Consumer Court / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಖಾತೆಯಲ್ಲಿ ಹಣವಿದ್ದರೂ ಆಟೋ ಡೆಬಿಟ್ ಮೂಲಕ ವಿಮಾ ಕಂತು ಪಾವತಿಸಿಕೊಳ್ಳದೆ, ನೋಟೀಸ್ ನೀಡದೆ ವಿಮಾ ಪಾಲಿಸಿ ರದ್ದುಗೊಳಿಸಿ ಸೇವಾ ನ್ಯೂನತೆ ಎಸಗಿದ್ದ ಕೆನರಾ ಬ್ಯಾಂಕ್ ಹಾಗೂ ಕೆನರಾ ಹೆಚ್ಎಸ್ಬಿಸಿ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಲೈಫ್ ಇನ್ಶೂರೆನ್ಸ್ ಕಂಪನಿಗೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಪರಿಹಾರ ಹಾಗೂ ದಂಡ ವಿಧಿಸಿ ಆದೇಶ ನೀಡಿದೆ. ವಾರ್ತಾ ಇಲಾಖೆಯ ಮೂಲಕ ಈ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇಡೀ ಪ್ರಕರಣದ ವಿವರ ಹೀಗಿದೆ.
ನಡೆದ ಘಟನೆ ವಿವರ
ಶಿವಮೊಗ್ಗದ ಬಾರಂಗಿ ನಿವಾಸಿ ಸುಮ ಎಂಬವರು ತಮ್ಮ ವಕೀಲರ ಮೂಲಕ ವಿಮಾ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಹಾಗೂ ಕೆನರಾ ಬ್ಯಾಂಕ್ ಸೊರಬ ಶಾಖೆಯ ವ್ಯವಸ್ಥಾಪಕರ ವಿರುದ್ಧ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದರು. ದೂರುದಾರರ ಪತಿ ನಟರಾಜನಾಯ್ಕ ಅವರು ಕೆನರಾ ಜೀವ ಭೀಮಾ ಸ್ಮಾರ್ಟ್ ಸುರಕ್ಷಾ ಪ್ಲಾನ್ ಅಡಿಯಲ್ಲಿ ವಿಮಾ ಪಾಲಿಸಿ ಪಡೆದಿದ್ದರು. ವಾರ್ಷಿಕ ಕಂತು ರೂ.7,854.80 ಅನ್ನು ದೂರುದಾರರ ಖಾತೆಯಿಂದ ಆಟೋ ಡೆಬಿಟ್ ಮೂಲಕ ಜಮಾ ಮಾಡಿಕೊಳ್ಳಬೇಕಾಗಿತ್ತು. ಆದರೆ 21/01/2023 ರಂದು ಖಾತೆಯಲ್ಲಿ ಹಣವಿಲ್ಲದ ಕಾರಣ ಕಂತು ಪಾವತಿಯಾಗಿರಲಿಲ್ಲ. ತದನಂತರ ಖಾತೆಗೆ ವೇತನದ ಹಣ ಜಮೆಯಾಗಿದ್ದರೂ ಬ್ಯಾಂಕಿನವರು ಕಂತಿನ ಹಣವನ್ನು ಡೆಬಿಟ್ ಮಾಡಿಕೊಳ್ಳಲು ವಿಫಲರಾಗಿದ್ದರು. ಈ ನಡುವೆ ದಿನಾಂಕ 24/05/2023 ರಂದು ವಿಮೆದಾರ ನಟರಾಜನಾಯ್ಕ ನಿಧನ ಹೊಂದಿದ್ದರು. ದೂರುದಾರರು ವಿಮಾ ಹಣಕ್ಕೆ ಕೋರಿಕೆ ಸಲ್ಲಿಸಿದಾಗ, ವಿಮಾ ಪಾಲಿಸಿಯು ರದ್ದಾಗಿದೆ ಎಂದು ತಿಳಿಸಲಾಗಿತ್ತು. ಯಾವುದೇ ಮುನ್ಸೂಚನೆ ಅಥವಾ ನೋಟೀಸ್ ನೀಡದೆ ಪಾಲಿಸಿ ರದ್ದುಗೊಳಿಸಿರುವುದು ಸೇವಾ ನ್ಯೂನತೆ ಎಂದು ಆರೋಪಿಸಿ ಪತ್ನಿ ಸುಮ ಅವರು ಗ್ರಾಹಕ ಆಯೋಗದ ಮೆಟ್ಟಿಲೇರಿದ್ದರು.
ಆಯೋಗದ ತೀರ್ಪು
ದೂರು ಹಾಗೂ ದಾಖಲೆಗಳನ್ನು ಪರಿಶೀಲಿಸಿದ ಆಯೋಗವು, ವಿಮಾ ಸಂಸ್ಥೆ ಮತ್ತು ಬ್ಯಾಂಕ್ನಿಂದ ಸೇವಾ ನ್ಯೂನತೆಯಾಗಿರುವುದು ಸಾಬೀತಾಗಿದೆ ಎಂದು ತೀರ್ಮಾನಿಸಿತು.
ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಹಾಗೂ ಸದಸ್ಯರಾದ ಬಿ.ಡಿ.ಯೋಗಾನಂದ ಅವರನ್ನೊಳಗೊಂಡ ಪೀಠವು ಪಾಲಿಸಿಯ ಫಲವತ್ತೆಯ ಮೊತ್ತ ರೂ. 20,00,000 (ಇಪ್ಪತ್ತು ಲಕ್ಷ ರೂ.) ಅನ್ನು ದಿನಾಂಕ 04/07/2023 ರಿಂದ ಅನ್ವಯವಾಗುವಂತೆ ವಾರ್ಷಿಕ ಶೇ. 8 ರಷ್ಟು ಬಡ್ಡಿಯೊಂದಿಗೆ 45 ದಿನಗಳ ಒಳಗಾಗಿ ಪಾವತಿಸಬೇಕು. ತಪ್ಪಿದ್ದಲ್ಲಿ ಶೇ. 10 ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ. ಹಾಗೂ ದೂರುದಾರರಿಗೆ ಉಂಟಾದ ಮಾನಸಿಕ ಹಿಂಸೆಗೆ ರೂ. 50,000/- ದಂಡ. ದೂರಿನ ವೆಚ್ಚ ದೂರಿನ ಖರ್ಚಿಗಾಗಿ ರೂ.10,000/- ಪಾವತಿಸಲು ಆದೇಶಿಸಲಾಗಿದೆ.
