ತೀರ್ಥಹಳ್ಳಿ : ವಿದ್ಯುತ್ ಕಂಬ ಬಿದ್ದು ಯಕ್ಷಗಾನ ಕಲಾವಿದ ಸಾವು

ತೀರ್ಥಹಳ್ಳಿ: ಶೃಂಗೇರಿ– ಆಗುಂಬೆ ಮಾರ್ಗದ ಅಗಸರಕೋಣೆ ಗ್ರಾಮದ ಬಳಿ ಬುಧವಾರ ರಾತ್ರಿ ಚಲಿಸುತ್ತಿದ್ದ ಬೈಕ್‌ ಮೇಲೆ ವಿದ್ಯುತ್ ಕಂಬ ಮುರಿದು ಬಿದ್ದ ಪರಿಣಾಮ ಯಕ್ಷಗಾನ ಕಲಾವಿದರೊಬ್ಬರು ಮೃತಪಟ್ಟಿದ್ದಾರೆ.
ಬ್ರಹ್ಮಾವರ ತಾಲ್ಲೂಕಿನ ವಡ್ಡರ್ಸೆ ಸಮೀಪದ ಕುದುರೆಮನೆಬೆಟ್ಟು ಗ್ರಾಮದ ಸೂರಾಲು ಯಕ್ಷಗಾನ ಮೇಳದ ಕಲಾವಿದ ರಂಜಿತ್ (20) ಮೃತ ವ್ಯಕ್ತಿ.  ಬೈಕ್‌ನಲ್ಲಿದ್ದ ಇನ್ನೊಬ್ಬ ಕಲಾವಿದ ವಿನೋದ್‌ರಾಜ್ ಅಪಾಯದಿಂದ ಪಾರಾಗಿದ್ದಾರೆ. ಕೊಪ್ಪ ಸಮೀಪದ ಕವಡೇಕಟ್ಟೆಯಲ್ಲಿ ಬುಧವಾರ ನಡೆಯಬೇಕಿದ್ದ ಸೂರಾಲು ಯಕ್ಷಗಾನ ಮೇಳದ ಪ್ರದರ್ಶನ ಧಿಡೀರನೆ ಸುರಿದ ಮಳೆಯಿಂದಾಗಿ ರದ್ದಾದ ಕಾರಣ ಇಬ್ಬರೂ ಕಲಾವಿದರು ಬೈಕ್‌ನಲ್ಲಿ ತಮ್ಮ ಊರಿಗೆ ಹಿಂದಿರುಗುವ ವೇಳೆ ಅವಘಡ ಸಂಭವಿಸಿದೆ. ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Comment