incident in shivamogga / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲೆಯಲ್ಲಿ ನಡೆದ ವಿವಿಧ ಘಟನೆಗಳ ಸಂಕ್ಷಿಪ್ತ ಸುದ್ದಿಯನ್ನು ನೀಡುವ ಇವತ್ತಿನ ಮಲೆನಾಡು ಟುಡೆ ಚಟ್ಪಟ್ ನ್ಯೂಸ್ ಹೀಗಿದೆ
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ದತ್ತ ಮಂದಿರ ದೇವಸ್ಥಾನದಲ್ಲಿ ನಿನ್ನೆ ದಿನ ಭಾನುವಾರ ಸಂಭವಿಸಿದ ಲಿಫ್ಟ್ ಅವಘಡದಲ್ಲಿ ಎಂಭತ್ತು ವರ್ಷದ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನು ಶಿವಮೊಗ್ಗದ ವಿನೋಬನಗರದ ನಿವಾಸಿ ಹಾಗೂ ನಿವೃತ್ತ ಎಂಜಿನಿಯರ್ ಆಗಿದ್ದ ಕುಮಾರಸ್ವಾಮಿ ಎಂದು ಗುರುತಿಸಲಾಗಿದೆ. ದೇವಸ್ಥಾನಕ್ಕೆ ಆಗಮಿಸಿದ್ದ ಕುಮಾರಸ್ವಾಮಿ ಅವರು ಮೇಲಿನ ಮಹಡಿಗೆ ತೆರಳಲು ಲಿಫ್ಟ್ ಬಳಿ ಬಂದಿದ್ದಾರೆ. ಅಲ್ಲಿ ಅಳವಡಿಸಲಾಗಿದ್ದ ಹಳೆಯ ಮಾದರಿಯ ಮ್ಯಾನುಯಲ್ ಬಾಗಿಲನ್ನು ತೆಗೆದ ಅವರು, ಲಿಫ್ಟ್ ಬಂದಿದೆ ಎಂದು ತಪ್ಪಾಗಿ ಭಾವಿಸಿ ಹೆಜ್ಜೆ ಮುಂದಿಟ್ಟು ಒಳಗೆ ಪ್ರವೇಶಿಸಿದ್ದಾರೆ. ಅದೇ ವೇಳೆ ಲಿಫ್ಟ್ ವೇಗವಾಗಿ ಕೆಳಕ್ಕೆ ಬಂದಿದೆ, ಕೆಳಗಿದ್ದ ಕುಮಾರಸ್ವಾಮಿ ಅವರ ಮೇಲೆ ಅಪ್ಪಳಿಸಿದೆ. ಪರಿಣಾಮ ಲಿಫ್ಟ್ನ ಅಡಿಯಲ್ಲಿ ಸಿಲುಕಿದ ಅವರು ಅಲ್ಲಿಯೇ ಸಾವನ್ನಪ್ಪಿದ್ದರು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹ ಲಿಫ್ಟ್ ಅಡಿಯಿಂದ ತೆಗೆದರು. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ.
ಕಾರುಗಳ ಮುಖಾಮುಖಿ ಡಿಕ್ಕಿಗೆ ಓರ್ವ ಬಲಿ
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ತಾಲೂಕಿನ ಉಂಬೇಬೈಲು ಸಮೀಪದ ಮರಾಠಿ ಕ್ಯಾಂಪ್ ಬಳಿ ನಿನ್ನೆ ದಿನ ಭಾನುವಾರ ಎರಡು ಕಾರುಗಳ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಓರ್ವರು ಸ್ಪಾಟ್ನಲ್ಲಿಯೇ ಸಾವನ್ನಪ್ಪಿದ್ದಾರೆ. ಉಂಬೇಬೈಲು ಗ್ರಾಮದ ನಿವಾಸಿ ನಲವತ್ತೈದು ವರ್ಷದ ವಿಜಯೇಂದ್ರ ಮೃತರು. ಘಟನೆಯಲ್ಲಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಒಂದು ಕಾರು ಸಂಪೂರ್ಣವಾಗಿ ನಿಯಂತ್ರಣ ತಪ್ಪಿ ರಸ್ತೆ ಬದಿಯಿದ್ದ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದೆ. ಈ ವೇಳೆ ವಿಜಯೇಂದ್ರರಿಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ರು.
