ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಅಕ್ಕ ಪಡೆ ಮತ್ತೆ ಸುದ್ದಿಯಾಗಿದೆ. ಈ ಸಲ ಮತ್ತೊಮ್ಮೆ ಅಕ್ಕಪಡೆಯ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ. ಅವರ ಕೆಲಸದ ಬಗ್ಗೆ ಸ್ವತಃ ಎಸ್ಪಿ ನಿಖಿಲ್ ಬಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನಿಜ, ನಗರದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರನ್ನು ರಕ್ಷಿಸಿ, ಆಕೆಗೆ ಸೂಕ್ತ ಆಶ್ರಯ ಕಲ್ಪಿಸಿದೆ ಶಿವಮೊಗ್ಗ ಅಕ್ಕಪಡೆ
ಶಿವಮೊಗ್ಗ ಅಕ್ಕ ಪಡೆಗಿದೆ ಮಾನವೀಯ ಮುಖ
ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ಸಾರ್ವಜನಿಕರಿಗೆ ಅನಗತ್ಯವಾಗಿ ತೊಂದರೆ ನೀಡುತ್ತಿದ್ದಳು. ಆ ಬಗ್ಗೆ ಅಕ್ಕ ಪಡೆಗೆ ಮಾಹಿತಿ ಲಭ್ಯವಾಗಿತ್ತು. ತಕ್ಷಣ ಸ್ಥಳಕ್ಕೆ ಬಂದ ಅಕ್ಕ ಪಡೆಯ ಸಿಬ್ಬಂದಿಗೆ ಅಲ್ಲಿನ ಸನ್ನಿವೇಶ ಬೇರೆಯದ್ದೆ ಭಾವ ಮೂಡಿಸಿತ್ತು. ಏಕೆಂದರೆ, ಜನರಿಗೆ ಕಿಟಿಕಿಟಿ ಮಾಡುತ್ತಿದ್ದ ಮಹಿಳೆ ಮಾನಸಿಕ ಅಸ್ವಸ್ಥೆಯಾಗಿದ್ದಳು. ಆಕೆಯನ್ನ ಸಂಬಾಳಿಸುವದೆ ಕಷ್ಟವಾಗಿದ್ದರೂ ಸಹ ಅಕ್ಕಪಡೆ ಸಿಬ್ಬಂದಿ ತಾಳ್ಮೆ ವಹಿಸಿ ಆಕೆಯ ಮನವೊಲಿಸುವಲ್ಲಿ ಯಶಸ್ವಿಯಾದರು.
ಅಲ್ಲದೆ, ಆಕೆಗೆ ಯಾವುದೇ ಆಶ್ರಯವಿಲ್ಲದೆ ಅನಾಥ ಸ್ಥಿತಿಯಲ್ಲಿ ಬಸ್ ನಿಲ್ದಾಣದಲ್ಲಿ ಅಲೆಯುತ್ತಿರುವುದು ತಿಳಿದು ಆಕೆಗೆ ಆಸರೆ ಒದಗಿಸಲು ಮುಂದಾದರು. ಅವರನ್ನು ರಕ್ಷಿಸಿದ ಸಿಬ್ಬಂಧಿ ಅಂತಿಮವಾಗಿ ಅಸ್ವಸ್ಥ ಮಹಿಳೆಯನ್ನು, ರಾಜ್ಯ ಮಹಿಳಾ ನಿಲಯಕ್ಕೆ ಕರೆದೊಯ್ದು ದಾಖಲಿಸಿದ್ದಾರೆ. ಅಲ್ಲಿ ಆಕೆಗೆ ಸೂಕ್ತ ಆರೈಕೆ ಹಾಗೂ ಆಶ್ರಯ ಸಿಗಲಿದೆ. ಸದ್ಯ ಅಕ್ಕಪಡೆಯ ಈ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

