ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ / ಹನೂರು ಫಾರೆಸ್ಟ್ ಎನ್ಕೌಂಟರ್ ಬಳಿಕ ಕಾಡಿನೊಳಗಿನ ಹಲವು ವಿಷಯಗಳು ಮಾತನಾಡಲು ಆರಂಭಿಸಿದೆ. ಅಲ್ಲದೆ ಕಾಡು ಪ್ರವೇಶಿಸಿ ಶಿಕಾರಿ ನಡೆಸ್ತಿರುವ ಪ್ರಕರಣಗಳನ್ನ ತಡೆಯಲು ಅರಣ್ಯ ಇಲಾಖೆ ತನ್ನ ಪ್ರಯತ್ನಗಳನ್ನ ಇನ್ನಷ್ಟು ಚುರುಕುಗೊಳಿಸಿದೆ. ಆದಾಗ್ಯು, ಅರಣ್ಯ ಇಲಾಖೆಗೆ ಶೆಡ್ಡು ಹೊಡೆದು ಶಿಕಾರಿಮಾಡುತ್ತಿರುವ ಪ್ರಕರಣಗಳು ಸುದ್ದಿಯಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ತೀರ್ಥಹಳ್ಳಿಯಲ್ಲಿ ಕಾಡುಕೋಣವೊಂದರ ಶಿಕಾರಿ ನಡೆಯಿತಾ (Suspected Gaur Poaching) ಎಂಬ ಅನುಮಾನ ಮೂಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ತೀರ್ಥಹಳ್ಳಿ-ಬಸವಾನಿ ಮಾರ್ಗ ಮಧ್ಯೆ ಹರಳಿಮಠ ಸಮೀಪ ಕಾಡುಕೋಣವೊಂದನ್ನು ಹತ್ಯೆ ಮಾಡಿ ಅದರ ಮಾಂಸವನ್ನು ತೆಗೆದುಕೊಂಡು ಹೋಗಿರುವ ಕುರುಹು ಕಾಣಿಸಿದೆ.
ಸ್ಥಳೀಯರ ಮಾಹಿತಿ ಪ್ರಕಾರ, ತಡರಾತ್ರಿ ಹರಳಿಮಠದ ಸುತ್ತಮುತ್ತ ಗುಂಡಿನ ಸದ್ದು ಕೇಳಿಸಿತ್ತು ಎನ್ನಲಾಗಿದೆ. ಬಳಿಕ ಪರಿಶೀಲಿಸಿದಾಗ ಕಾಡುಕೋಣದ ಕಳೆಬರ ಪತ್ತೆಯಾಗಿದ್ದು, ಮಾಂಸ ಪಾಲು ಮಾಡಿಕೊಂಡು ಹೋಗಿರುವ ದುಷ್ಕರ್ಮಿಗಳು, ಕಳೆಬರವನ್ನ ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದಾರೆ. ಘಟನೆಯ ಮಾಹಿತಿ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವನ್ಯಜೀವಿಯನ್ನು ಬೇಟೆಯಾಡಿ ಮಾಂಸಕ್ಕಾಗಿ ಹತ್ಯೆ ಮಾಡಿರುವ ಸಾಧ್ಯತೆಯ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
