S.N. Channabasappa ಶಿವಮೊಗ್ಗ : ವಾಲ್ಮೀಕಿ ಹಗರಣದಲ್ಲಿ ಜಾಮೀನಿನ ಮೇಲೆ ಹೊರಬಂದಿರುವ ನಾಗೇಂದ್ರ ಅವರಿಗೆ ಪುನಃ ಸಚಿವ ಸ್ಥಾನ ನೀಡಿದ್ದು ಸರಿಯಲ್ಲ, ನಾಗರ ಪಂಚಮಿಯ ಸಂದರ್ಭದಲ್ಲಿ ನಾಗೇಂದ್ರರಂತಹ ದುಷ್ಟರಿಗೆ ಹಾಲೇರೆಯಲು ನಮಗೆ ಇಷ್ಟವಿಲ್ಲ ಎಂದು ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ ರಾಜ್ಯ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಶಿವಮೊಗ್ಗದಲ್ಲಿ ಕಂಠೀರವ ಸ್ಟುಡಿಯೋ ಹಾಗೂ ಕಿರು ಫಿಲ್ಮ್ ಸಿಟಿ ನಿರ್ಮಾಣ: ಜಮೀನು ಪರಿಶೀಲನೆ
ಇಂದು ಶಿವಮೊಗ್ಗ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನಾಗೇಂದ್ರ ಬುಸ್ ಅನ್ನುವುದಿಲ್ಲ, ವಿಚಿತ್ರವಾದ ಮಾನಸಿಕತೆ ಇರುವ ವ್ಯಕ್ತಿ. ಸದ್ಯ ಸಿಎಂ ಹಾಗೂ ಡಿಸಿಎಂ ಡಿಕೆಶಿ ಅವರ ಆಡಳಿತ ನಮಗೆ ಬೇಸರ ತಂದಿದೆ. ತಮ್ಮ ಮೇಲೆ ಯಾವುದೇ ಬೇಲ್ ಇಲ್ಲ, ನಾನು ಜಾಮೀನಿನ ಮೇಲೆ ಇಲ್ಲ ಎಂದು ಡಿಕೆಶಿ ಹೇಳುತ್ತಾರೆ. ಆದರೆ ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ಪಡೆದಿರುವುದು ಜಾಮೀನು ಅಲ್ವೇ? ಡಿಕೆಶಿ ಅವರ ಮೇಲೆ ಇರುವುದು ಅಕ್ರಮ ಆಸ್ತಿ ಗಳಿಕೆ ಪ್ರಕರಣ ಎಂದು ಅವರಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.
ಮುಂದುವರಿದು ಮಾತನಾಡಿದ ಶಾಸಕರು, ನಾಗೇಂದ್ರರಂತಹವರಿಗೆ ಸಚಿವ ಸ್ಥಾನ ನೀಡಿದ್ದರಿಂದ ಹಗರಣವನ್ನು ಮುಚ್ಚಿಹಾಕುವ ಕೆಲಸವನ್ನು ಅವರು ಓಡಾಡಿಕೊಂಡು ಮಾಡುತ್ತಿದ್ದಾರೆ. ಸಿಎಂ ಹಾಗೂ ಡಿಕೆಶಿ ಈ ರೀತಿಯ ಹೇಳಿಕೆಗಳನ್ನು ನೀಡುವುದು ಶೋಭೆ ತರುವುದಿಲ್ಲ. ಡಿಕೆ ಶಿವಕುಮಾರ್ ಅವರಿಂದ ಇಂತಹ ಹೇಳಿಕೆಗಳನ್ನು ನಿರೀಕ್ಷಿಸಿರಲಿಲ್ಲ ಎಂದ ಅವರು, ನಾಗೇಂದ್ರ ಅವರನ್ನು ತಕ್ಷಣವೇ ಸಚಿವ ಸ್ಥಾನದಿಂದ ಕೈಬಿಡಬೇಕೆಂದು ಒತ್ತಾಯಿಸಿದರು.
ಇದೇ ವೇಳೆ ಸರ್ಕಾರದ ಪೆನ್ಷನ್ ಯೋಜನೆಯಲ್ಲಿನ ವಿಳಂಬ ಹಾಗೂ ಪರಿಶೀಲನೆ ಹೆಸರಿನಲ್ಲಿ ಧನಸಹಾಯ ತಡೆ ಹಿಡಿದಿರುವ ಬಗ್ಗೆ ಮಾತನಾಡಿದ ಅವರು ಅಂಗವಿಕಲರಿಗೆ ಹಾಗೂ ವೃದ್ಧಾಪ್ಯ ವೇತನ ಪಡೆಯುವವರಿಗೆ ಪೆನ್ಷನ್ ಏಕಾಏಕಿ ನಿಲ್ಲಿಸಿದ್ದೀರಾ ಎಷ್ಟು ವರ್ಷಗಳಿಂದ ಸರ್ಕಾರ ಪೆನ್ಷನ್ ನೀಡುತ್ತಿದೆ, ಈಗ್ಯಾಕೆ ಹೊಸದಾಗಿ ಪರಿಶೀಲನೆ ಮಾಡಲು ಹೊರಟಿದ್ದೀರಾ ಆರು ಆರು ತಿಂಗಳಿಂದ ಪೆನ್ಷನ್ ನೀಡಿಲ್ಲ. ಶಿವಮೊಗ್ಗ ನಗರವೊಂದರಲ್ಲೇ 12,000 ಫಲಾನುಭವಿಗಳಿಗೆ ಪೆನ್ಷನ್ ದೊರೆಯಬೇಕಿತ್ತು, ಅದರಲ್ಲಿ 6000 ಮಂದಿಗೆ ಪೆನ್ಷನ್ ನಿಲ್ಲಿಸಲಾಗಿದೆ. ಸರ್ಕಾರ ನಡೆಸಲು ಬಡವರ, ವೃದ್ಧರ ಹಾಗೂ ಅಂಗವಿಕಲರ ಪೆನ್ಷನ್ ಹಣವೇ ಬೇಕು ಎಂದರೆ ಅದು ನಾಚಿಕೆಗೇಡಿನ ಸಂಗತಿ. ಒಮ್ಮೆ ಕೈಕಾಲು ಕಳೆದುಕೊಂಡ ಅಂಗವಿಕಲರಿಗೆ ಮತ್ತೆ ಕಾಲು ಬಂದುಬಿಡುತ್ತದೆಯೇ ಸರ್ಕಾರದ ಈ ವಿಚಿತ್ರ ಮಾನಸಿಕತೆ ಅರ್ಥವಾಗುತ್ತಿಲ್ಲ. ಇದರ ವಿರುದ್ಧ ಶೀಘ್ರವೇ ಫಲಾನುಭವಿಗಳ ಜೊತೆ ಬೃಹತ್ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
