ಮಲೆನಾಡು ಟುಡೆ ಸುದ್ದಿ / ಎನ್.ಆರ್.ಪುರ / ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಭೈರನಕಟ್ಟೆ ಸಮೀಪದ ಭದ್ರಾ ಹಿನ್ನೀರಿನಲ್ಲಿ (Bhadra Backwaters) ಈಜಲು ಇಳಿದ ಶಿವಮೊಗ್ಗದ ಯುವಕ ನೀರುಪಾಲಾಗಿರುವ ಬಗ್ಗೆ ನಿನ್ನೆ ದಿನ ವರದಿಯಾಗಿದೆ. ಚಿಕ್ಕಮಗಳೂರಿನ ವರದಿಯ ಪ್ರಕಾರ, ನಡೆದ ಘಟನೆ ವಿವರ ಹೀಗಿದೆ. ಶಿವಮೊಗ್ಗ ಜಿಲ್ಲೆಯ ಬೊಮ್ಮನಕಟ್ಟೆ ಆಶ್ರಯ ಬಡಾವಣೆ ನಿವಾಸಿ ನಿಖಿಲ್ ಆರ್. ಸಿಂಗ್ (23) ಮೃತಪಟ್ಟ ಯುವಕ. ನಿಖಿಲ್ ತನ್ನ ಮೂವರು ಸ್ನೇಹಿತರೊಂದಿಗೆ ಮಂಗಳವಾರ ಸಂಜೆ ಭದ್ರಾ ಹಿನ್ನೀರು ಪ್ರದೇಶಕ್ಕೆ ತೆರಳಿದ್ದ ಎನ್ನಲಾಗಿದೆ. ಆತನ ಬರ್ತಡೆ ಹಿನ್ನೆಲೆಯಲ್ಲಿ ಆತ ಮತ್ತು ಮತ್ತಾತನ ಸ್ನೇಹಿತರು ಪಾರ್ಟಿ ನಡೆಸಿದ್ದಾರೆ. ಬಳಿಕ ನಿಖಿಲ್ ಈಜಲು ನೀರಿಗೆ ಇಳಿದಿದ್ದ. ಈ ವೇಳೆ ನಿಖಿಲ್ ನೀರಿನಲ್ಲಿ ಮುಳುಗಿದ್ದು, ಮತ್ತೆ ಮೇಲೆ ಬರಲಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಶೋಧ ಕಾರ್ಯಾಚರಣೆ ನಡೆಸಿ ನಿಖಿಲ್ನ ಮೃತದೇಹವನ್ನು ಹೊರತೆಗೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
