e-Buses for Shivamogga / ಮಲೆನಾಡು ಟುಡೆ ಸುದ್ದಿ / ಬೆಂಗಳೂರು / ಕೇಂದ್ರ ಸರ್ಕಾರದ ‘PM-eBus Sewa’ (ಪಿಎಂ ಇ-ಬಸ್ ಸೇವಾ) ಯೋಜನೆಯಡಿ ಶಿವಮೊಗ್ಗ ನಗರಕ್ಕೆ 50 ಎಲೆಕ್ಟ್ರಿಕ್ ಬಸ್ ಮಂಜೂರಾಗಿದೆ. ಆದರೆ ಇದುವರೆಗೂ ಅದು ಶಿವಮೊಗ್ಗ ತಲುಪಿಲ್ಲ. ಹೀಗಾಗಿ ಅವುಗಳನ್ನ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಬೇಕು ಅಂತಾ ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಕೆ. ಗೌಡ ಅವರು ಸಾರಿಗೆ ಸಚಿವ ಭೈರತಿ ಸುರೇಶ್ ಅವರ ಬಳಿ ರಿಕ್ವೆಸ್ಟ್ ಮಾಡಿದ್ದಾರೆ.
ಈ ಸಂಬಂಧ ಬೆಂಗಳೂರಲ್ಲಿ ಇವತ್ತು ಸಾರಿಗೆ ಸಚಿವರನ್ನು ಖುದ್ದಾಗಿ ಭೇಟಿ ಮಾಡಿದ ಚೇತನ್ ಕೆ. ಗೌಡ ,ಜಿಲ್ಲೆಯ ವಿವಿಧ ಗ್ರಾಮೀಣ ಪ್ರದೇಶಗಳಿಂದ ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು, ವಿವಿಧ ಕ್ಷೇತ್ರಗಳ ಕಾರ್ಮಿಕರು, ಸರ್ಕಾರಿ ಹಾಗೂ ಖಾಸಗಿ ವಲಯದ ಉದ್ಯೋಗಿಗಳು ಮತ್ತು ಸಾರ್ವಜನಿಕರು ಶಿವಮೊಗ್ಗ ಸಿಟಿಗೆ ಓಡಾಡ್ತಿದ್ದಾರೆ. ಆದರೆ ಜನರ ಅಗತ್ಯಕ್ಕೆ ತಕ್ಕಂತೆ ಇನ್ನಷ್ಟು ಬಸ್ಗಳ ಅವಶ್ಯಕತೆ ಇದೆ. ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳ ಸಂಚಾರ ಹೆಚ್ಚಿರುವ ಮಾರ್ಗಗಳಲ್ಲಿ ಬಸ್ ಸೌಲಭ್ಯದ ಅಗತ್ಯ ಜಾಸ್ತಿಯಿದೆ.
ಮೇಲಾಗಿ ಗ್ಯಾರಂಟಿ ಸ್ಕೀಮ್ನಿಂದಾಗಿ ಬಸ್ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಬಸ್ ರಶ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಮಂಜೂರಾಗಿರುವ 50 ಪಿಎಂ ಇ-ಬಸ್ಗಳನ್ನು ಸೇವೆಗೆ ತಂದರೆ ಮಹಿಳೆಯರು, ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಲಿದೆ ಅಂತಾ ಮನವಿ ಮಾಡಿದ್ದಾರೆ. ಮೇಲಾಗಿ ಇ ಬಸ್ಗಳಿಗೆ ಅಗತ್ಯವಿರುವ ಇ-ಚಾರ್ಜಿಂಗ್ ಮೂಲಸೌಕರ್ಯಗಳ ಒದಗಿಸುವಂತೆ ಮನವಿ ಮಾಡಿದ್ದಾರೆ.
ಇನ್ನೂ ಮನವಿ ಕಾಪಿ ಪಡೆದು ಮಾತನಾಡಿದ ಸಾರಿಗೆ ಸಚಿವರು ಈ ಕುರಿತು ಶೀಘ್ರ ಒಂದು ಇತ್ಯರ್ಥಕ್ಕೆ ಬರುವ ಭರವಸೆ ನೀಡಿದ್ದಾರೆ ಎಂದು ಚೇತನ್ ತಮ್ಮ ಪ್ರಕಟಣೆಯಲ್ಲಿ ವಿವರಿಸಿದ್ದಾರೆ. ಇನ್ನೂ ಭೇಟಿ ವೇಳೆ ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಹಾಗೂ ಹೆಬ್ಬಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ವಿ. ಬಾಲಾಜಿ ಮತ್ತು ಶ್ರೀಜಿತ್ ಉಪಸ್ಥಿತರಿದ್ದರು.
