Gold and Cash Stolen / ಮಲೆನಾಡು ಟುಡೆ ಸುದ್ದಿ / ಭದ್ರಾವತಿ / ತಾಲೂಕಿನ ಪ್ರದೇಶವೊಂದರಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಆಶಾ ಕಾರ್ಯಕರ್ತೆಯೊಬ್ಬರ ಮನೆಯ ಮುಂಭಾಗಿಲ ಬೀಗ ಮುರಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕದ್ದೊಯ್ದ ಬಗ್ಗೆ ವರದಿಯಾಗಿದೆ. ಕಳುವಾದ ಸ್ವತ್ತಿನ ಒಟ್ಟು ಮೌಲ್ಯ 389500 ರೂಪಾಯಿಗಳೆಂದು ಅಂದಾಜಿಸಲಾಗಿದ್ದು, ಈ ಕುರಿತು ಹೊಸಮನೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಆಗಸ್ಟ್ 01 ರಂದು ರಾತ್ರಿ ಈ ಘಟನೆ ನಡೆದಿದೆ. ಆ ದಿನ ಮನೆಯ ಮುಂಭಾಗಿಲಿಗೆ ಬೀಗ ಹಾಕಿಕೊಂಡು ಭದ್ರಾವತಿಗೆ ತೆರಳಿದ್ದರು ಸಂತ್ರಸ್ತರು. ಆಗಸ್ಟ್ 02 ರಂದು ಮನೆಗೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಬಾಗಿಲ ಬೀಗ ಮುರಿದ ಕಳ್ಳರು, ಗೋದ್ರೇಜ್ ಬೀರುವಿನ ಬಾಗಿಲು ತೆರೆದು ಒಟ್ಟು 27.5 ಗ್ರಾಂ ತೂಕದ ಚಿನ್ನಾಭರಣ, 109 ಗ್ರಾಂ ತೂಕದ ಬೆಳ್ಳಿಯ ಒಡವೆ ಹಾಗೂ ಕ್ಯಾಶ್ ಕದ್ದೊಯ್ದಿದ್ದಾರೆ. ಬಂಗಾರದ ಸರ, ಬಂಗಾರದ ಹ್ಯಾಂಗಿಂಗ್ಸ್ ಮತ್ತು ಓಲೆ ಮಾಟಿ, ಬೆಳ್ಳಿಯ ಸರ, ಕಾಲುಚೈನ್, ಬ್ರೇಸ್ಲೆಟ್ ಹಾಗೂ ಉಂಗುರಗಳನ್ನ ಕಳುವು ಮಾಡಿದ್ದಾರೆ. ಸದ್ಯ ಪ್ರಕರಣದ ದಾಖಲಿಸಿರುವ ಪೊಲೀಸರು ತನಿಖೆ ನಡೆಸ್ತಿದ್ದಾರೆ.
