ಮಲೆನಾಡುಟುಡೆ ಸುದ್ದಿ/ ಶಿವಮೊಗ್ಗ : ಇತ್ತೀಚೆಗೆ ತುಮಕೂರಿನ ಜ್ಯುವೆಲ್ಲರಿ ಶಾಪ್ನಲ್ಲಿ ಹಾಗೂ ಚಿಕ್ಕಮಗಳೂರಿನ ಚಿಕನ್ ಸ್ಟಾಲ್ನಲ್ಲಿ ಹಣ ಮತ್ತು ಚಿನ್ನ ಕದ್ದು ಸುದ್ದಿಯಾಗಿದ್ದ ಇಲಿ, ಇದೀಗ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಆದರೆ ಈ ಬಾರಿ ಇಲಿ ಹಣ ಕದ್ದಿದ್ದಲ್ಲ, ದೇವಸ್ಥಾನದ ಕಾಣಿಕೆ ಹುಂಡಿಯೊಳಗೆ ನುಗ್ಗಿ ಹುಂಡಿಯಲ್ಲಿದ್ದ ಹಣವನ್ನೆಲ್ಲಾ ಕಚ್ಚಿ ಹಾಕಿದ ಘಟನೆ ಇದೀಗ ಶಿವಮೊಗ್ಗದಲ್ಲಿ ಜರುಗಿದೆ.
ಚಿಕ್ಕಮಗಳೂರಿನ ಅಜ್ಜಂಪುರದ ಚಿಕನ್ ಸ್ಟಾಲ್ ಒಂದರಲ್ಲಿ ಇಡುತ್ತಿದ್ದ ಹಣವನ್ನು ಇಲಿ ತೆಗೆದುಕೊಂಡು ಹೋಗಿ ತನ್ನ ಬಿಲದಲ್ಲಿ ಇಟ್ಟುಕೊಂಡಿದ್ದ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಆ ಸಂದರ್ಭದಲ್ಲಿ ಅಯ್ಯೋ ಇಲಿ, ಅದಕ್ಕೇನು ಗೊತ್ತಿರುತ್ತೆ? ಎಂದು ಅದರ ಮೇಲೆ ಅನುಕಂಪ ತೋರಿಸಿದವರೇ ಹೆಚ್ಚು. ಆದರೆ ಆ ಘಟನೆ ಮಾಸುವ ಮುನ್ನವೇ ಮತ್ತೊಂದು ವಿಚಿತ್ರ ಘಟನೆ ಜರುಗಿದೆ. ಶಿವಮೊಗ್ಗದ ಶಾಂತಿನಗರದ ಬಂಗಾರಪ್ಪ ಬಡಾವಣೆಯಲ್ಲಿರುವ ಶ್ರೀ ವಿಜಯ ಗಣಪತಿ ದೇವಸ್ಥಾನದ ಕಾಣಿಕೆ ಹುಂಡಿಗೆ ಇಲಿ ನುಗ್ಗಿ, ಅದರಲ್ಲಿದ್ದ ಸಾವಿರಾರು ರೂಪಾಯಿ ನೋಟುಗಳನ್ನು ಕಡಿದು ಹಾಕಿದೆ.
ಅರ್ಚಕರು ಹುಂಡಿಯ ಬೀಗ ತೆರೆದಾಗ ಈ ಘಟನೆ ಬೆಳಕಿಗೆ ಬಂದಿದೆ. ಹುಂಡಿಯಲ್ಲಿದ್ದ ಮುಕ್ಕಾಲು ಭಾಗ ಹಣವನ್ನು ಇಲಿಗಳು ಕಚ್ಚಿ ನುಚ್ಚುನೂರು ಮಾಡಿವೆ. ಇದರಲ್ಲಿ 500, 200, 100, 50, 20 ಹಾಗೂ 10 ರೂಪಾಯಿಯ ನೋಟುಗಳಿದ್ದು, ಇವೆಲ್ಲವೂ ಸೇರಿ ಒಟ್ಟು 5 ರಿಂದ 6 ಸಾವಿರ ರೂಪಾಯಿ ಮೌಲ್ಯದ ಹಣ ಇರಬಹುದು ಎಂದು ಅಂದಾಜಿಸಲಾಗಿದೆ.
ಗಣೇಶ ಹಬ್ಬದ ದಿನ ಹುಂಡಿ ತೆರೆದು ಎಷ್ಟಾಗಿದೆ ಎಂದು ಲೆಕ್ಕ ಹಾಕೋಣ ಎಂದು ಕಾದಿದ್ದ ಅರ್ಚಕರಿಗೆ, ಹಬ್ಬದ ದಿನವೇ ಗಣೇಶನ ವಾಹನ ಮೂಷಿಕ ಈ ರೀತಿ ಶಾಕಿಂಗ್ ಸರ್ಪ್ರೈಸ್ ಕೊಟ್ಟಿದ್ದಾನೆ. ಇಷ್ಟು ದಿನ ಹಣ ಕಳವಾಯಿತು ಎಂದು ಪೊಲೀಸರಿಗೆ ದೂರು ನೀಡುತ್ತಿದ್ದವರು, ಇದೀಗ ಮೂಷಿಕನ ಹಾವಳಿಯಿಂದ ತಲೆಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ.
