Belur Gopalakrishna ಶಿವಮೊಗ್ಗ: ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣದಿಂದ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧವಾಗಿದ್ದ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರನ್ನು ಸಮಾಧಾನಪಡಿಸುವಲ್ಲಿ ಕೊನೆಗೂ ಸಿಎಂ ಹಾಗೂ ಡಿ.ಕೆ. ಶಿವಕುಮಾರ್ ಯಶಸ್ವಿಯಾಗಿದ್ದಾರೆ. ನಿನ್ನೆ ರಾತ್ರಿಯೇ ಬೇಳೂರು ಅವರಿಗೆ ಕರೆ ಮಾಡಿದ್ದ ಮುಖ್ಯಮಂತ್ರಿಗಳು, ಯಾವುದೇ ನಿರ್ಧಾರಕ್ಕೆ ಹೋಗಬೇಡಿ, ನನ್ನ ಬಳಿ ಬನ್ನಿ ಎಂದು ಆಹ್ವಾನಿಸಿದ್ದರು. ಬೆಳಿಗ್ಗೆ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಶಾಸಕ ಬೇಳೂರು ಗೋಪಾಲಕೃಷ್ಣ ತಮ್ಮ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದು, ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.
ಮುರುಡೇಶ್ವರದ ಹೋಂ ಸ್ಟೇಯಲ್ಲಿ ಶಿವಮೊಗ್ಗದ ಯುವಕ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ?
ಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದ ನನಗೆ ಹಾಗೂ ನನ್ನ ಬೆಂಬಲಿಗರಿಗೆ ತೀವ್ರ ನೋವಾಗಿದೆ. ಕಾರ್ಯಕರ್ತರೆಲ್ಲ ಹತಾಶೆಗೊಂಡಿದ್ದಾರೆ. ಆದರೆ, ಪಕ್ಷ ಎಂದು ಬಂದಾಗ ಮತ್ತು ನಾನು ರಾಜೀನಾಮೆ ನೀಡಲು ತೀರ್ಮಾನಿಸಿದಾಗ ಮುಖ್ಯಮಂತ್ರಿಗಳೇ ಕರೆ ಮಾಡಿ ರಾತ್ರಿ ಫೋನ್ ಮಾಡಿದ್ದರು. ಬೆಳಿಗ್ಗೆ ಕರಸಿ ಮಾತನಾಡಿದ್ದಾರೆ. ಮುಂದೆ ಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ದೃಷ್ಟಿಯಿಂದ ಮತ್ತು ಪಕ್ಷದಲ್ಲಿ ಯಾವುದೇ ಗೊಂದಲ ಮೂಡಬಾರದು ಎಂಬ ಕಾರಣಕ್ಕೆ, ಅಧಿಕಾರ ಇಲ್ಲದಿದ್ದರೂ ಪರವಾಗಿಲ್ಲ, ಸಿಎಂ ಬೆಂಬಲಕ್ಕೆ ನಿಲ್ಲಲು ನಿರ್ಧರಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಸಚಿವ ಸ್ಥಾನದ ಭರವಸೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಯಾವುದೇ ಭರವಸೆಯನ್ನು ಕೇಳಲಿಲ್ಲ. ಏಕೆಂದರೆ ಮಂತ್ರಿ ಸ್ಥಾನದ ಪ್ರಕ್ರಿಯೆಗಳೆಲ್ಲ ಮುಗಿದುಹೋಗಿವೆ. ಹಿಂದೆ ನನಗೆ ಯಾವುದೇ ಅಡೆತಡೆಯಿಲ್ಲದೆ ಟಿಕೆಟ್ ನೀಡಿದ್ದು ಡಿ.ಕೆ. ಶಿವಕುಮಾರ್ ಸಾಹೇಬರು. ಅವರ ಪ್ರೀತಿಗೋಸ್ಕರ ಹಾಗೂ ಪಕ್ಷದ ನಿಷ್ಠೆಗಾಗಿ ನಾನು ಸರ್ಕಾರ ಮತ್ತು ಪಕ್ಷದ ಜೊತೆಗಿರುತ್ತೇನೆ. ಕಾರ್ಯಕರ್ತರು ಮತ್ತು ಬ್ಲಾಕ್ ಕಾಂಗ್ರೆಸ್ ನಾಯಕರು ಯಾರೂ ರಾಜೀನಾಮೆ ನೀಡಬಾರದು. ನ್ಯಾಯಗಳೆಲ್ಲ ಉಲ್ಟಾಪಲ್ಟಾ ಆಗಿದ್ದರೂ, ನಾನು ಯಾರ ಮೇಲೂ ಅಥವಾ ಹೈಕಮಾಂಡ್ ಮೇಲೂ ದೂರು ಹೇಳುವುದಿಲ್ಲ, ಪಕ್ಷಕ್ಕಾಗಿ ನಿಷ್ಠೆಯಿಂದ ಕೆಲಸ ಮಾಡುತ್ತೇನೆ ಎಂದಿದ್ದಾರೆ.
