ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಸಾಮಾನ್ಯವಾಗಿ ಲೋಕಾಯುಕ್ತ ಪ್ರಕರಣಗಳು ತಾರ್ಕಿಕ ಅಂತ್ಯ ಕಾಣಲ್ಲ ಅನ್ನುವ ಚರ್ಚೆ ಜನರಲ್ಲಿದೆ. ಆದರೆ ಶಿವಮೊಗ್ಗ ಲೋಕಾಯುಕ್ತ ಪ್ರಕರಣವೊಂದನ್ನ ಕೊನೆಮಟ್ಟಿಸಿದ್ದಾರೆ. ಅಷ್ಟೆ ಅಲ್ಲದೆ ಪ್ರಕರಣದಲ್ಲಿ ಲಂಚ ಪಡೆದಿದ್ದ ಉಪ ತಹಶೀಲ್ದಾರ್ಗೆ ಕೋರ್ಟ್ ಮೂಲಕ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ವಾರ್ತಾ ಇಲಾಖೆ ನೀಡಿರುವ ಪ್ರಕಟಣೆಯ ವಿವರ ಹೀಗಿದೆ.
ಹುಟ್ಟಿನಿಂದ ಮಾತಿನ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗೆ ಅಂಗವಿಕಲರ ಪಿಂಚಣಿ ಸೌಲಭ್ಯ ಕಲ್ಪಿಸಲು ₹10,000 ಲಂಚಕ್ಕೆ ಬೇಡಿಕೆಯಿಟ್ಟು, ಮುಂಗಡವಾಗಿ ₹5,000 ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ಉಪ ತಹಶೀಲ್ದಾರ್ ಪುಷ್ಪಲತಾ (Deputy Tahsildar) ಅವರಿಗೆ ನ್ಯಾಯಾಲಯ 4 ವರ್ಷಗಳ ಜೈಲು ಶಿಕ್ಷೆ ಹಾಗೂ ₹40,000 ದಂಡ ವಿಧಿಸಿದೆ.2017ರ ಸೆಪ್ಟೆಂಬರ್ 21ರಂದು ನಡೆದಿದ್ದ ಈ ಪ್ರಕರಣ ಇದೀಗ ತೀರ್ಪು ಪಡೆದುಕೊಂಡಿದೆ.
ನಡೆದ ಘಟನೆಯ ವಿವರ
ಪುಷ್ಪಲತಾ ಅವರು ಭದ್ರಾವತಿ ತಾಲೂಕಿನ ಕಲ್ಲಿಹಾಳ್ ನಾಡಕಚೇರಿಯಲ್ಲಿ ಉಪ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಭದ್ರಾವತಿ ತಾಲೂಕಿನ ಡಿ.ಬಿ. ಹಳ್ಳಿ ನಿವಾಸಿ ಗಿರೀಶ್ ಅವರು ತಮ್ಮ ತಂದೆಗೆ ಅಂಗವಿಕಲರ ಪಿಂಚಣಿ ಸೌಲಭ್ಯ ಪಡೆಯಲು ಕಲ್ಲಿಹಾಳ್ ನಾಡಕಚೇರಿಗೆ ತೆರಳಿದ್ದರು. ಆದರೆ ಪಿಂಚಣಿ ಸೌಲಭ್ಯ ಕಲ್ಪಿಸಲು ಉಪ ತಹಶೀಲ್ದಾರ್ ಪುಷ್ಪಲತಾ ₹10,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಗಿರೀಶ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಗಿರೀಶ್ ನೀಡಿದ್ದ ದೂರಿನ ಅನ್ವಯ 2017ರ ಸೆಪ್ಟೆಂಬರ್ 21ರಂದು ಭದ್ರಾವತಿ ತಾಲೂಕು ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ರೆಡ್ ಹ್ಯಾಂಡ್ ಆಗಿ ಗಿರೀಶ್ ಅವರಿಂದ ಮುಂಗಡವಾಗಿ ₹5,000 ಲಂಚ ಪಡೆಯುತ್ತಿದ್ದಾಗ ಪುಷ್ಪಲತಾ ಅವರನ್ನ ಹಣದ ಸಮೇತ ಬಂಧಿಸಿದ್ದರು. ಆಗ ಪ್ರಕರಣದ ತನಿಖಾಧಿಕಾರಿಯಾಗಿದ್ದ ಪೊಲೀಸ್ ಅಧಿಕಾರಿ ತಿಪ್ಪೇಸ್ವಾಮಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು.
ಇದೀಗ ಸುದೀರ್ಘ ವಿಚಾರಣೆ ನಡೆಸಿದ ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯ ಪುಷ್ಪಲತಾ ಅವರಿಗೆ 4 ವರ್ಷಗಳ ಜೈಲು ಶಿಕ್ಷೆ ಮತ್ತು ₹40,000 ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಸುಂದರ್ ರಾಜ್ ವಾದ ಮಂಡಿಸಿದ್ದರು.
