SHIVAMOGGA | MALENADUTODAY NEWS | ಮಲೆನಾಡು ಟುಡೆ Feb 6, 2025
ಶಿವಮೊಗ್ಗದ ಪ್ರಸಿದ್ದ ನಾಟಿ ವೈದ್ಯ ತೀರ್ಥಹಳ್ಳಿ ತಾಲ್ಲೂಕು ಕೋಣಂದೂರಿನ ಸಮೀಪದ ರಾಮನಸರ ಮಂಗಳದ ಶಿವಣ್ಣಗೌಡರು ನಿಧನರಾಗಿದ್ದಾರೆ. ಅವರು ಇವತ್ತು ಬೆಳಗ್ಗೆ ನಿಧನರಾಗಿದ್ದಾರೆ.
ತಮ್ಮ ಎಂಟನೇ ವಯಸ್ಸಿಗೆ ತಂದೆ ಜೊತೆಗೆ ನಾಟಿ ವೈದ್ಯ ಪದ್ದತಿಯನ್ನು ಕಲಿತ ಶಿವಣ್ಣಗೌಡರು ಕಾಲು ನೋವು, ಮಂಡಿ ನೋವು , ಮೂಳೆ ಮುರಿತ, ವಾತಕಸ, ನಿಶ್ಯಕ್ತಿ, ಬೆನ್ನುನೋವು ಸೇರಿದಂತೆ ವಿವಿಧ ನೋವುಗಳಿಗೆ ಔಷಧಿಗಳನ್ನ ನೀಡುತ್ತಾ ಬಂದವರು ಇವರ ಬಳಿ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು , ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ, ಮಾಜಿ ಸಚಿವೆ ಮನೋರಮಾ ಮಧ್ವರಾಜ್, ಗೌರಿಲಂಕೇಶ್, ಚಂದ್ರಶೇಖರ್ ಕಂಬಾರರವರು ಒಳಗೊಂಡಂತೆ ವಿದೇಶಿಯರು ಸಹ ಚಿಕಿತ್ಸೆ ಪಡೆದಿದ್ದಾರೆ. ಮಂಗಳದಲ್ಲಿರುವ ಇವರ ಮನೆಯಲ್ಲಿ ನೀಡುವ ನೋವು ನಿವಾರಕ ಎಣ್ಣೆಗಾಗಿ ಜನರು ಇಲ್ಲಿ ಸರತಿ ಸಾಲಿನಲ್ಲಿ ಇವತ್ತಿಗೂ ಕಾದು ನಿಲ್ಲುತ್ತಾರೆ.
ಪುತ್ರ ಶ್ರೀಕಾಂತ್ರವರ ಜೊತೆಗೂಡಿ ಪಾರಂಪರಿಕವಾಗಿ ಕಲಿತ ನಾಟಿ ವೈದ್ಯ ಪದ್ದತಿಯಲ್ಲಿ ತೀರ್ಥಹಳ್ಳಿ, ಮಂಡಗದ್ದೆ, ಹೆದ್ದಾರಿಪುರ ಸುತ್ತಮುತ್ತಲಿಂದ ಗಿಡಮೂಲಿಕೆಗಳನ್ನು ತಂದು ಔಷಧಿ ಮಾಡಿ ಅದನ್ನು ಜನರಿಗೆ ನೀಡುತ್ತಿದ್ದ ಇವರು ನೋವು ನಿವಾರಣೆಯಲ್ಲಿ ಎತ್ತಿದ್ದ ಕೈ ಆಗಿದ್ದರು. ಇವರ ಹೆಸರು ದೂರದ ಅಮೆರಿಕಾದವರೆಗೂ ವ್ಯಾಪಿಸಿತ್ತು.
ವಿವಿಧ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದ ಶಿವಣ್ಣ ಗೌಡ್ರು ತಮ್ಮನ್ನೇ ನಿರೀಕ್ಷಿಸಿ ಬರುವ ಜನರಿಗೆ ಅವರ ನೋವನ್ನ ಅರಿತು ಮದ್ದು ನೀಡುತ್ತಿದ್ದರು. ಶುದ್ಧ ಹಸುವಿನ ಸಪ್ಪೆ ತುಪ್ಪದ ಜೊತೆಗೆ ಒಂದಷ್ಟು ಮೂಲಿಕೆಗಳನ್ನ ನೀಡುತ್ತಿದ್ದ ಇವರು ದೇಹವನ್ನು ಪರೀಕ್ಷಿಸುವ ರೀತಿಯೇ ವಿಶಿಷ್ಟವಾಗಿತ್ತು. ಇಳಿವಯಸ್ಸಿನಲ್ಲಿಯು ನಾಟಿ ಔಷಧ ನೀಡಲು ತಮ್ಮ ಪುತ್ರ ಜೊತೆಗೆ ಕೈ ಜೋಡಿಸುತ್ತಿದ್ದ ಅವರು ಇವತ್ತು ನಿಧನರಾಗಿದ್ದು, ಅವರ ನಿಧನಕ್ಕೆ ಹಲವರು ಸಂತಾಪ ಸೂಚಿಸಿದ್ದಾರೆ.
86 ವರ್ಷದ ಶಿವಣ್ಣಗೌಡರು ಇವತ್ತು ಬೆಳಗ್ಗೆ ಐದು ಗಂಟೆ ಸುಮಾರಿಗೆ ವಯೋಸಹಜ ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ. ಅವರ ಅಂತಿಮ ದರ್ಶನಕ್ಕೆ ಮಂಗಳದಲ್ಲಿಯೇ ವ್ಯವಸ್ಥೆ ಮಾಡಲಾಗಿದ್ದು ಸಂಜೆ ನಾಲ್ಕು ಗಂಟೆ ಹೊತ್ತಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
SUMMARY | Shivannagouda, a famous herbalist from Shivamogga, of Ramanasara Mangala near Konandur in Thirthahalli taluk, has passed away. He passed away this morning.
KEY WORDS | Nativydya Shivannagouda no more, from Shivamogga, Ramanasara Mangala near Konandur , Thirthahalli taluk,