Cheetah Patrol ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮುಂಬರುವ ಈದ್ ಮಿಲಾದ್ ಹಾಗೂ ಗೌರಿ–ಗಣೇಶ ಹಬ್ಬಗಳ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಚುರುಕುಗೊಳಿಸಿದೆ. ಈ ನಿಟ್ಟಿನಲ್ಲಿ ಸಿಟಿಯಲ್ಲಿ ಚೀತಾ ಗಸ್ತು ಪಡೆಯನ್ನು ನಿಯೋಜಿಸಲಾಗಿದೆ. ಅಲ್ಲದೆ ಜಿಲ್ಲೆಯ ವಿವಿದೆಡೆ ರೂಟ್ ಮಾರ್ಚ್, ಶಾಂತಿ ಸಭೆ, ಪೊಲೀಸ್ ಸಿಬ್ಬಂದಿಗೆ ಬ್ರೀಫಿಂಗ್ ಹಾಗೂ ಫ್ಲೆಕ್ಸ್–ಬ್ಯಾನರ್ ಮುದ್ರಣ ಅಂಗಡಿ ಮಾಲೀಕರ ಸಭೆಗಳನ್ನು ನಡೆಸುವ ಮೂಲಕ ಬಂದೋಬಸ್ತ್ ವಿಚಾರದಲ್ಲಿ ಪೊಲೀಸ್ ಇಲಾಖೆ ತನ್ನದೆ ಆದ ತಾಲೀಮು ನಡೆಸುತ್ತಿದೆ.
ಹಬ್ಬಗಳ ನಡುವೆ ಸಿಟಿಯಲ್ಲಿ ಪೊಲೀಸರ ಕೈಗೆ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಚೀತಾ ಜಾರಿ ಮಾಡಲಾಗಿದೆ. ಈ ಚೀತಾ ಪಡೆಯ ಸಿಬ್ಬಂದಿಯಲ್ಲಿ ತಮ್ಮ ವ್ಯಾಪ್ತಿಯಲ್ಲಿ ಪ್ರತಿ ಕ್ಷಣ ರೌಂಡ್ ಹಾಕುತ್ತಲೇ ಇರುತ್ತದೆ. ಇನ್ಫಾರ್ಮೇಶನ್ ಸಿಕ್ಕ ತಕ್ಷಣ ಕೆಲವೇ ಕ್ಷಣಗಳಲ್ಲಿ ಸ್ಪಾಟ್ನಲ್ಲಿರುತ್ತಾರೆ. ಪ್ರತಿ ಏರಿಯಾಗಳನ್ನು ಸೂಕ್ಷ್ಮವಾಗಿ ಗಮನಿಸುವ ಚೀತಾ, ಅನಾವಶ್ಯಕ ಕಿರಿಕಿರಿಗಳನ್ನ ಸಹ ಜನರಿಂದ ತಪ್ಪಿಸುತ್ತಾರೆ. ಈ ನಿಟ್ಟಿನಲ್ಲಿ ನಿನ್ನೆಯಿಂದ ಚೀತಾ ಪಡೆಯನ್ನು ನಿಯೋಜಿಸಿರುವ ಎಸ್ಪಿ ನಿಖಿಲ್ ಬಿ. ತಮ್ಮ ಇಲಾಖೆಯ ಹಿರಿಯ ಅಧಿಕಾರಿಗಳ ಮೂಲಕ ಬ್ರೀಫಿಂಗ್ ಮಾಡಿಸಿದ್ದಾರೆ. ಕರ್ತವ್ಯಕ್ಕೆ ನಿಯೋಜಿಸಲಾದ ಸಿಬ್ಬಂದಿಗೆ ಪ್ರತ್ಯೇಕವಾಗಿ ಬ್ರೀಫಿಂಗ್ ನಡೆಸಲಾಗಿದ್ದು, ಅವರು ನಿರ್ವಹಿಸಬೇಕಾದ ಕರ್ತವ್ಯ ಮತ್ತು ಪಾಲಿಸಬೇಕಾದ ಸೂಚನೆ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉಳಿದಂತೆ ನಗರದ ವಿವಿಧ ಪ್ರದೇಶಗಳಲ್ಲಿ ಮುಂಜಾಗ್ರತಾ ಗಸ್ತು ನಡೆಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸ್ ಉಪಸ್ಥಿತಿಯನ್ನು ಹೆಚ್ಚಿಸುವುದು ಹಾಗೂ ಹಬ್ಬಗಳ ಸಂದರ್ಭದಲ್ಲಿ ಪರಿಸ್ಥಿತಿಯ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ಚೀತಾ ಗಸ್ತು ಪಡೆ ಕಾರ್ಯನಿರ್ವಹಿಸಲಿದೆ. ಇದರ ಭಾಗವಾಗಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ತಮ್ಮ ವ್ಯಾಪ್ತಿಯಲ್ಲಿನ ಪರಿಸ್ಥಿತಿಯ ಕುರಿತು ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ತೀರ್ಥಹಳ್ಳಿಯಲ್ಲಿ ಪೊಲೀಸರ ರೂಟ್ ಮಾರ್ಚ್
ಉಳಿದಂತೆ, ಈದ್ ಮಿಲಾದ್ ಹಾಗೂ ಗೌರಿ–ಗಣೇಶ ಹಬ್ಬಗಳ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಪೇಟೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ರೂಟ್ ಮಾರ್ಚ್ ನಡೆಸಿದ್ದಾರೆ. ಭದ್ರಾವತಿಯಲ್ಲಿ ಡಿವೈಎಸ್ಪಿ ನೇತೃತ್ವದಲ್ಲಿ ಹಳೇ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಫ್ಲೆಕ್ಸ್ ಹಾಗೂ ಬ್ಯಾನರ್ ಪ್ರಿಂಟಿಂಗ್ ಅಂಗಡಿ ಮಾಲೀಕರ ಸಭೆ ನಡೆಸಲಾಗಿದೆ. ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿಯೂ ಮುಂಬರುವ ಈದ್ ಮಿಲಾದ್ ಹಾಗೂ ಗಣೇಶ ಹಬ್ಬಗಳ ಹಿನ್ನೆಲೆಯಲ್ಲಿ ಶಾಂತಿ ಸಭೆ ಆಯೋಜಿಸಲಾಗಿತ್ತು ಸಾಗರ ಉಪವಿಭಾಗದ ಎಎಸ್ಪಿ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಹಬ್ಬಗಳ ಸಂದರ್ಭದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಕುರಿತು ಅಗತ್ಯ ಮುಂಜಾಗ್ರತಾ ವಿಚಾರಗಳನ್ನು ಚರ್ಚಿಸಲಾಗಿದೆ.
