ಮಲೆನಾಡು ಟುಡೆ ಸುದ್ದಿ / ಸಾಗರ / ಜಿಲ್ಲೆಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಡುವೆ ಪ್ರತಿಷ್ಟೆ ಅಡ್ಡ ಬರುವುದು ವಿಶೇಷವೇನಲ್ಲ ಇದೀಗ ಅಂತಹದ್ದೊಂದು ಪ್ರಹಸನಕ್ಕೆ ಸಾಗರ ತಾಲ್ಲೂಕು ಸಾಕ್ಷಿಯಾಗಿದೆ. ಸಾಗರ ತಾಲ್ಲೂಕು ತಹಶೀಲ್ದಾರ್ ಆಗಿ ಇತ್ತೀಗಷ್ಟೆ ವರ್ಗಾವಣೆಯಾಗಿದ್ದ ಡಾ.ಆರ್. ಪ್ರತಿಭಾ ರವರು (Sagar Tahsildar) ವಿವಿಧ ರೇಡ್ಗಳ ಮೂಲಕ ಸುದ್ದಿಯಾಗಿದ್ದರು. ಜಂಬಿಟ್ಟಿಗೆ ಕ್ವಾರಿಗಳ ಮೇಲೆ ರೇಡ್ ಮಾಡಿದ್ದ ಅವರು ಒತ್ತುವರಿ ತೆರವುಗೊಳಿಸಿ ಸುದ್ದಿಯಾಗಿದ್ದರು. ಇವರ ರೇಡ್ ಕಾರ್ಯಾಚರಣೆಗಳು ಮಾಧ್ಯಮಗಳಲ್ಲಿ ತುಸು ಜೋರಾಗಿ ಸದ್ದುಮಾಡಿದ್ದವು. ಆದರೆ ಇನ್ಮೇಲೆ ರೇಡ್ ಸುದ್ದಿಗಳನ್ನ ಮೀಡಿಯಾ ಕೊಡುವುದಕ್ಕಿಂತ ಮೊದಲು ಇಲಾಖಾ ಹಂತದಲ್ಲಿ ಚರ್ಚಿಸಿ ಅಂತಾ ಶಾಸಕ ಬೇಳೂರು ಗೋಪಾಲಕೃಷ್ಣ ವಾರ್ನಿಂಗ್ ಕೊಟ್ಟಿದ್ದಾರೆ. ಅಷ್ಟೆಅಲ್ಲದೆ ಪ್ರಚಾರ ತಗೊಬೇಡಿ, ಕೆಲಸ ಮಾಡಿ ಅಂತನೂ ಎಚ್ಚರಿಸಿರುವ ಶಾಸಕರು, ಕೆಲಸ ಮಾಡದಿದ್ದರೇ ಶಿವಮೊಗ್ಗಕ್ಕೆ ವರ್ಗಾವಣೆ ಖಚಿತ ಎಂದಿದ್ದಾರೆ.
ನಿನ್ನೆ ದಿನ ಸಾಗರದ ಉಪವಿಭಾಗೀಯ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡ್ತಾ ಶಾಸಕ ಬೇಳೂರು ಗೋಪಾಲಕೃಷ್ಣರವರು ಪ್ರಚಾರವನ್ನು ಬಿಟ್ಟು ಕೆಲಸ ಮಾಡಿ. ಆಡಳಿತವನ್ನು ಚುರುಕುಗೊಳಿಸಲು 15 ದಿನಗಳ ಕಾಲಾವಕಾಶ ನೀಡಲಾಗುವುದು. ಅಷ್ಟರೊಳಗೆ ಸುಧಾರಣೆ ಕಾಣದಿದ್ದರೆ ವರ್ಗಾವಣೆ ಅನಿವಾರ್ಯ ಎಂದಿದ್ದಾರೆ.
‘ನೀವು ಉತ್ತಮವಾಗಿ ಕೆಲಸ ಮಾಡುತ್ತೀರಿ ಎಂದು ನೀಡಿದ ಭರವಸೆಯ ಹಿನ್ನೆಲೆಯಲ್ಲಿ ಸಾಗರಕ್ಕೆ ನೇಮಕ ಮಾಡಲಾಗಿತ್ತು. ಆದರೆ ಕಲ್ಲು ಕ್ವಾರಿ ಸೇರಿದಂತೆ ಇತರ ವಿಷಯಗಳಲ್ಲಿ ತೋರಿಸಿದ ಆಸಕ್ತಿ ಮತ್ತು ಅದರಿಂದ ಪ್ರಚಾರ ಪಡೆಯಲು ತೋರಿಸಿದ ಉತ್ಸಾಹವನ್ನು ಜನರ ಕೆಲಸ ಮಾಡುವುದರಲ್ಲಿ ತೋರಿಸುತ್ತಿಲ್ಲ. ಪ್ರಚಾರದ ಬದಲು ಉತ್ತಮ ಕೆಲಸಕ್ಕೆ ಆದ್ಯತೆ ನೀಡಿ. ಯಾವುದೇ ದಾಳಿ ನಡೆಸಿದರೂ ಅದರ ಮಾಹಿತಿಯನ್ನು ಪತ್ರಿಕೆಗಳಿಗೆ ನೀಡುವುದಕ್ಕಿಂತ ಮೊದಲು ಇಲಾಖಾ ಹಂತದಲ್ಲಿ ಚರ್ಚಿಸಬೇಕು’ ಎಂದು ತಾಕೀತು ಮಾಡಿದರು.
ತಹಶೀಲ್ದಾರ್ ಕಚೇರಿಯಲ್ಲಿ ನಿಮ್ಮ ಮಾತನ್ನು ಯಾರೂ ಕೇಳುತ್ತಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ನೀವು ಬಲಿಷ್ಠರೋ ಅಥವಾ ಕಚೇರಿಯ ಸಿಬ್ಬಂದಿ ಬಲಿಷ್ಠರೋ ಎಂಬುದೇ ಅರ್ಥವಾಗುತ್ತಿಲ್ಲ. ಮುಂದಿನ 15 ದಿನಗಳಲ್ಲಿ ಎಲ್ಲವೂ ಸರಿಯಾಗಬೇಕು. ಇಲ್ಲವಾದರೆ ನಿಮ್ಮ ವಿರುದ್ಧ ಕ್ರಮ ಜರುಗಿಸಲಾಗುವುದು ಎಚ್ಚರಿಸಿದ್ದಾರೆ. ತಹಶೀಲ್ದಾರ್ ಕಚೇರಿಯ ಟಪಾಲ್ ವಿಭಾಗ ಹಾಗೂ ಆನಂದಪುರ ನಾಡಕಚೇರಿಯ ಮಂಜುನಾಥ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ದೂರುಗಳಿವೆ. ಅವರನ್ನು ತಕ್ಷಣ ವರ್ಗಾವಣೆ ಮಾಡಬೇಕು ಎಂದು ಸೂಚಿಸಿದರು. ವರದಹಳ್ಳಿ ದೇವಸ್ಥಾನಕ್ಕೆ ರಚಿಸಿರುವ ಸಮಿತಿಯ ವಿಚಾರದಲ್ಲಿ ಗ್ರಾಮ ಲೆಕ್ಕಿಗರೊಬ್ಬರು ಸಮಿತಿ ಸದಸ್ಯರನ್ನು ಹೆದರಿಸಿದ್ದಾರೆ ಎಂಬ ಆರೋಪದ ಬಗ್ಗೆಯೂ ಪ್ರಸ್ತಾಪಿಸಿದ ಶಾಸಕರು, ಇದು ಏನನ್ನು ತೋರಿಸುತ್ತದೆ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ಸದ್ಯ ಸಾಗರ ಶಾಸಕರ ವಾರ್ನಿಂಗ್ ಟಾಕ್ ಚರ್ಚೆಗೂ ಕಾರಣವಾಗಿದೆ. ಜಂಬಿಟ್ಟಿಗೆ ಕ್ವಾರಿಗಳ ಮೇಲೆ ರೇಡ್ ಮಾಡಿದ್ದಕ್ಕೆ ಅಸಮಾಧಾನಗೊಂಡರೆ ಶಾಸಕರು ಎಂಬ ಮಾತುಗಳು ಸಹಜವಾಗಿಯೇ ಚರ್ಚೆಯಲ್ಲಿ ಪಾಲ್ಗೊಂಡಿದೆ. ಈ ಚರ್ಚೆ ಇನ್ನಷ್ಟು ಮುಂದುವರಿಯುವ ಸೂಚನೆಗಳು ಸ್ಪಷ್ಟವಾಗಿದೆ.
