ವಿಶ್ವವಿಖ್ಯಾತವಾಗಿರುವ ಮಾಲ್ಗುಡಿಯ ಬಗ್ಗೆ ಶಿವಮೊಗ್ಗದಲ್ಲಿನ ಕಥೆ ಗೊತ್ತಾ?

ಹಂಚಿಕೊಳ್ಳಿ
WhatsApp Facebook X Telegram

ಇದೊಂದು ನಿಸರ್ಗದ ಸೌಂದರ್ಯದಲ್ಲಿ ಅರಳಿದ ಪುಟ್ಟ ಗ್ರಾಮ. ಸರಾಯು ನದಿ ತೀರದ, ಮಂಪಿ ಬೆಟ್ಟದ ತಪ್ಪಲಲ್ಲಿರುವ ಈ ಸುಂದರ ಗ್ರಾಮಕ್ಕೆ ಸರಿಸಾಟಿ ಇನ್ನೊಂದಿಲ್ಲ. ಜಾಗತೀಕರಣದ ಬರಾಟೆ ಇನ್ನು ಹಳ್ಳಿಯನ್ನು ಸ್ಪರ್ಷಿಸಿಲ್ಲ.ಆದರೆ ಈ ಗ್ರಾಮದಲ್ಲಿ ಸರ್ಕಾರಿ ಸೌಲಭ್ಯಗಳೆಲ್ಲವೂ ಮನೆ ಮಾಡಿದ್ದು,ಅಪ್ಪಟ ಮಾದರಿ ಗ್ರಾಮವಾಗಿದೆ.ಇದರ ಹೆಸರು ಮಾಲ್ಗುಡಿ.ಆದರೆ ಈ ಗ್ರಾಮ ಕೇವಲ ಕಲ್ಪನೆಯಲ್ಲಷ್ಟೆ ಜೀವಂತವಾಗಿದೆ.ಹೌದು ಖ್ಯಾತ ಲೇಖಕ, ಆರ್.ಕೆ ನಾರಾಯಣ್ ಕಥಾ ಸಂಕಲನದ ಮಾಲ್ಗುಡಿ ಡೇಸ್ ನಲ್ಲಿ ಪ್ರಮುಖ ಪಾತ್ರವಹಿಸುವ ಹಳ್ಳಿ ಮಾಲ್ಗುಡಿ.ಆದರೆ ಕಾಲ್ಪನಿಕ ಕಥೆಗೆ ಜೀವ ತುಂಬಿದ್ದು ಮಾತ್ರ ಆಗುಂಬೆ ಗ್ರಾಮ.ಹೀಗಾಗಿ ಮಾಲ್ಗುಡಿ ದಿನಗಳನ್ನು ನೋಡಿದಾಗಲೆಲ್ಲಾ ಪದೇ ಪದೆ ಕಾಡುವುದು ಮಾತ್ರ ಆಗುಂಬೆ ಮತ್ತು ಸುತ್ತಮುತ್ತಲ ಪರಿಸರ.

ಆಗುಂಬೆ ಅಂದರೆ ದಕ್ಷಿಣ ಭಾರತದ ಚಿರಾಪುಂಜಿ.ಜೀವವೈವಿದ್ಯತೆಯ ತಾಣ.ಸೂರ್ಯಾಸ್ಥದ ರಮಣೀಯತೆ, ಇನ್ನು ಮುಂದುವರೆದು ಅಗುಂಬೆ ಎಂದರೆ ನಕ್ಸಲ್ ಪೀಡಿತ ಪ್ರದೇಶ.ಆದರೆ ಆಗುಂಬೆಗೆ ಇನ್ನು ಒಂದು ನಾಮಾಂಕಿತವಿದೆ.ಅದೇನಂತಿರಾ ಅಗುಂಬೆ ಅಂದರೆ ಮಾಲ್ಗುಡಿ.ಹೌದು ಖ್ಯಾತ ಲೇಖಕ ಆರ್.ಕೆ ನಾರಾಯಣ್ ರವರ ಮಾಲ್ಗುಡಿ ಡೇಸ್ ಅಕ್ಷರ ರೂಪಕ್ಕೆ ಜೀವ ತುಂಬಿದ್ದು ಆಗುಂಬೆ ಗ್ರಾಮ.ಕಾಲ್ಪನಿಕ ಗ್ರಾಮವನ್ನು ವಾಸ್ಥವದಲ್ಲಿ ಸೆರೆಹಿಡಿದಿದ್ದು ಮಾತ್ರ ಮಾಲ್ಗುಡಿ ಡೇಸ್ ದಾರಾವಾಹಿಯನ್ನು ನಿರ್ದೇಶಿಸಿದ ನಟ ನಿರ್ದೇಶಕ ದಿವಂಗತ ಶಂಕರ್ ನಾಗ್.ಹಾಗಾದರೆ ಆಗುಂಬೆಗೂ ಮಾಲ್ಗುಡಿ ಡೇಸ್ ಗೂ ಇರುವ ನಂಟಿನ ಬಗ್ಗೆ ಹೇಳಲೇಬೇಕು 

ಮಾಲ್ಗುಡಿ ಡೇಸ್ ಆರ್.ಕೆ ನಾರಾಯಣ್ ಅವರ ಸಣ್ಣ ಕಥೆಗಳ ಸಂಕಲನ.ಎಲ್ಲಾ ಕಥೆಗಳೂ ದಕ್ಷಿಣ ಭಾರತದಲ್ಲಿನ ಮಾಲ್ಗುಡಿ ಎನ್ನುವ ಕಾಲ್ಪನಿಕ ಹಳ್ಳೆಯಲ್ಲಿ ನಡೆಯುವ ಕಥಾ ಹಂದರ.ಆರ್,ಕೆ ನಾರಾಯಣ್ ಅವರ ಮಾತಿನಲ್ಲಿ ಮಾಲ್ಗುಡಿ ಎಂಬುದು ಜಗತ್ತಿನ ಯಾವುದೇ ಭಾಗದಲ್ಲಿನ ಚಿರನೂತನ ಪಾತ್ರಗಳ ಊರು.ಮಾಲ್ಗುಡಿ ಸರಾಯು ನದಿಯ ತೀರದಲ್ಲಿದ್ದು,ಮೆಂಪಿ ಬೆಟ್ಟಗಳಿಂದ ಸುತ್ತುವರೆದಿರುತ್ತದೆ.ಮಾಲ್ಗುಡಿ ಎಂಬ ಪುಟ್ಟ ಊರಿನ ಜನರ ಬದುಕು ಅಲ್ಲಿ ಬರುವ ಪಾತ್ರಗಳು ಜನರ ಜೀವನಜೀವನ ಸ್ಥಿತಿಯ ಸುತ್ತ ಸಾಗುವ ಹಾಸ್ಯಮಯ, ಸರಳ ಕಥಾವಸ್ತುವೇ ಮಾಲ್ಗುಡಿ ಡೇಸ್.ಇದು ನಮ್ಮ ದೇಶದ ಆ ಕಾಲದ ಸಾಮಾಜಿಕ ಬದುಕಿಗೆ ಕನ್ನಡಿ ಹಿಡಿಯುವ ಕಥೆ.

ಮಾಲ್ಗುಡಿಯ ದಿನಗಳು ದಾರವಾಹಿ ಸರಣಿಯನ್ನು ಕನ್ನಡ ಚಿತ್ರರಂಗದ ಹೆಸರಾಂತ ನಟ ಮತ್ತು ನಿರ್ದೇಶಕ ಶಂಕರ್ ನಾಗ್ ನಿರ್ಮಿಸಿದ್ದಾರೆ.ದಾರಾವಾಹಿಯ ಎಲ್ಲಾ ಭಾಗಗಳನ್ನು ಆಗುಂಬೆಯಲ್ಲಿ ಚಿತ್ರೀಕರಿಸಲಾಗಿದೆ.ದಾರವಾಹಿಯ ಒಂದೊಂದು ಭಾಗವೂ ಆರ್,ಕೆ ನಾರಾಯಣ್ ಅವರ ಸ್ವಾಮಿ ಎಂಡ್  ಪ್ರೆಂಡ್ಸ್ ಹಾಗು ದಿ ವೆಂಡರ್ ಆಫ್ ಸ್ವೀಟ್ಸ್ ಸಂಕಲನದ ಕಥೆಗಳಾಗಿವೆ.,

ಹೌದು ಲೇಖಕ ಆರ್,ಕೆ ನಾರಾಯಣ್ ಅವರ ಕಲ್ಪನೆಯ ಹಳ್ಳಿ ಮಾಲ್ಗುಡಿ.ಅವರು ಬರೆದ ಕಥೆಗಳೆಲ್ಲವೂ ಮಾಲ್ಗುಡಿಯ ಕಥೆಗಳೇ.ಮಲೆನಾಡಿನ ಸಂಸ್ಕೃತಿಯಿಂದ ಪ್ರೇರಿತರಾದ ನಾರಾಯಣ್ ಕಲ್ಪನೆಯಲ್ಲೇ ಹಳ್ಳಿ ಕಟ್ಟಿದರು.ಆ ಹಳ್ಳಿಯ ತುಂಬಾ ಪಾತ್ರಗಳನ್ನು ಸೃಷ್ಟಿಸಿ,ಜೀವ ತುಂಬಿದರು.ಆ ಕಥೆಯೇ ಮುಂದೆ ಮಾಲ್ಗುಡಿ ಡೇಸ್ ಎಂಬ ಹೆಸರಿನಲ್ಲಿ ಖ್ಯಾತಿ ಪಡೆಯಿತು. 1987 ರಲ್ಲಿ ಶಂಕರ್ ನಾಗ್ ಮಾಲ್ಗುಡಿ ಕಥೆಗಳನ್ನು ಮೂವತ್ತೊಂಬತ್ತು ಕಂತುಗಳಲ್ಲಿ ಧಾರಾವಾಹಿ ರೂಪಿಸಿದ್ದರು.ವೆಂಡರ್ ಆಫ್ ಸ್ಟ್ರೀಟ್ಸ್,ಸ್ವಾಮಿ ಎಂಡ್ ಥೀಪ್,ಎಂಜಿನ್ ಟ್ರಬಲ್,ಸ್ವಾಮಿ ಎಂಡ್ ಪ್ರೆಂಡ್ಸ್, ದಿ ಮಿಸ್ಸಿಂಗ್ ಮೇಲ್,ಹೀಗೆ ನಾರಾಯಣ್ ಕಥೆಗೆಲ್ಲವೂ ಮಾಲ್ಗುಡಿ ಡೇಸ್ ಹೆಸರಿನ ಧಾರಾವಾಹಿಯಾಗಿ ರೂಪಾಂತರಗೊಂಡಿತು

 ಮಾಲ್ಗುಡಿ ಡೇಸ್ ದಾರಾವಾಹಿ ದೇಶವ್ಯಾಪಿ ಪ್ರಸಿದ್ದಿಯಾಗಲು ಅದರ ಕಥಾ ವಸ್ತು ಹಾಗು ಮಾಲ್ಗುಡಿ ಹಳ್ಳಿಯೇ ಕಾರಣ.ಆರ್.ಕೆ ನಾರಾಯಣ್ ಕಲ್ಪನೆಯ ಹಳ್ಳಿಗೆ ವಾಸ್ತವದ ಬೆಳಕು ಚೆಲ್ಲಿದ  ಗ್ರಾಮ ಯಾವುದು ಎಂದರೆ ಎಲ್ಲರೂ ಅಚ್ಚರಿ ಪಡುತ್ತಾರೆ.ಅದುವೇ ಶಿವಮೊಗ್ಗ ಜಿಲ್ಲೆಯ ಸೌಂದರ್ಯದ ಆಗರ ಆಗುಂಬೆ ಗ್ರಾಮ.ಸುಮಾರು 25 ವರ್ಷಗಳ ಹಿಂದೆ ದೂರದರ್ಶನ ಚಾನಲ್ ನಲ್ಲಿ ಮಾಲ್ಗುಡಿ ದಿನಗಳು ದಾರಾವಾಹಿ ಜನರನ್ನು ಯಾವ ರೀತಿ ಆಕರ್ಷಿಸಿತ್ತು ಎಂದರೆ ಮಾಲ್ಗುಡಿ ಎಂಬ ಊರಿನ ಬಗ್ಗೆ ಸಹಜವಾಗಿಯೇ ಕುತುಹಲ ಕೆರಳಿಸಿತ್ತು.ಅದು ಪ್ರಸಾರವಾಗುತ್ತಿದ್ದು,ಹಿಂದಿ ಭಾಷೆಯಲ್ಲಾದರೂ ಅದರಲ್ಲಿ ಅಭಿನಯಿಸುತ್ತಿದ್ದವರು ಕನ್ನಡ ಚಿತ್ರರಂಗದ ಪ್ರಸಿದ್ದ ನಟರು.ಸೊಗಸಾಗಿ ಮೂಡಿಬರುತ್ತಿದ್ದ ಈ ದಾರಾವಾಹಿಯನ್ನು ನಿದ್ದೆಗೆಟ್ಟಿ ಜನರು ನೋಡುತ್ತಿದ್ದರು.ಆದರೆ ಮಾಲ್ಗುಡಿ ಬಗ್ಗೆ ಮನದಲ್ಲಿ ಇದ್ದ ಅದೆಷ್ಟೋ ಕುತುಹಲಗಳಿಗೆ ತೆರೆಬೀಳುವುದು ಆಗುಂಬೆ ಗ್ರಾಮಕ್ಕೆ ಭೇಟಿ ನೀಡಿದಾಗ ಮಾತ್ರ.

ಹೌದು  ಮಾಲ್ಗುಡಿ ಎನ್ನುವುದು ಆಗುಂಬೆಯೆಂಬ ಪುಟ್ಟ ಊರಿನ ಒಂದು ಬೀದಿಯಲ್ಲಿ ಮೂಡಿಬಂದ ಕಲ್ಪನೆಯ ಸಾಕಾರರೂಪ.ದಾರಾವಾಹಿ ಚಿತ್ರೀಕರಣಗೊಂಡು 27 ವರ್ಷ ಕಳೆದರೂ ಆಗುಂಬೆಯಲ್ಲಿ ಮಾಲ್ಗುಡಿಯ ನೆನಪು ಮಾರ್ದನಿಸುತ್ತಿದೆ.ಆಗುಂಬೆಯ ಒಂದೊಂದು ಸ್ಥಳದಲ್ಲೂ ನಿಂತಾಗ ಮಾಲ್ಗುಡಿಯಲ್ಲಿ ಮೂಡಿಬಂದ ಚಿತ್ರ ನೆನಪಾಗುತ್ತದೆ.ಆಗುಂಬೆಯ ಬಸ್ ನಿಲ್ದಾಣ,ದೊಡ್ಡಮನೆ,ಮೇಗರವಳ್ಳಿಯ ರೈಸ್ ಮಿಲ್, ಸಿನಿಮಾ ಥಿಯೇಟರ್, ದಿವಾನ್ ಪೂರ್ಣಯ್ಯ ಛತ್ರ ಈಗ ನೆನಪನ್ನು ಸಾರಿ ಹೇಳುತ್ತವೆ.ಇಲ್ಲಿ ನಿಂತರೆ ವೆಂಡರ್ ಆಫ್ ಸ್ಟ್ರೀಟ್ಸ್,ಸ್ವಾಮಿ ಎಂಡ್ ಥೀಪ್,ಎಂಜಿನ್ ಟ್ರಬಲ್,ಸ್ವಾಮಿ ಎಂಡ್ ಪ್ರೆಂಡ್ಸ್, ದಿ ಮಿಸ್ಸಿಂಗ್ ಮೇಲ್,ಹೀಗೆ ನಾರಾಯಣ್ ಕಥೆಗಳೆಲ್ಲವೂ ಒಮ್ಮೆಲೆ ನೆನಪಾಗುತ್ತದೆ.

ವೆಂಡರ್ ಆಫ್ ಸ್ಟ್ರೀಟ್ಸ್,ನಲ್ಲಿ ತಂದೆ ಜಗನ್ ಹಾಗು ಮಗ ಮಾಲಿ ನಡುವೆ ಕಂಡುಬರುವ ಜನರೇಷನ್ ಗ್ಯಾಪ್,ಸ್ವಾಮಿ ಎಂಡ್ ಥೀಫ್ಸ್ ನಲ್ಲಿ ತಂದೆ ತನ್ನ ಪುಟ್ಟ ಮಗನ ಮೇಲೆ ಹೇರುವ ಒತ್ತಡಗಳು,ಇಂಜಿನ್ ಟ್ರಬಲ್ ನಲ್ಲಿ ಸಾಮಾನ್ಯ ವರ್ಗದ ವ್ಯಕ್ತಿ ಶೇಷಾದ್ರಿ ಲಕ್ಕಿಡಿಪ್ ನಲ್ಲಿ ಗೆದ್ದು ಪಡೆದ ರೋಡ್ ರೋಲರ್ ಅವಾಂತರ ..ಎಲ್ಲಾ ನೆನೆಪುಗಳು ಗೂಂಗುಡುತ್ತವೆ.,ಎಲ್ಲವೂ ಸಮಾಜದ ಪ್ರಸ್ಥುತ ವಿಚಾರಗಳೇ.ವೈಶಾಲಿ ಕಾಸರವಳ್ಳಿ,ಅನಂತ್ ನಾಗ್,ಗಿರೀಶ್ ಕಾರ್ನಾಡ್,ಶಂಕರ್ ನಾಗ್ ಲೋಹಿತಾಶ್ವ,ಹೀಗೆ ಅನೇಕ ಚಿತ್ರರಂಗದ ಕಲಾವಿದರು ಮಾಲ್ಗುಡಿಯ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ದೇಶವ್ಯಾಪಿ ಪ್ರಖ್ಯಾತಿ ಪಡೆದ  ಮಾಲ್ಗುಡಿ ಡೇಸ್ ದಾರಾವಾಹಿ ನಮ್ಮ ಗ್ರಾಮದಲ್ಲಿ ಚಿತ್ರೀಕರಣವಾಗಿದ್ದು ಎಂದರೆ ಯಾರಿಗೆ ತಾನೆ ಸಂತಸವಾಗುವುದಿಲ್ಲ.ಆಗುಂಬೆಯಲ್ಲಿ ತಿಂಗಳುಗಟ್ಟಲೆ ಚಿತ್ರೀಕರಣಗೊಂಡ ದಾರಾವಾಹಿಯಿಂದ ಸ್ಥಳೀಯರು ಆರ್ಥಿಕವಾಗಿ ಸಾಮಾಜಿಕವಾಗಿ ಬದಲಾವಣೆ ಕಂಡಿದ್ದರು.ಅದರ ನೆನಪನ್ನು ಗ್ರಾಮಸ್ಥರು ಇಂದಿಗೂ ಮೆಲಕು ಹಾಕುತ್ತಾರೆ.

ಮಾಲ್ಗುಡಿ ಡೇಸ್ ನ ಬಹುತೇಕ ಶೂಟಿಂಗ್ ನಡೆದಿರುವುದು ಈಗ ನೊಡುತ್ತಿರುವ ದೊಡ್ಡಮನೆಯಲ್ಲಿ. ಈ ಮನೆಯ ಯಜಮಾನಿ ಕಸ್ತೂರಿಯಕ್ಕ.ಅಂದು ಮಾಲ್ಗುಡಿ ಚಿತ್ರೀಕರಣ ಮನೆಯಲ್ಲಿ ನಡೆದಿದ್ದರ ಅನುಭವವನ್ನು ಅವರಿಂದಲೇ ಕೇಳಬೇಕು.ಖ್ಯಾತ ನಿರ್ದೇಶಕ ಗಿರೀಶ್ ಕಾರ್ನಾಡ್ ಅವರ ಜತೆ ಕಸ್ತೂರಿಯಕ್ಕರ ಯಜಮಾನರಾದ ವಿರೇಂದ್ರರಾಯರಿಗೆ ಇದ್ದ ಸ್ನೇಹದಿಂದ ದಾರಾವಾಹಿ ದೊಡ್ಡಮನೆಯಲ್ಲಿ ಮೂಡಿಬರಲು ಸಾಧ್ಯವಾಯಿತು. ಧಾರಾವಾಹಿಯ ಕೊನೆಯಲ್ಲಿ ಕಸ್ತೂರಿಯಕ್ಕನ ಮಕ್ಕಳು,ಸಾಕುಪ್ರಾಣಿಗಳು ಪಾತ್ರಧಾರಿಗಳಾದರು.ಶಂಕರ್ ನಾಗ್ ಚಿತ್ರೀಕರಣದ ಸಂದರ್ಭದಲ್ಲಿ ಹಳ್ಳಿಯ ಮಗನಾಗಿದ್ದ.ಜನರಿಗೆ ತೊಂದರೆಯಾದರೂ ಸ್ಪಂಧಿಸುತ್ತಿದ್ದ ಘಟನೆಯನ್ನು ಕಸ್ತೂರಿಯಕ್ಕ ನೆನಪಿಸಿಕೊಳ್ಳುತ್ತಾರೆ.

ಮಾಲ್ಗುಡಿ ಡೇಸ್ ಚಿತ್ರೀಕರಣದಲ್ಲಿ ಸ್ಥಳೀಯರು ಪಾತ್ರ ನಿರ್ವಹಿಸಿದ್ದನ್ನು ಮರೆಯುವುದಿಲ್ಲ.ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸಿರುವ ಇಲ್ಲಿನ ಜನರು ಮಾಲ್ಗುಡಿ ಎಂದರೆ ಶಂಕರ್ ನಾಗ್ ರನ್ನು ಮರೆಯುವುದಿಲ್ಲ.ದಾರವಾಹಿಯ ನಿರ್ದೇಶಕರಾಗಿ ಪ್ರತಿಯೊಂದು ಕಥೆಯನ್ನು ನೈಜವಾಗಿ ತೆರೆಗೆ ತಂದ ಶಂಕರ್ ನಾಗ್ ಪ್ರತಿಭೆ,ಬಾಲಕಲಾವಿದನಾಗಿ ಜನಮನ ಗೆದ್ದ ಮಾಸ್ಟರ್ ಮಂಜುನಾಥ್ ತುಂಟತನದ ನಟನೆ ಎಂದೆಂದು ನೆನಪನ್ನು ಮರುಕಳಿಸುತ್ತದೆ. ಈಗಲೂ ಮಾಲ್ಗುಡಿ ಡೇಸ್ ದಾರಾವಾಹಿಯ ಟೈಟಲ್ ಸಾಂಗ್ ರಿಂಗ್ ಟೋನ್ ಕೇಳಿದರೆ  ರೋಮಾಂಚನದ ಅನುಭವ ನೆನಪಾಗುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಆಗುಂಬೆ ಅಂದು ಹೇಗಿತ್ತೋ ಈಗಲೂ ಹಾಗೆಯೇ ಇದೆ.ಎಲ್ಲೋ ಸಣ್ಣಪುಟ್ಟ ಬದಲಾವಣೆಗಳಾಗಿವೆ.ಕಥಾನಾಯಕ ಸ್ವಾಮಿ ಓದಿದ್ದ ಶಾಲೆ ಬೇರೆ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ.ಎಪಿಸೋಡ್ ಗಾಗಿ ಆಗುಂಬೆ ಸರ್ಕಲ್ ನಲ್ಲಿ ಇಡಲಾಗಿದ್ದ ಬ್ರಿಟೀಷ್ ಅಧಿಕಾರಿ ಸರ್,ಫೆಡ್ರಿಕ್ ಲಾಲೆ ವಿಗ್ರಹ ಇನ್ನು ಹಾಗೆಯೇ ಉಳಿದಿದೆ.ಹಿಂದೆ ಪೊಲೀಸ್ ಠಾಣೆಯ ಪುಟ್ಟ ಕಟ್ಟಡ ಎ.ಎನ್.ಎಫ್ ಚೆಕ್ ಪೋಸ್ಟಾಗಿದೆ.ಲಾಲೆ ಮತ್ತು ಪೂರ್ಣಯ ಛತ್ರಗಳು ಅಂದಿನ ನೆನಪನ್ನು ಸಾರಿ ಹೇಳುವ ವಸ್ತುಗಳಾಗಿವೆ.ಕೆಲವರು ಆಗುಂಬೆಯನ್ನು ಈಗಲೂ ಮಾಲ್ಗುಡಿ ಎಂದೇ ಕರೆಯುವುದು ನಮಗೆ ಹೆಮ್ಮೆಯ ವಿಷಯವೆಂದು ಹೇಳುತ್ತಾರೆ.

 ಮಾಲ್ಗುಡಿ ಡೇಸ್ ಕಥಾ ಸರಣಿಯಲ್ಲಿ ಪೆಡ್ರಿಕ್ ಲಾಲೆ ಎಂಬ ಬ್ರಿಟೀಷ್ ಸರ್ವಾಧಿಕಾರಿಯೊಬ್ಬನ ಕಥೆಯೂ ಬರುತ್ತದೆ.ಧಾರಾವಹಿ ನಿರ್ಮಾಣವಾದ ವೇಳೆ ದಿವಂಗತ ಶಂಕರ್ ನಾಗ್ ಅವರು ಪ್ಯಾರಿಸ್ ಆಪ್ ಪ್ಲಾಸ್ಟರ್ ನಿಂದ ನಿರ್ಮಿಸಲ್ಪಟ್ಟ ಪೆಡ್ರಿಕ್ ಲಾಲೆಯ ಆಳೆತ್ತರದ ಪ್ರತಿಮೆಯನ್ನು ನಿರ್ಮಿಸಿ ಅದನ್ನು ಮಾಲ್ಗುಡಿ ಅರ್ಥಾತ್ ಆಗುಂಬೆ ಸರ್ಕಲ್ ನಲ್ಲಿ ನಿಲ್ಲಿಸುತ್ತಾರೆ.ಅಂದಿನಿಂದ ಸುಮಾರು ಸಮಯ ಧಾರಾವಾಹಿ ತಂಡ ಊರನ್ನು ತೊರೆದು ಹೋದ ಬಳಿಕವೂ ಈ ರಸ್ತೆ ಲಾಲೆ ಬೀದಿ ಎಂದು ಕರೆಸಿಕೊಂಡಿದೆ.ಆದರೆ ಗ್ರಾಮಪಂಚಾಯಿತಿ ಆಡಳಿತ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಲಾಲೆ ಪ್ರತಿಮೆಯನ್ನು ಸ್ಥಳಾಂತರಿಸಿದೆ.ಈಗ ಲಾಲೆ ಪ್ರತಿಮೆ ಮರದ ಬುಡದಲ್ಲಿ ಆಶ್ರಯ ಪಡೆದಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor