KARNATAKA NEWS/ ONLINE / Malenadu today/ Oct 13, 2023 SHIVAMOGGA NEWS
ಶಿವಮೊಗ್ಗದ ಮಾಚೇನಹಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಇರುವ ಉತ್ಪಾದನಾ ಘಟಕವೊಂದರ ಮೇಲೆ ನಿನ್ನೆ ತುಂಗಾನಗರ ಪೊಲೀಸರು ರೇಡ್ ಮಾಡಿದ್ದರು. ಕೋಳಿ, ಕುರಿ ತ್ಯಾಜ್ಯದಲ್ಲಿ ಕರುವಿನ ತಲೆಯು ಸೇರಿಕೊಂಡು, ಸಾಕುಪ್ರಾಣಿಗಳಿಗೆ ನೀಡುವ ಆಹಾರ ತಯಾರಿಸಲು ಬಳಕೆಯಾಗುತ್ತಿದೆ ಎಂಬುದು ರೇಡ್ಗೆ ಕಾರಣವಾಗಿತ್ತು. ಈ ಮಧ್ಯೆ ಈ ಘಟಕ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಎಸ್. ಶಿವಕುಮಾರ್ ರವರ ತಂದೆಯವರ ಹೆಸರಿನಲ್ಲಿರುವ ಜಾಗದಲ್ಲಿರೋದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿತ್ತು.
ಕೋಳಿ ತ್ಯಾಜ್ಯದಿಂದ ಉಪ ಉತ್ಪನ್ನಗಳನ್ನು ಮಾಚೇನಹಳ್ಳಿ ಕೈಗಾರಿಕಾ ವಲಯದ ಮಲ್ನಾಡ್ ಫ್ರೋರಿಚ್ ಎಂಬ ಘಟಕದಲ್ಲಿ ತಯಾರಿಸಲಾಗುತ್ತಿತ್ತು. ಶಿವಮೊಗ್ಗ ಹಾಗೂ ಭದ್ರಾವತಿಯ ಕೋಳಿ ಮಾಂಸದ ಅಂಗಡಿಗಳಿಂದ ಕೋಳಿಯ ತ್ಯಾಜ್ಯಗಳನ್ನು ಸಂಗ್ರಹಿಸಿ ಬಾಯಲ್ ಮಾಡಿ, ಸಾಕು ಪ್ರಾಣಿಗಳ ಫುಡ್ ಪ್ಯಾಕೇಟ್ಗಳನ್ನಾಗಿ ಮಾಡಲಾಗುತ್ತಿತ್ತು ಇದಕ್ಕಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಕಸಾಯಿ ಖಾನೆಗಳ ತ್ಯಾಜ್ಯ ಸಂಗ್ರಹಣೆಯ ಒಪ್ಪಂದಗಳನ್ನ ಮಾಡಿಕೊಂಡು ಘಟಕಕ್ಕೆ ತ್ಯಾಜ್ಯ ವಿಲೇವಾರಿಯಾಗುತ್ತಿತ್ತು.
ನಿನ್ನೆ ಈ ಘಟಕದಲ್ಲಿ ಕೋಳಿ ತ್ಯಾಜ್ಯದೊಂದಿಗೆ ಕರುವಿನ ತಲೆಯೊಂದು ಘಟಕಕ್ಕೆ ಬಂದಿದೆ. ತ್ಯಾಜ್ಯ ಪೂರೈಕೆಯಾದ ವಾಹನದಲ್ಲಿ ಕರುವಿನ ತಲೆ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ರೇಡ್ ನಡೆಸಿದ್ದಾರೆ. ತುಂಗಾನಗರ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್, ಪಾಲಿಕೆ ಆರೋಗ್ಯಾಧಿಕಾರಿ ಡಾ. ಎಸ್.ಟಿ.ರೇಖಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ಸಂಬಂಧ ಸುಮುಟೋ ಕೇಸ್ ದಾಖಲಿಸಿದ್ದಾರೆ.
ಪಾಲಿಕೆ ಜೊತೆಗೆ ಒಪ್ಪಂದದ ಮೂಲಕ ಸಂಗ್ರಹಿಸಲಾಗುತ್ತಿರುವ ತ್ಯಾಜ್ಯದ ನಡುವೆ ಕರುವಿನ ತಲೆ ಹೇಗೆ ಬಂತು ಎಂಬುದು ಒಂದು ಪ್ರಶ್ನೆಯಾದರೆ, ಪೊಲೀಸ್ ಇಲಾಖೆ ಜಾಗದ ಮಾಲೀಕರ ವಿರುದ್ಧವೂ ಕೇಸ್ ದಾಖಲಿಸಿದೆ. ಇದರಿಂದಾಗಿ ಮೇಯರ್ ಶಿವಕುಮಾರ್ ಕುಟುಂಬಕ್ಕೂ ಸಂಕಷ್ಟ ಎದುರಾಗುವ ಸಾಧ್ಯತೆ ಎನ್ನಲಾಗುತ್ತಿದೆ.
ಈ ಸಂಬಂಧ ಪೊಲೀಸ್ ಇಲಾಖೆ ಪ್ರಕಟಣೆ ನೀಡಿದ್ದು, ದಿನಾಂಕಃ 12-10-2023 ರಂದು ಬೆಳಗ್ಗೆ ಶಿವಮೊಗ್ಗ ನಗರದ ಮಾಚೇನಹಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮಲ್ನಾಡ್ ಪ್ರೋ ರೀಚ್ ಎಂಬ ಜಾಗದಲ್ಲಿ ಕಮಲೇಶ್ ಮತ್ತು ಆತನ ಸಹಚರರು ಹಣಗಳಿಸುವ ಉದ್ದೇಶದಿಂದ ಅಕ್ರಮವಾಗಿ ದನಗಳನ್ನು ಸಾಗಾಟ ಮಾಡಿ ನಂತರ ಅವುಗಳ ವಧೆ ಮಾಡಿ, ಅವುಗಳಿಂದ ಫೀಡಿಂಗ್ ಫುಡ್ ತಯಾರಿಸಿ ಲಾಭಕ್ಕಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು.
ಈ ಹಿನ್ನೆಲೆಯಲ್ಲಿ ಕುಮಾರ್ ಕುರಗುಂದ, ಪಿಎಸ್ಐ, ತುಂಗಾನಗರ ಪೊಲೀಸ್ ಠಾಣೆ ಮತ್ತು ಸಿಬ್ಬಂಧಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿದಾಗ ಚಿಕನ್ ವೇಸ್ಟೇಜ್ ರೀ ಕಂಡೀಷನಿಂಗ್ ಬಾಯ್ಲರ್ ಮಷಿನ್ ನ ಲಿಫ್ಟಿಂಗ್ ನ ಮೇಲೆ ಕರುವನ್ನು ವಧೆ ಮಾಡಿ ಅದರಿಂದ ಫೀಡಿಂಗ್ ಫುಡ್ ಅನ್ನು ತಯಾರಿಸಿ ಲಾಭಕ್ಕಾಗಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ.
ನಂತರ ಸ್ಥಳದಲ್ಲಿದ್ದ ಅಶೋಕ ಲೈ ಲ್ಯಾಂಡ್ ಗೂಡ್ಸ್ ವಾಹನ ಹಾಗೂ 12 ಫೀಡಿಂಗ್ ಫುಡ್ ನ ಚೀಲಗಳನ್ನು ವಶಕ್ಕೆ ಪಡೆದುಕೊಂಡು, ಆರೋಪಿತರಾದ ಕಮಲೇಶ್ ಮತ್ತು ಸಹಚರರು ಹಾಗೂ ಜಾಗದ ಮಾಲೀಕರ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 0390/2023 Cow Slaughter Act ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಇನ್ನಷ್ಟು ಸುದ್ದಿಗಳು