Madhu Bangarappa ಶಿವಮೊಗ್ಗ ಜಿಲ್ಲೆಯ ಪ್ರವಾಸವನ್ನು ಮುಕ್ತಾಯಗೊಳಿಸಿ ಬೆಂಗಳೂರಿಗೆ ಹಿಂದಿರುಗುವ ಮಾರ್ಗಮಧ್ಯೆ ಸಚಿವ ಮಧು ಬಂಗಾರಪ್ಪ ಅವರು ಬೀರೂರು ಪಟ್ಟಣದ ಪ್ರೀತಿ ಕ್ಯಾಂಟೀನ್ಗೆ ಭೇಟಿ ನೀಡಿ ಉಪಹಾರ ಸೇವಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ತಮ್ಮ ತಂದೆಯವರಾದ ದಿ. ಎಸ್. ಬಂಗಾರಪ್ಪ ಅವರು ಇದೇ ಮಾರ್ಗದಲ್ಲಿ ಸಂಚರಿಸುವಾಗಲೆಲ್ಲಾ ನಿಯಮಿತವಾಗಿ ಭೇಟಿ ನೀಡುತ್ತಿದ್ದ ಈ ಹೋಟೆಲ್ಗೆ ತೆರಳಿ ಮಧು ಬಂಗಾರಪ್ಪ ಅವರು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಎಸ್. ಬಂಗಾರಪ್ಪ ಅವರು ಶಿವಮೊಗ್ಗ ಹಾಗೂ ಬೆಂಗಳೂರು ನಡುವೆ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಬೀರೂರಿನ ಈ ಪ್ರೀತಿ ಕ್ಯಾಂಟೀನ್ಗೆ ತಪ್ಪದೇ ಭೇಟಿ ನೀಡುತ್ತಿದ್ದರು. ಅಲ್ಲಿ ಉಪಹಾರ ಸೇವಿಸಿದ ಬಳಿಕವಷ್ಟೇ ತಮ್ಮ ಮುಂದಿನ ಪ್ರಯಾಣವನ್ನು ಮುಂದುವರಿಸುವುದು ಅವರ ವಾಡಿಕೆಯಾಗಿತ್ತು. ಇಂದು ಅದೇ ಕ್ಯಾಂಟೀನ್ಗೆ ಭೇಟಿ ನೀಡಿದಾಗ ತಮಗೆ ತಂದೆಯವರೊಂದಿಗಿನ ಹಳೆಯ ನೆನಪುಗಳು ಕಾಡಿದವು ಎಂದು ಸಚಿವರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
ಸಚಿವ ಮಧು ಬಂಗಾರಪ್ಪ ಅವರು ಪ್ರೀತಿ ಕ್ಯಾಂಟೀನ್ಗೆ ಭೇಟಿ ನೀಡುತ್ತಿದ್ದಂತೆಯೇ ವಿಚಾರ ತಿಳಿದ ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಬಳಿಕ ಎಲ್ಲರೂ ಒಟ್ಟಾಗಿ ಕುಳಿತು ಉಪಹಾರ ಸವಿದಿದ್ದಾರೆ. ಈ ಕ್ಯಾಂಟೀನ್ನಲ್ಲಿ ತಯಾರಿಸಲಾಗುವ ಉಪಹಾರದ ರುಚಿಯು ಎಸ್. ಬಂಗಾರಪ್ಪ ಅವರನ್ನು ಬಹಳವಾಗಿ ಆಕರ್ಷಿಸಿತ್ತು. ಅದೇ ರೀತಿ ತಮಗೂ ಕೂಡ ಇಲ್ಲಿನ ದೋಸೆಯ ರುಚಿ ಅತ್ಯಂತ ಇಷ್ಟವಾಯಿತು ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಬೀರೂರು ಪಟ್ಟಣದ ಅಭಿವೃದ್ಧಿ ಕಾಮಗಾರಿಗಳು ಹಾಗೂ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಸಚಿವರೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು ಸುದೀರ್ಘ ಚರ್ಚೆ ನಡೆಸಿದ್ದಾರೆ. ಕ್ಯಾಂಟೀನ್ನ ಮಾಲೀಕರಾದ ಪ್ರಕಾಶ್ ಹಾಗೂ ದೀಪು ಸೇರಿದಂತೆ ಅಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿಯೊಂದಿಗೆ ಸಚಿವರು ಕೆಲಕಾಲ ಮಾತುಕತೆ ನಡೆಸಿ ಸಮಯ ಕಳೆದಿದ್ದಾರೆ. ಈ ವೇಳೆ ಹೋಟೆಲ್ ಮಾಲೀಕರು ಹಾಗೂ ಸಿಬ್ಬಂದಿ ಎಸ್. ಬಂಗಾರಪ್ಪ ಅವರೊಂದಿಗಿನ ತಮ್ಮ ಹಳೆಯ ಒಡನಾಟದ ಕ್ಷಣಗಳನ್ನು ಸಚಿವರೊಂದಿಗೆ ಹಂಚಿಕೊಂಡಿದ್ದಾರೆ.
ಹಲವಾರು ದಶಕಗಳಿಂದ ಗ್ರಾಹಕರಿಗೆ ನಿರಂತರವಾಗಿ ಉತ್ತಮ ಗುಣಮಟ್ಟದ ತಿಂಡಿ ಹಾಗೂ ತಿನಿಸುಗಳನ್ನು ನೀಡುತ್ತಾ ಬರುತ್ತಿರುವ ಪ್ರೀತಿ ಕ್ಯಾಂಟೀನ್ನ ಸೇವೆಯನ್ನು ಸಚಿವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಈ ಅನಿರೀಕ್ಷಿತ ಭೇಟಿಯ ಸಂದರ್ಭದಲ್ಲಿ ನೆರೆದಿದ್ದ ಪ್ರತಿಯೊಬ್ಬರೂ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರನ್ನು ನೆನಪಿಸಿಕೊಂಡಿದ್ದು ಹಾಗೂ ಅವರೊಂದಿಗಿನ ಒಡನಾಟದ ಕ್ಷಣಗಳನ್ನು ಹಂಚಿಕೊಂಡಿದ್ದನ್ನು ಆಲಿಸಿ ತಮ್ಮ ಮನಸ್ಸಿಗೆ ಅತೀವ ಹಿತವೆನಿಸಿದೆ ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ. ಪ್ರೀತಿ ಕ್ಯಾಂಟೀನ್ನ ಮಾಲೀಕರು ಹಾಗೂ ಬೀರೂರಿನ ಸ್ಥಳೀಯರ ಪ್ರೀತಿ ಮತ್ತು ವಿಶ್ವಾಸವನ್ನು ತಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
