ಎಲ್ಲೆಂದರಲ್ಲಿ ಗಾಡಿ ನಿಲ್ಲಿಸುವಂತಿಲ್ಲ! ಶಿವಮೊಗ್ಗ ಸಿಟಿಯ ಯಾವ ರಸ್ತೆಗಳಲ್ಲಿ ಏನೇನು ಬದಲಾವಣೆಯಾಗಿದೆ ಗೊತ್ತಾ? ಈ ಕಂಪ್ಲೀಟ್ ಮಾಹಿತಿ ಓದಿ

KARNATAKA NEWS/ ONLINE / Malenadu today/ Sep 12, 2023 SHIVAMOGGA NEWS

ಶಿವಮೊಗ್ಗ ನಗರದಲ್ಲಿ ನೋ ಪಾರ್ಕಿಂಗ್ ಏರಿಯಾಗಳು ಬದಲಾಗಿವೆ ಹಾಗಾಗಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವ ಹಾಗಿಲ್ಲ. ಅಲ್ಲದೆ ಮುಖ್ಯ ರಸ್ತೆಗಳಿಂದ ಹಿಡಿದು ಪ್ಯಾರಲಲ್​ ರೋಡಿನಲ್ಲಿ ವಾಹನ ನಿಲುಗಡೆಯನ್ನು  ದಿನಬಿಟ್ಟು ದಿನಕ್ಕೆ ಬದಲಾಯಿಸಲಾಗಿದೆ. ಹಾಗಾದರೆ ಎಲ್ಲೆಲ್ಲಿ ಏನೇನು ಬದಲಾವಣೆಯಾಗಿದೆ ಎಂಬುದನ್ನು ತಿಳಿದುಕೊಳ್ಳುವುದಾದರೆ, ಕಳೆದೊಂದು ತಿಂಗಳಿನಲ್ಲಿ ಜಿಲ್ಲಾಡಳಿತ ಈ ಸಂಬಂಧ ಮೂರು ಆದೇಶಗಳನ್ನು ಹೊರಡಿಸಿತ್ತು. 

ಕಳೆದ ಆಗಸ್ಟ್ 24 ರಂದು ಹೊರಡಿಸಿದ್ದ ಆದೇಶದಲ್ಲಿ ಮೋಟಾರು ವಾಹನ ಕಾಯ್ದೆ 1988 ಕಲಂ 177 ರನ್ವಯ ಪೂರ್ವ ಸಂಚಾರ ಪೊಲೀಸ್​ ಠಾಣಾ ವ್ಯಾಪ್ತಿಯ ರಸ್ತೆಗಳಲ್ಲಿ  ಸುಗಮ ಸಂಚಾರಕ್ಕೆ  ದಿನ ಬಿಟ್ಟು ದಿನ  ವಾಹನ ನಿಲುಗಡೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ.ಆರ್​ ಸೆಲ್ವಮಣಿ  (District Collector Dr. R. Selvamani) ಪ್ರಕಟಣೆ ನೀಡಿದ್ದರು. ಆನಂತರ ಕಳೆದ ಸೆಪ್ಟೆಂಬರ್​ ಐದು ಹಾಗೂ ನಿನ್ನೆ ಸೆಪ್ಟೆಂಬರ್​ 11 ರಂದು ಈ ಸಂಬಂಧ ಇನ್ನೆರಡು ಪ್ರಕಟಣೆಗಳನ್ನ ಹೊರಡಿಸಲಾಗಿದೆ. 

ಜಿಲ್ಲಾಡಳಿತದ ಆದೇಶದ ಪ್ರಕಾರ ಯಾವೆಲ್ಲಾ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ಏನೆಲ್ಲಾ ರೂಲ್ಸ್ ಇದೆ ಎಂಬುದರ ವಿವರ ಇಲ್ಲಿ ನೀಡುತ್ತಿದ್ದೇವೆ. 

ದಿನಬಿಟ್ಟು ದಿನ ಪಾರ್ಕಿಂಗ್

ರತ್ನಮ್ಮ ಮಾಧವ ರಾವ್ ರಸ್ತೆಯ ಸುರಭಿ ಹೋಟೆಲ್ ಕ್ರಾಸ್‍ನಿಂದ ಆದಿತ್ಯ ಡಯಾಗ್ನೋಸ್ಟಿಕ್ ಕ್ರಾಸ್‍ವರೆಗೆ ರಸ್ತೆಯ ಎರಡೂ ಬದಿಯಲ್ಲಿ ದಿನ ಬಿಟ್ಟು ದಿನ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ

ಪಾರ್ಕ್ ಬಡಾವಣೆಯ ಮುಖ್ಯ ರಸ್ತೆಯ ಕೆನರಾ ಬ್ಯಾಂಕ್ ಕ್ರಾಸ್ (ಹಳೆಯ ಸಿಂಡಿಕೇಟ್ ಬ್ಯಾಂಕ್ ) ನಿಂದ ಬಾಲ್ ರಾಜ್ ಅರಸ್ ರಸ್ತೆಯ ಜಾಯಾಲುಕಾಸ್ (ಮಧುರಾ ಪ್ಯಾರಡೈಸ್ ) ಕ್ರಾಸ್ ವರೆಗೆ ರಸ್ತೆಯ ಎರಡೂ ಬದಿಯಲ್ಲಿ ದಿನ ಬಿಟ್ಟು ದಿನ ವಾಹನ ನಿಲುಗಡೆಗೆ ಸೂಚಿಸಲಾಗಿದೆ

ವಾಸವಿ ವೃತ್ತದಿಂದ ರಾಘವೇಂದ್ರ ಸ್ವಾಮಿ ಮಠದ ರಸ್ತೆಯವರೆಗೆ ರಸ್ತೆಯ ಎರಡೂ ಬದಿಯಲ್ಲಿ ದಿನಬಿಟ್ಟು ದಿನ ವಾಹನ ನಿಲುಗಡೆಗೆ ಮಾಡಬಹುದು. 

ತಿಲಕ್ ನಗರ ಮುಖ್ಯ ರಸ್ತೆಯ ಭರತ್ ನ್ಯೂರೋಕ್ಲೀನಿಕ್ ನಿಂದ ಪಾರ್ಕ್ ಬಡವಣೆಯ ಮುಖ್ಯ ರಸ್ತೆ (ರಾಘವೇಂದ್ರ ಸ್ವಾಮಿ ಮಠದ ಹಿಂಭಾಗ ರಸ್ತೆ) ವರೆಗೆ ರಸ್ತೆಯ ಎರಡೂ ಬದಿಯಲ್ಲಿ ದಿನ ಬಿಟ್ಟು ದಿನ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. 

ಕುವೆಂಪು ರಸ್ತೆ ನಂದಿ ಪೆಟ್ರೋಲ್ ಬಂಕ್ ನಿಂದ ಶಿವಶಂಕರ ಗ್ಯಾರೇಜ್ ವರೆಗೆ ರಸ್ತೆಯ ಎರಡೂ ಬದಿಯಲ್ಲಿ ದಿನ ಬಿಟ್ಟು ದಿನ ವಾಹನ ನಿಲುಗಡೆ ಮಾಡಬಹುದು

ದಿ|| ಪಂಡಿತ್ ದೀನ್ ದಯಾಳ್ ರಸ್ತೆಯ ಆಕಾಶ್ ಇನ್ ಹೋಟೇಲ್ ನಿಂದ ಪಂಚಮುಖಿ ಅಂಜನೇಯ ಸ್ವಾಮಿ ದೇವಸ್ಥಾನದವರೆಗೆ ರಸ್ತೆಯ ಎರಡೂ ಬದಿಯಲ್ಲಿ ದಿನ ಬಿಟ್ಟು ದಿನ ವಾಹನ ನಿಲುಗಡೆ ಮಾಡಬಹುದು

ವಾಹನ ನಿಲುಗಡೆ ನಿಷೇಧ 

ತಿಲಕ್ ನಗರ ಮುಖ್ಯ ರಸ್ತೆಯಿಂದ ಭರತ್ ನ್ಯೂರೋಕ್ಲೀನಿಕ್ ರಸ್ತೆಯವರೆಗೆ ಬಲಭಾಗದಲ್ಲಿ ವಾಹನ ನಿಲುಗಡೆ ನಿಷೇಧಿಸಿ, ರಸ್ತೆಯ ಎಡಭಾಗದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ 

ತಿಲಕ್ ನಗರ ರಾಘವೇಂದ್ರಸ್ವಾಮಿ ಮಠದ ರಸ್ತೆಯಿಂದ ಜಿಲ್ಲಾ ಭೋವಿ ಸಮುದಾಯ ಭವನದವರೆಗೆ ಎಡಭಾಗದಲ್ಲಿ ವಾಹನ ನಿಲುಗಡೆ ನಿಷೇಧಿಸಿ, ಬಲಭಾಗದಲ್ಲಿ ವಾಹನ ನಿಲುಗಡೆಗೆ ಅವಕಾಸ ನೀಡಲಾಗಿದೆ 

ಕುವೆಂಪು ರಸ್ತೆಯ ನಂಜಪ್ಪ ಆಸ್ಪತ್ರೆ ಕ್ರಾಸ್ ನಿಂದ ಕೆನರಾ ಬ್ಯಾಂಕ್ ಕ್ರಾಸ್ ವರೆಗೆ ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ 

ಹೆಲಿಪ್ಯಾಡ್ ಸರ್ಕಲ್ ನಿಂದ ಕುವೆಂಪು ರಸ್ತೆ ನಂದಿ ಪೆಟ್ರೋಲ್ ಬಂಕ್ ವರೆಗೆ ವಾಹನ ನಿಲುಗಡೆ ನಿಷೇಧ. ದಿ|| ಪಂಡಿತ್ ದೀನ್ ದಯಾಳ್ ರಸ್ತೆಯಲ್ಲಿ ಜ್ಯೋತಿ ಗಾರ್ಡನ್ ನಿಂದ ಆಕಾಶ್ ಇನ್ ಹೋಟೆಲ್ ವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ 

ದಿ|| ಪಂಡಿತ್ ದೀನ್ ದಯಾಳ್ ರಸ್ತೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಬಾಲಾಜಿ ಟೂರ್ಸ್ ಅಂಡ್ ಟ್ರಾವೆಲ್ಸ್‍ವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ 

ಕುವೆಂಪು ರಸ್ತೆಯ ಶಿವಶಂಕರ ಗ್ಯಾರೇಜ್‍ನಿಂದ ಬಿ.ಜೆ.ಪಿ ಪಾರ್ಟಿ ಆಫೀಸ್ ಕ್ರಾಸ್‍ವರೆಗೆ ಬಲಭಾಗದಲ್ಲಿ ಮಾತ್ರ ವಾಹನ ನಿಲುಗಡೆಗೆ ಆದೇಶಿಸಲಾಗಿದೆ.

ಸೆಪ್ಟೆಂಬರ್​ 5 ರಂದು ಹೊರಬಿದ್ದ ಪ್ರಕಟಣೆಯಲ್ಲಿ ಏನಿದೆ

ಬಿ.ಹೆಚ್.ರಸ್ತೆಯಿಂದ ಬಾಪೂಜಿನಗರ-ಟ್ಯಾಂಕ್ ಮೊಹಲ್ಲಾ ಕಡೆಗೆ ಹೋಗುವ ರಸ್ತೆಯಲ್ಲಿ ಸರ್ಕಾರಿ ಪ್ರೌಢಶಾಲೆ, ಪ.ಪೂ.ಕಾಲೇಜು ಮತ್ತು ಪ್ರ.ದ.ಕಾಲೇಜು ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಓಡಾಟ ಹಾಗೂ ಜಿಲ್ಲಾಡಳಿತದಿಂದ ನಡೆಯುವ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳ ಮೆರವಣಿಗೆ ನಡೆಯುವುದರಿಂದ ವಾಹನ ದಟ್ಟಣೆ ಹೆಚ್ಚಾಗಿ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿರುವುದರಿಂದ ರಸ್ತೆಯಲ್ಲಿನ ವಾಹನ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್. ರವರು ವಾಹನ ನಿಲುಗಡೆಯ ಸಂಬಂಧ ಸೆಪ್ಟಂಬರ್​ ಐದರಂದು ಮತ್ತೊಂದು ಆದೇಶವನ್ನು ಹೊರಡಿಸಿದ್ದರು. 

ವಾಹನಗಳ ನಿಲುಗಡೆ ನಿಷೇಧಿತ ಸ್ಥಳ (ನೋ ಪಾರ್ಕಿಂಗ್)

ಬಿ.ಹೆಚ್.ರಸ್ತೆಯಿಂದ ಬಾಪೂಜಿ ನಗರ- ಟ್ಯಾಂಕ್ ಮೊಹಲ್ಲ ಕಡೆಗೆ ಹೋಗುವ ರಸ್ತೆಯ (ಮೀನಾಕ್ಷಿಭವನದ ಎದುರುಗಡೆ) ಬಿ.ಹೆಚ್.ರಸ್ತೆಯ ಕಡೆಯಿಂದ ಬಲಭಾಗದಲ್ಲಿ ಟಿ.ಜಿ.ನಾರಾಯಣ ಲೇಔಟ್ 2ನೇ ಕ್ರಾಸ್ ವರೆಗೆ ಎಲ್ಲಾ ವಾಹನಗಳ ನಿಲುಗಡೆ ನಿಷೇದಿಸಲಾಗಿದೆ.

ವಾಹನಗಳ ನಿಲುಗಡೆ ಸ್ಥಳ (ಪಾರ್ಕಿಂಗ್): 

ಬಿ.ಹೆಚ್.ರಸ್ತೆಯಿಂದ ಬಾಪೂಜಿ ನಗರ- ಟ್ಯಾಂಕ್ ಮೊಹಲ್ಲ ಕಡೆಗೆ ಹೋಗುವ ರಸ್ತೆಯ ಸರ್ಕಾರಿ ಪ್ರೌಢಶಾಲೆ ಕಾಂಪೌಂಡ್‍ಗೆ ಹೊಂದಿಕೊಂಡಂತೆ (ಮೀನಾಕ್ಷಿಭವನದ ಎದುರುಗಡೆ) ಬಿ.ಹೆಚ್.ರಸ್ತೆಯ ಕಡೆಯಿಂದ ಎಡಭಾಗದಲ್ಲಿ ಟಿ.ಜಿ.ನಾರಾಯಣ ಲೇಔಟ್ 2ನೇ ಕ್ರಾಸ್‍ವರೆಗೆ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗೇಟ್‍ವರೆಗೆ) ದ್ವಿಚಕ್ರ ಹಾಗೂ ಕಾರು ವಾಹನಗಳ ನಿಲುಗಡೆ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ಸೂಚಿಸಿರುತ್ತಾರೆ.

ಸೆಪ್ಟೆಂಬರ್ 11 ರಂದು ಹೊರಬಿದ್ದ ಪ್ರಕಟಣೆಯಲ್ಲಿ ಏನಿದೆ

ಶಿವಮೊಗ್ಗ ನಗರದ ಶಿವಮೂರ್ತಿ ಸರ್ಕಲ್ ಬಳಿ ಮೆಟ್ರೋ ಆಸ್ಪತ್ರೆ ಇದ್ದು ವಾಹನ ದಟ್ಟಣೆ ಹೆಚ್ಚಾಗಿ ಶಿವಮೂರ್ತಿ ಸರ್ಕಲ್‍ನಿಂದ ಹಾದು ಹೋಗುವ ಜಯನಗರ ಮುಖ್ಯ ರಸ್ತೆಯಲ್ಲಿ ಎಲ್ಲೆಂದರಲ್ಲಿ ನಿಲ್ಲಿಸಿ ಸುಗಮ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿರುತ್ತಾರೆ ಅಲ್ಲದೇ ರಸ್ತೆಯಲ್ಲಿ ಸರ್ವೋದಯ ಶಾಲೆ ಇದ್ದು, ವಿದ್ಯಾರ್ಥಿಗಳ ಓಡಾಟ ಸಹ ಹೆಚ್ಚಾಗಿರುತ್ತದೆ ಮತ್ತು ನೆಹರೂ ಸ್ಟೇಡಿಯಂಗೆ ಹೋಗುವ ದ್ವಾರವೂ ಸಹ ಇರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿರುವುದರಿಂದ ರಸ್ತೆಯಲ್ಲಿನ ವಾಹನ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಜಯನಗರ ಮುಖ್ಯ ರಸ್ತೆಯಲ್ಲಿ ಶಿವಮೂರ್ತಿ ಸರ್ಕಲ್‍ನಿಂದ ಡಿ.ಸಿ.ಕಾಂಪೌಂಡ್‍ವರೆಗೆ ಸುಗಮ ಸಂಚಾರ ದೃಷ್ಠಿಯಿಂದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್. ರವರು ನಿನ್ನೆ ವಾಹನ ನಿಲುಗಡೆ ಸಂಬಂಧ ಮತ್ತೊಂದು ಆದೇಶ ಹೊರಡಿಸಿದ್ದರು. 

ವಾಹನಗಳ ನಿಲುಗಡೆ ನಿಷೇಧಿತ ಸ್ಥಳ (ನೋ ಪಾರ್ಕಿಂಗ್)

ಜಯನಗರ ಮುಖ್ಯ ರಸ್ತೆಯಲ್ಲಿ ಶಿವಮೂರ್ತಿ ಸರ್ಕಲ್‍ನಿಂದ ಡಿ.ಸಿ. ಕಾಂಪೌಂಡ್‍ವರೆಗೆ ಎಡಭಾಗ ಹಾಗೂ ಜಯನಗರ ಮುಖ್ಯರಸ್ತೆಯಲ್ಲಿ ಶಿವಮೂರ್ತಿ ಸರ್ಕಲ್‍ನಿಂದ ಜಯನಗರ 1ನೇ ಕ್ರಾಸ್ ಬಲಭಾಗ ಎಲ್ಲಾ ವಾಹನಗಳ ನಿಲುಗಡೆ ನಿಷೇದಿಸಲಾಗಿದೆ. 

ವಾಹನಗಳ ನಿಲುಗಡೆ ಸ್ಥಳ (ಪಾರ್ಕಿಂಗ್):

ಜಯನಗರ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕ ಶೌಚಾಲಯದಿಂದ ಡಿ.ಸಿ. ಕಾಂಪೌಂಡ್‍ವರೆಗೆ ಬಲಭಾಗ ವಾಹನಗಳ ನಿಲುಗಡೆ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ಸೂಚಿಸಿರುತ್ತಾರೆ.


ಇನ್ನಷ್ಟು ಸುದ್ದಿಗಳು 


 

Leave a Comment