Government Land Encroachment / ಮಲೆನಾಡು ಟುಡೆ ಸುದ್ದಿ / ಸಾಗರ/ ತಾಲೂಕಿನ ಕೆ.ಜಿ.ಕೊಪ್ಪ ಗ್ರಾಮದ ಸರ್ವೆ ನಂ.24ರಲ್ಲಿನ ಸರಕಾರಿ ಭೂಮಿಯಲ್ಲಿ ನಡೆದಿದ್ದ ಒತ್ತುವರಿಯನ್ನು ಶುಕ್ರವಾರ ತಹಸೀಲ್ದಾರ್ ಡಾ. ಆರ್. ಪ್ರತಿಭಾ ನೇತೃತ್ವದಲ್ಲಿ ಕಂದಾಯ ಇಲಾಖೆ ತೆರವುಗೊಳಿಸಿತು.
ತಾಲೂಕಿನ ತಾಳಗುಪ್ಪ ಹೋಬಳಿ ಕೆ.ಜಿ.ಕೊಪ್ಪ ಗ್ರಾಮದ ಸರ್ವೆ ನಂ. 24ರಲ್ಲಿನ ಸರಕಾರಿ ಭೂಮಿಯಲ್ಲಿ ನಡೆದಿದ್ದ ಒತ್ತುವರಿಯನ್ನು ಕಂದಾಯ ಇಲಾಖೆ ತೆರವುಗೊಳಿಸಿತು. ತಹಸೀಲ್ದಾರ್ ಡಾ. ಆರ್. ಪ್ರತಿಭಾ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇತ್ತೀಚೆಗೆ ಹಾಕಲಾಗಿದ್ದ ಬೇಲಿಯನ್ನು ತೆರವುಗೊಳಿಸಲಾಯಿತು. ಇಲ್ಲಿ ಈ ಹಿಂದೆಯೂ ಒತ್ತುವರಿ ನಡೆದಿದ್ದ ಹಿನ್ನೆಲೆಯಲ್ಲಿ ಇಲಾಖೆ ಕ್ರಮ ಕೈಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಸಂದರ್ಭ ಮಾತನಾಡಿದ ತಹಸೀಲ್ದಾರ್ ಡಾ. ಆರ್.ಪ್ರತಿಭಾ ‘ತಾಲೂಕಿನಲ್ಲಿ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸರಕಾರಿ ಭೂಮಿಯನ್ನು ಸಂರಕ್ಷಿಸುವುದು ಕಂದಾಯ ಇಲಾಖೆ ಜವಾಬ್ದಾರಿಯಾಗಿದ್ದು, ಯಾವುದೇ ಅಕ್ರಮ ಒತ್ತುವರಿಗೆ ಅವಕಾಶ ನೀಡುವುದಿಲ್ಲ’ ಎಂದು ಎಚ್ಚರಿಸಿದರು. ಕಂದಾಯ ನಿರೀಕ್ಷಕ ವಿನಾಯಕ ಹಾಗೂ ಗ್ರಾಮ ಸಹಾಯಕರಾದ ಸುರೇಂದ್ರ ಮತ್ತು ಜಯಂತ್ ಭಾಗವಹಿಸಿದ್ದರು.
