ಮಲೆನಾಡು ಟುಡೆ ಸುದ್ದಿ / ಹೊಸನಗರ /ಹೊಸನಗರ ತಾಲೂಕಿನ ನಗರ ಸಮೀಪದ ನೂಲಿಗೇರಿ ಬಳಿ ರಸ್ತೆಗೆ ದಿಢೀರ್ ಬಂದ ಕಡವೆಯನ್ನು ತಪ್ಪಿಸಲು ಹೋದ ಕಾರು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ನಡೆದಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿ ಕಾರಿನ ಮೇಲೆಯೇ ಬಿದ್ದಿದೆ.
ಸಾಗರ ಮೂಲದ ಪ್ರಕಾಶ್ ಎಂಬವರು ಮಣಿಪಾಲ್ನಿಂದ ಸಾಗರಕ್ಕೆ ಕಾರಿನಲ್ಲಿ ವಾಪಸ್ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ನೂಲಿಗೇರಿ ಸಮೀಪ ಕಾರು ಬರುತ್ತಿದ್ದಾಗ ಕಡವೆಯೊಂದು ದಿಢೀರ್ ರಸ್ತೆಗೆ ನುಗ್ಗಿದೆ.
ರಸ್ತೆಗೆ ಬಂದ ಕಡವೆಗೆ ಕಾರು ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ವಾಹನವನ್ನು ಬದಿಗೆ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಈ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿದ್ದು, ಅದರ ಒಂದು ಭಾಗ ಕಾರಿನ ಮೇಲೆಯೇ ಬಿದ್ದಿದೆ. ಘಟನೆ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ..
