ಮಲೆನಾಡು ಟುಡೆ ಸುದ್ದಿ / ಭದ್ರಾವತಿ / ಭದ್ರಾವತಿ ತಾಲ್ಲೂಕಿನ ಆನವೇರಿ ಕೈಮರ ರಸ್ತೆಯಲ್ಲಿ ನಡೆದಿದ್ದ ಆಕ್ಸಿಡೆಂಟ್ ಕೇಸ್ವೊಂದರಲ್ಲಿ. ಬೈಕ್ ಚಾಲಕರೊಬ್ಬರಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ. ಪ್ರಕರಣದ ಆರೋಪಿ ನಿಖಿಲ್ಗೆ ಭದ್ರಾವತಿಯ ಒಂದನೇ ಎ.ಸಿ.ಜೆ ಮತ್ತು ಜೆಎಂಎಫ್ ನ್ಯಾಯಾಲಯ 1 ವರ್ಷ 1 ತಿಂಗಳು 15 ದಿನ ಕಾರಾಗೃಹ ಶಿಕ್ಷೆ ಹಾಗೂ ₹11 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಪ್ರಕರಣದ ವಿವರ ಹೀಗಿದೆ.
ಬೈಕ್ ಡಿಕ್ಕಿಯಾಗಿ ಪಾದಚಾರಿ ಸಾವನ್ನಪ್ಪಿದ್ದರು
2021ರ ಡಿಸೆಂಬರ್ 27ರಂದು ಈ ಘಟನೆ ನಡೆದಿತ್ತು. ಭೋಜರಾಜ್ ಎಂಬುವವರು ಆನವೇರಿ ಕೈಮರ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿತ್ತು. ನಿಖಿಲ್ ಅವರು ಬಜಾಜ್ ಪಲ್ಸರ್ ಬೈಕ್ನಲ್ಲಿ ಆನವೇರಿ ಕಡೆಯಿಂದ ಮಲ್ಲಾಪುರ ಕಡೆಗೆ ಬರುತ್ತಿದ್ದರು. ಈ ವೇಳೆ ಬೈಕ್ ಭೋಜರಾಜ್ರಿಗೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಭೋಜರಾಜ್ ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.
ಘಟನೆಗೆ ಸಂಬಂಧಿಸಿದಂತೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ತನಿಖಾಧಿಕಾರಿ ಲಕ್ಷ್ಮೀಪತಿ ಅವರು ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಭದ್ರಾವತಿಯ ಒಂದನೇ ಎ.ಸಿ.ಜೆ ಮತ್ತು ಜೆಎಂಎಫ್ ನ್ಯಾಯಾಲಯವು ಬೈಕ್ ಚಾಲಕ ನಿಖಿಲ್ಗೆ 1 ವರ್ಷ 1 ತಿಂಗಳು 15 ದಿನಗಳ ಕಾರಾಗೃಹ ಶಿಕ್ಷೆ ಹಾಗೂ ₹11 ಸಾವಿರ ದಂಡ ವಿಧಿಸಿ ಆದೇಶಿಸಿದೆ. ಪ್ರಕರಣದಲ್ಲಿ ಅಪರ ಸರ್ಕಾರಿ ಅಭಿಯೋಜಕ ತಿಪ್ಪೇಶ್ ರಾವ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
