ಸಾಗರ ಟೌನ್​ ಸ್ಟೆಷನ್​ ಕೇಸ್​ : ಮೃತನ ಪತ್ನಿ, ಪ್ರಿಯಕರನ ಬಂಧನ! ಆಗಿದಿಷ್ಟು

ಮಲೆನಾಡು ಟುಡೆ ಸುದ್ದಿ / ಸಾಗರ / ಹೆಂಡತಿಯ ಅನೈತಿಕ ಸಂಬಂಧದ ವಿಚಾರವಾಗಿ ನಡೆದ ಗಲಾಟೆಯಲ್ಲಿ ಪತಿಯನ್ನು ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬಗ್ಗೆ ಮಲೆನಾಡು ಟುಡೆ ನಿನ್ನೆಯಷ್ಟೆ ವರದಿ ಮಾಡಿತ್ತು. ಈ ಬಗ್ಗೆ ಪೂರ್ತಿ ವಿವರವನ್ನು ಒದಗಿಸಿತ್ತು.

ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್​, ಜೆಪಿ ನಗರದಲ್ಲಿ ನಡೆದಿದ್ದು ಕೊಲೆ! ಪತ್ನಿ, ಪ್ರಿಯಕರನ ವಿರುದ್ಧ ಕೇಸ್! ಸಾಗರ ಪೇಟೆಯಲ್ಲಿ ನಡೆದಿದ್ದೇನು? ಎಂಬ ಹೆಸರಿನ ಅಡಿಯಲ್ಲಿ ಸಾಗರ ಟೌನ್​ನಲ್ಲಿ ನಡೆದ ಘಟನೆಯನ್ನು ವಿವರಿಸಿತ್ತು. ಈ ಬಗ್ಗೆ ಮತ್ತೊಮ್ಮೆ ಲಿಂಕ್ ಕ್ಲಿಕ್ ಮಾಡಿ ಓದಬಹುದು.

ಮುಂದುವರೆದು ಈ ಘಟನೆ ಸಂಬಂಧ ಪೊಲೀಸರು ಮೃತ ಪರಶುರಾಮನ ಪತ್ನಿ ಚೈತ್ರಾ ಹಾಗೂ ಮಂಜು ಅಲಿಯಾಸ್ ಟೀ ಪುಡಿ ಮಂಜು ಎಂಬಾತನನ್ನು ಬಂಧಿಸಿದ್ದಾರೆ. ಇವರಿಬ್ಬರ ನಡುವಿನ ಅನೈತಿಕ ಸಂಬಂಧವೇ ಘಟನೆಗೆ ಕಾರಣ ಎನ್ನಲಾಗಿದೆ.

ಸಾಗರ ಟೌನ್​ ಸ್ಟೆಷನ್​ ಕೇಸ್​ / ಪೊಲೀಸ್ ಇಲಾಖೆ ಪ್ರಕಾರ ನಡೆದಿದ್ದೇನು

ದಿನಾಂಕ 15-05-2026 ರಂದು ರಾತ್ರಿ ಇದೇ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಪರಶುರಾಮ್ ಮತ್ತು ಚೈತ್ರಾ ನಡುವೆ ತೀವ್ರ ಗಲಾಟೆ ನಡೆಯುತ್ತಿತ್ತು. ಅದೇ ಸಮಯಕ್ಕೆ ಸರಿಯಾಗಿ ಮಂಜು ಕೂಡ ಮನೆಯೊಳಗೆ ಪ್ರವೇಶಿಸಿದ್ದು, ಮಂಜು ಹಾಗೂ ಪರಶುರಾಮ್ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಪರಶುರಾಮ್ ಕುಡುಗೋಲನ್ನು ಕೈಯಲ್ಲಿ ಹಿಡಿದುಕೊಂಡಿದ್ದರೆ, ಮಂಜು ಕೈಯಲ್ಲಿ ಚಾಕು ಹಿಡಿದು ಪರಸ್ಪರ ಜೋರಾಗಿ ಕೂಗಾಡಿ ಜಗಳವಾಡಿದ್ದಾರೆ.

ಜಗಳ ವಿಕೋಪಕ್ಕೆ ತಿರುಗಿದಾಗ ಮಂಜು ತನ್ನ ಕೈಯಲ್ಲಿದ್ದ ಚಾಕುವಿನಿಂದ ಪರಶುರಾಮ್ ಅವರ ಹೊಟ್ಟೆಗೆ ತೀವ್ರವಾಗಿ ಚುಚ್ಚಿದ್ದಾನೆ. ತೀವ್ರ ನೋವಿನಲ್ಲಿ ಪರಶುರಾಮ್ ಅಮ್ಮ ಎಂದು ಕೂಗಿಕೊಳ್ಳುತ್ತಾ ಹೊಟ್ಟೆ ಹಿಡಿದು ಕುಸಿದುಬಿದ್ದಿದ್ದಾರೆ. ತಕ್ಷಣವೇ ಚೈತ್ರಾ, ಮಂಜುವಿಗೆ ಅಲ್ಲಿಂದ ಪರಾರಿಯಾಗುವಂತೆ ಸೂಚಿಸಿದ್ದಾಳೆ.

ನಂತರ ಚೈತ್ರಾ ಪಕ್ಕದ ಮನೆಯ ಮಹಿಳೆಯೊಬ್ಬರ ಸಹಾಯ ಪಡೆದು ಗಾಯಾಳು ಪರಶುರಾಮ್‌ ಅವರನ್ನು ಆಟೋದಲ್ಲಿ ಸಾಗರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾಳೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಂದು ರಾತ್ರಿ 12-00 ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಪರಶುರಾಮ್ ಕೊನೆಯುಸಿರೆಳೆದಿದ್ದಾರೆ. ಮಂಜುನಾಥ್ ಅಲಿಯಾಸ್ ಟೀ ಪುಡಿ ಮಂಜು ಚಾಕುವಿನಿಂದ ಚುಚ್ಚಿ ಈ ಕೊಲೆ ಮಾಡಿರುವುದು ಹಾಗೂ ಕೃತ್ಯದ ಸಂಪೂರ್ಣ ಮಾಹಿತಿ ಮೃತನ ಪತ್ನಿ ಚೈತ್ರಾಳಿಗೆ ತಿಳಿದಿದ್ದರೂ ಆಕೆ ಅದನ್ನು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಸಾಗರ ಟೌನ್​ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್

ಆರೋಪಿಗಳಾದ ಮಂಜು ಹಾಗೂ ಚೈತ್ರಾ ವಿರುದ್ಧ ಮೃತ ಪರಶುರಾಮ್ ಅವರನ್ನು ಕೊಲೆ ಮಾಡಿರುವ ಆರೋಪದಡಿ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಕಲಂ 103, 238, 332, 333 ಸಹಿತ 3(5) ಬಿಎನ್‌ಎಸ್ ಕಾಯ್ದೆಯನ್ವಯ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖಾಧಿಕಾರಿ ಸಾಗರ ಟೌನ್ ಪೊಲೀಸ್ ಠಾಣೆಯ ಪಿಐ ಆರೋಪಿಗಳಾದ ಚೈತ್ರಾ ಮತ್ತು ಮಂಜು ಅಲಿಯಾಸ್ ಟೀ ಪುಡಿ ಮಂಜು ಇಬ್ಬರನ್ನೂ ಬಂಧಿಸಿ ಕೋರ್ಟ್​ಗೆ ಪ್ರೊಡ್ಯೂಸ್ ಮಾಡಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw