ಶಿವಮೊಗ್ಗ / ಭದ್ರಾವತಿಯಲ್ಲಿ ಮಗಳ ಮದುವೆಗಾಗಿ ಸಾಲ ಪಡೆದ ವ್ಯಕ್ತಿಯೊಬ್ಬರು, ಸಾಲ ಹಾಗೂ ಬಡ್ಡಿ ಹಣಕ್ಕೆ ಪ್ರತಿಯಾಗಿ ಮನೆಯನ್ನು ಬರೆದುಕೊಡುವಂತೆ ಮಾನಸಿಕ ಹಿಂಸೆ ನೀಡಿದ ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ, ಇಬ್ಬರು ಆರೋಪಿಗಳಿಗೆ ಕೋರ್ಟ್ 10 ವರ್ಷ ಕಠಿಣ ಕಾರಾಗೃಹವಾಸದ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ. ಈ ತೀರ್ಪು ಮೀಟರ್ ಬಡ್ಡಿ ದಂಧೆಯ ವಿಚಾರದಲ್ಲಿ ಮಹತ್ವದ್ದು ಎನಿಸಿದೆ.
ನ್ಯಾಯಾಲಯದ ಆದೇಶಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಇಲ್ಲಿ ಗಮನಿಸಿ : COURT LIVE
ಮಗಳ ಮದುವೆ ಸಾಲಕ್ಕೆ ಮನೆ ಕೇಳಿದ ದಂಪತಿ!
2021ರ ಮಾರ್ಚ್ 12ರಂದು ನಡೆದ ಪ್ರಕರಣವಿದು. ಮೃತ ರಾಮಚಂದ್ರ ಮಗಳ ಮದುವೆ ಖರ್ಚಿಗಾಗಿ ಮಹದೇವ ಮತ್ತು ಯಶೋದ ಎಂಬ ದಂಪತಿಯಿಂದ ಕೈಸಾಲ ಪಡೆದಿದ್ದರು. ಆದರ ಹೀಗೆ ಪಡೆದ ಮಗಳ ಮದುವೆ ಸಾಲವನ್ನು ಹಿಂದಿರುಗಿಸಲು ಹೋದಾಗ, ಆರೋಪಿಗಳು ಬಡ್ಡಿ ಹಣವನ್ನು ಸೇರಿಸಿ ಕೊಡಬೇಕು ಇಲ್ಲವಾದರೆ ಮನೆಯನ್ನು ತಮ್ಮ ಹೆಸರಿಗೆ ಬರೆದುಕೊಡಬೇಕು ಎಂದು ಒತ್ತಾಯಿಸಿದ್ದರು. ಅಷ್ಟೇ ಅಲ್ಲದೆ, ಅಸಭ್ಯ ಶಬ್ದಗಳಿಂದ ನಿಂದಿಸಿ, ಹೀಯಾಳಿಸಿ ಮತ್ತು ಬೆದರಿಕೆ ಹಾಕಿದ್ದರು. ಈ ಮಾನಸಿಕ ಹಿಂಸೆಯನ್ನು ತಡೆಯಲಾರದೆ ರಾಮಚಂದ್ರ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಸಂಬಂಧ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ), 504, 506 ಜೊತೆಗೆ 34 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ನಡೆಸಿದ ಅಂದಿನ ಪಿಎಸ್ಐ ಈರೇಶ್ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ರತ್ನಮ್ಮ ಪಿ. ಅವರು ವಾದ ಮಂಡಿಸಿದ್ದರು.
ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಆರೋಪಿಗಳ ವಿರುದ್ಧದ ಆರೋಪಗಳು ದೃಢಪಟ್ಟಿವೆ. ಈ ಹಿನ್ನೆಲೆಯಲ್ಲಿ, ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚಿಟ್ಟಿ ಯಾರ್ ನಿನ್ನೆ ದಿನ ಅಂದರೆ 09-04-2026 ರಂದು ಇಬ್ಬರು ಆರೋಪಿಗಳಿಗೂ 10 ವರ್ಷ ಜೈಲು ಮತ್ತು ತಲಾ 2,00,000/- ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಮೇಲಾಗಿ ಆರೋಪಿಗಳಿಂದ ದಂಡ ರೂಪದಲ್ಲಿ ಸಂಗ್ರಹಿಸಿದ ಹಣದ ಪೈಕಿ 1,00,000/- ರೂ ಹಣವನ್ನು ಮೃತ ರಾಮಚಂದ್ರ ಅವರ ಪತ್ನಿಗೆ ಪರಿಹಾರ ರೂಪವಾಗಿ ನೀಡಲು ನ್ಯಾಯಾಲಯ ಆದೇಶಿಸಿದೆ. ಶಿವಮೊಗ್ಗ ಜಿಲ್ಲಾ ಪೊಲೀಸರು ಈ ತೀರ್ಪಿನ ಬಗ್ಗೆ ಜಾಗೃತಿ ಮೂಡಿಸಲು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟರ್ ಪ್ರಕಟಿಸಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
