Brahma Rathotsava ಶಿವಮೊಗ್ಗ : ಮಹೇಂದ್ರ ಗಿರಿ ಎಂದೇ ಖ್ಯಾತಿ ಪಡೆದಿರುವ ನಗರದ ಪಿಳ್ಳಯ್ಯನಗಿರಿ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ಸನ್ನಿಧಿಯಲ್ಲಿ ಮೇ 09ರಂದು ವೈಭವದ ಬ್ರಹ್ಮರಥೋತ್ಸವ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಲಿದೆ.
ಶಿವಮೊಗ್ಗ: ವೆಂಕಟೇಶ್ ನಗರದಲ್ಲಿ ಮಟಮಟ ಮಧ್ಯಾಹ್ನವೇ ಕಳ್ಳತನ, 19 ಲಕ್ಷ ಮೌಲ್ಯದ ಚಿನ್ನ, ದುಡ್ಡು ಮಾಯ! ಹೇಗಾಯ್ತು ಘಟನೆ
ಈ ಮಹೋತ್ಸವದ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಹಲವು ದಿನಗಳ ಕಾಲ ವೈವಿಧ್ಯಮಯ ಧಾರ್ಮಿಕ ವಿಧಿವಿಧಾನಗಳನ್ನು ಅತ್ಯಂತ ಶ್ರದ್ಧಾಭಕ್ತಿಗಳಿಂದ ಆಯೋಜಿಸಲಾಗಿದೆ. ಇದರ ಅಂಗವಾಗಿ ಗುರುವಾರ ಬೆಳಿಗ್ಗೆ 09.00 ಗಂಟೆಯಿಂದ ಸ್ವಾಮಿಗೆ ವಿಶೇಷ ಅಭಿಷೇಕ, ಅಲಂಕಾರ ಸೇವೆ, ಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. ಅಂದು ಸಂಜೆ 06.00 ಗಂಟೆಗೆ ಅನುಜ್ಞೆ, ಪುಣ್ಯಾಹ ವಾಚನ, ಮೃತ್ತಿಕಾ ಸಂಗ್ರಹಣ, ಅಂಕುರಾರ್ಪಣೆ, ರಕ್ಷಾಬಂಧನ, ಮಂಗಳಾರತಿ ಮತ್ತು ತೀರ್ಥ-ಪ್ರಸಾದ ವಿನಿಯೋಗ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಮೇ 08ರ ಶುಕ್ರವಾರ ಬೆಳಿಗ್ಗೆ 09.00 ಗಂಟೆಗೆ ದೇವಾಲಯದಲ್ಲಿ ನಿತ್ಯಸೇವೆ, ದ್ವಾರತೋರಣ, ಕುಂಭಾರಾಧನೆ, ಹೋಮ, ಧ್ವಜಾರೋಹಣ, ಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ ನೆರವೇರಲಿದೆ. ಸಂಜೆ 06.00 ಗಂಟೆಗೆ ಸ್ವಾಮಿಯ ಗರುಡೋತ್ಸವ, ವಸಂತ ಸೇವೆ, ಶ್ರೀನಿವಾಸ ಕಲ್ಯಾಣೋತ್ಸವ ಜರುಗಲಿದ್ದು, ತರುವಾಯ ಮಂಗಳಾರತಿ ಮತ್ತು ತೀರ್ಥ-ಪ್ರಸಾದ ವಿನಿಯೋಗ ನಡೆಯಲಿದೆ.
ಬ್ರಹ್ಮ ರಥೋತ್ಸವದ ಪ್ರಮುಖ ದಿನವಾದ ಮೇ 09ರ ಶನಿವಾರ ಬೆಳಿಗ್ಗೆ 07.30ರಿಂದಲೇ ನಿತ್ಯಸೇವೆಗಳು ಆರಂಭವಾಗಲಿದ್ದು, ಯಾಗ ಶಾಲೆಯಲ್ಲಿ ರಥಾಂಗ ಹೋಮಾದಿಗಳು ನಡೆಯಲಿವೆ. ಬೆಳಿಗ್ಗೆ 09.00 ಗಂಟೆಯಿಂದ ಮಂಟಪೋತ್ಸವ ನೆರವೇರಲಿದ್ದು, ಮಧ್ಯಾಹ್ನ 12.00ಕ್ಕೆ ಸಲ್ಲುವ ಶುಭ ಅಭಿಜಿನ್ ಮುಹೂರ್ತದಲ್ಲಿ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿಯವರ ರಥಾರೋಹಣ ಮತ್ತು ಬ್ರಹ್ಮ ರಥೋತ್ಸವ ಅತ್ಯಂತ ಸಡಗರದಿಂದ ಜರುಗಲಿದೆ.
ಮೇ 10ರ ಭಾನುವಾರ ಬೆಳಿಗ್ಗೆ 09.00 ಗಂಟೆಯಿಂದ ನಿತ್ಯಸೇವೆ, ಕುಂಕುಮೋತ್ಸವ ಹಾಗೂ 11.00 ಗಂಟೆಗೆ ತುಂಗಾ ನದಿಯಲ್ಲಿ ಅವಭೃತ ಸ್ನಾನ, ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. ಅಂದು ಸಂಜೆ 07.00 ಗಂಟೆಗೆ ಯಾಗಶಾಲೆಯಲ್ಲಿ ರಥಾಂಗ, ಪೂರ್ಣಾಹುತಿ, ಧ್ವಜ ಅವರೋಹಣ, ಕುಂಭ ಪ್ರೋಕ್ಷಣೆ, ಮಂಗಳಾರತಿ ಮತ್ತು ತೀರ್ಥ-ಪ್ರಸಾದ ವಿನಿಯೋಗ ನೆರವೇರಲಿದೆ.
ಮೇ 11ರ ಸೋಮವಾರ ಬೆಳಿಗ್ಗೆ 09.00 ಗಂಟೆಗೆ ಮಹಾಭಿಷೇಕ, 11.00 ಗಂಟೆಗೆ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗೂ ಸಂಜೆ 07.00 ಗಂಟೆಗೆ ನಡೆಯುವ ಶಯನೋತ್ಸವದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ದರ್ಶನ ಪಡೆದು ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಪ್ರಕಟಣೆ ವಿನಂತಿಸಿದೆ.
Brahma Rathotsava at Pillayyanagiri Temple

