇ ಮ್ಯಾನೇಜರ್ ಗಣೇಶ ಹಾಗೂ ಇತರರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.


