Hulikal Landslide Hero ಹೊಸನಗರ: ಆತನಿಗೆ ಕೇವಲ 18 ದಿನಗಳ ಹಿಂದಷ್ಟೇ ಹೆಣ್ಣು ಮಗು ಹುಟ್ಟಿತ್ತು. ಮಗಳ ಬಾಯಲ್ಲಿ ಅಪ್ಪ ಎಂದು ಕೇಳುವ ತವಕ, ಮಗಳೊಡನೆ ಬೆರೆತು ಆಡುವ ಆಸೆ ಆ ತಂದೆಗಿತ್ತು. ಆದರೆ ಜವಾಬ್ದಾರಿ ಯಾರ ಮನೆಯದ್ದು ಹೇಳಿ? ಏನೇ ಭಾವನೆಗಳಿದ್ದರೂ ಸಹ ಅದನ್ನೆಲ್ಲ ಬದಿಗೊತ್ತಿ ಹುಲಿಕಲ್ ಘಾಟಿಯಲ್ಲಿ ತಡೆಗೋಡೆ ನಿರ್ಮಿಸಲು ಹೊರಟ ಆತನಿಗೆ ವಿಧಿಯ ಆಟ ತಿಳಿದಿರಲಿಲ್ಲ. ತಾನು ಸಾಯುತ್ತೇನೆ ಎಂದು ಗೊತ್ತಿದ್ದರೂ ಸಹ ಆತ ನಿನ್ನೆ ಮಾಡಿದ ಕೆಲಸ ಎಲ್ಲರ ಮೆಚ್ಚುಗೆಯೊಂದಿಗೆ ವೀರಮರಣಕ್ಕೆ ಸಾಕ್ಷಿಯಾಯಿತು.
ಶಿವಮೊಗ್ಗ:ಪಾಲಿಕೆಯಿಂದ ಕಾರ್ಯಾಚರಣೆ, ಆರ್.ಟಿ.ಓ. ರಸ್ತೆಯ ಗೂಡಂಗಡಿಗಳ ತೆರವು
ನಿನ್ನೆ ಸಂಜೆ 6:30ರ ಸುಮಾರಿಗೆ ಹುಲಿಕಲ್ ಘಾಟಿಯಲ್ಲಿ ತಡೆಗೋಡೆ ನಿರ್ಮಾಣ ಮಾಡುವ ವೇಳೆ ಕಾರ್ಮಿಕರು ಧರೆ ಕುಸಿದ ಮಣ್ಣಿನ ಒಳಗೆ ಸಿಲುಕಿದ್ದರು. ನಂತರ ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ನಾಲ್ವರು ಕಾರ್ಮಿಕರನ್ನು ರಕ್ಷಿಸಿತು. ಆದರೆ ಮೂವರು ದುರಾದೃಷ್ಟವಶಾತ್ ಸಾವನ್ನಪ್ಪಿದರು. ಇಷ್ಟು ವಿಚಾರ ನಿಮಗೆಲ್ಲ ಗೊತ್ತೇ ಇದೆ. ಆದರೆ ನಿಮಗೆ ಗೊತ್ತಿರದ ಸಂಗತಿಯೆಂದರೆ, ರಾಘವೇಂದ್ರ ಎಂಬ ಕಾರ್ಮಿಕ ಇತರರನ್ನು ಉಳಿಸಲು ಪಟ್ಟ ಶ್ರಮ ಮತ್ತು ತೋರಿದ ಸಾಹಸ
ಅದು ನಿನ್ನೆ ಸಂಜೆ 6:30ರ ಸಮಯ. ಎಲ್ಲಾ ಕಾರ್ಮಿಕರು ಪರಸ್ಪರ ಮಾತನಾಡಿಕೊಂಡು ಕೆಲಸದಲ್ಲಿ ಮಗ್ನರಾಗಿದ್ದರು. ಕೆಲ ಕಾರ್ಮಿಕರಿಗೆ ಇದು ತಮ್ಮ ಬದುಕಿನ ಕೊನೆಯ ದಿನವಾಗಬಹುದು ಎಂಬ ಅರಿವೇ ಇರಲಿಲ್ಲ. ಹೇರ್-ಪಿನ್ ತಿರುವಿನಲ್ಲಿ ಮೆಲ್ಲ ಮೆಲ್ಲಗೆ ಧರೆ ಕುಸಿಯಲು ಆರಂಭಿಸಿ, ಒಮ್ಮೆಲೆ ಮಣ್ಣು ಕುಸಿಯಿತು. ಹೊಸನಗರ ತಾಲೂಕಿನ ಚಕ್ಕಾರಿನ ರಾಘವೇಂದ್ರ (40) ಎಂಬ ಕಾರ್ಮಿಕ ಸಹ ಅಲ್ಲಿಯೇ ಸಿಲುಕಿದರು. ಆ ವೇಳೆ ರಾಘವೇಂದ್ರ ತನ್ನ ಜೀವದ ಬಗ್ಗೆ ಚೂರು ಯೋಚಿಸದೆ, ತನ್ನ ಪಕ್ಕದಲ್ಲಿದ್ದ ಇಬ್ಬರು ಕಾರ್ಮಿಕರನ್ನು ಎಳೆದು ಹೊರಹಾಕಿದ್ದಾರೆ.
ಬೇರೆ ಯಾರಾದರೂ ಆ ಸ್ಥಳದಲ್ಲಿದ್ದಿದ್ದರೆ ನನ್ನ ಜೀವ ಉಳಿದರೆ ಸಾಕು ಎಂದು ತಾವೇ ಮೊದಲು ಹೊರಬರುತ್ತಿದ್ದರೇನೋ? ಆದರೆ ರಾಘವೇಂದ್ರರವರಿಗೆ ಇದು ಅಪಾಯ, ತಾನು ಸಾವನ್ನಪ್ಪುತ್ತೇನೆ ಎಂದು ತಿಳಿದಿದ್ದರೂ ಸಹ ಇಬ್ಬರು ಕಾರ್ಮಿಕರನ್ನು ರಕ್ಷಣೆ ಮಾಡಿ ವೀರಮರಣವನ್ನಪ್ಪಿದ್ದಾರೆ.
ಅವರ ಆ ಧೈರ್ಯ ಹಾಗೂ ನಿಸ್ವಾರ್ಥತೆಗೆ ಮೆಚ್ಚಲೇಬೇಕು. ಈ ಸಂದರ್ಭದಲ್ಲಿ ಅವರಿಗೆ ತಮ್ಮ 18 ದಿನದ ಮಗು, ಕುಟುಂಬ ಯಾವುದೂ ನೆನಪಿಗೆ ಬರಲಿಲ್ಲ. ಮಗುವಿನ ಬಾಯಲ್ಲಿ ತಂದೆ ಎಂಬ ಮಾತು, ಅದರೊಡನೆ ಕೂತು ಆಡುವ ಮನಸ್ಸು ಯಾವುದೂ ನೆನಪಾಗಲಿಲ್ಲ. ಆ ಕ್ಷಣಕ್ಕೆ ಅವರಿಗೆ ಅನ್ನಿಸಿದ್ದು ಏನಾದರೂ ಆಗಲಿ ಇತರರನ್ನು ಬದುಕಿಸಬೇಕು ಎಂದು. ಅವರ ಈ ಧೈರ್ಯಕ್ಕೆ ಒಂದು ಹ್ಯಾಟ್ಸಾಫ್ ಹೇಳಲೇಬೇಕು.
Hulikal Landslide Hero Raghavendra Saves 2 Lives


